ಮಂಗಳೂರು ಶಾಂತಿ ಸಭೆಗಿಲ್ಲ ಆಹ್ವಾನ, ಮುಖ್ಯಕಾರ್ಯದರ್ಶಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿ ದೂರು
ಮಂಗಳೂರು, ಜುಲೈ 17: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ನಡೆಯುವ ಅಹಿತಕರ ಘಟನೆಗೆ ಸಂಬಂಧಿಸಿ ಜಿಲ್ಲಾಡಳಿತವು ಕಳೆದ ಗುರುವಾರದಂದು ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಿತ್ತು. ಈ ಸಭೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟಿಗೆ ಆಹ್ವಾನ ನೀಡಲಿಲ್ಲ ಎಂದು ಕಮಿಟಿಯ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಇಂತಹ ಸಂಘಟನೆಯನ್ನು ಶಾಂತಿಸಭೆಗೆ ಆಹ್ವಾನಿಸದಿರಲು ಕಾರಣ ಏನೆಂಬುದಕ್ಕೆ ಜಿಲ್ಲಾಧಿಕಾರಿ ನಮಗೆ ಉತ್ತರಿಸಬೇಕು. ಅಲ್ಲದೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಸರಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ," ಎಂದರು.
"ಕಳೆದ 49 ವರ್ಷಗಳಿಂದ ಸೆಂಟ್ರಲ್ ಕಮಿಟಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದೆ. ಕೋಮು ಸೌಹಾರ್ದಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ನಮ್ಮನ್ನು ಶಾಂತಿ ಸಭೆಗೆ ಕರೆಯದೇ ಇದದ್ದು ನಿಜಕ್ಕೂ ಬೇಸರವಾಗಿದೆ," ಎಂದರು.
"ಡಿಜಿಪಿ ದತ್ತ ಮಂಗಳೂರಿಗೆ ಬಂದರೂ ಕೂಡ ಮುಸ್ಲಿಂ ಸೆಂಟ್ರಲ್ ಕಮಿಟಿಯ ಪ್ರತಿನಿಧಿಗಳ ಜೊತೆ ಸಮಾಲೋಚಿಸುವ ಪ್ರಯತ್ನವನ್ನೂ ಮಾಡಿಲ್ಲ. ಮತ್ತು ಸೆಂಟ್ರಲ್ ಕಮಿಟಿ ಸೌಹಾರ್ದಕ್ಕಾಗಿ ನಡೆಸಿದ ಪ್ರಯತ್ನಗಳೆಲ್ಲಾ ಜಿಲ್ಲೆಯ ಪ್ರಜ್ಞಾವಂತರಿಗೆ ತಿಳಿದಿರುವ ವಿಚಾರ. ಆದರೆ, ಜಿಲ್ಲಾಧಿಕಾರಿ ಈ ಸಂಘಟನೆಯನ್ನು ಶಾಂತಿಸಭೆಗೆ ಕರೆಯದೆ ದೂರವಿಟ್ಟಿರುವುದು ಯಾತಕ್ಕೆ ಎಂಬುದು ತಿಳಿಯುತ್ತಿಲ್ಲ," ಎಂದು ಮುಹಮ್ಮದ್ ಮಸೂದ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಮಿಟಿಯ ಪದಾಧಿಕಾರಿಗಳಾದ ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ.ಅಶ್ರಫ್, ಹನೀಫ್ ಹಾಜಿ ಮತ್ತಿತರು ಉಪಸ್ಥಿತರಿದ್ದರು.