ಆಕರ್ಷಕ ಕರ್ನಾಟಕದ ಕರಾವಳಿಗೆ ಆಧುನಿಕತೆಯ ಸ್ಪರ್ಶ
ಉಡುಪಿಗೆ ಬಂದರೆ ಶ್ರೀಕೃಷ್ಣ ಮಠದಲ್ಲಿ ಭೋಜನ ಮಾಡದೆ ಮರಳುವುದೇ ಎನ್ನುವುದು ಹಲವರ ಪ್ರಶ್ನೆ. ಈರುಳ್ಳಿ ಬೆಳ್ಳುಳ್ಳಿ ರಹಿತವಾದ ಸಾತ್ವಿಕ ಮಸಾಲ ಆರೋಗ್ಯಕ್ಕೂ ಪೂರಕ ಎನ್ನುತ್ತಾರೆ ಪಾಕ ತಜ್ಞರು.
ಮಂಗಳೂರು, ಆಗಸ್ಟ್ 05 : ಕಡಲ ತಡಿಯಲ್ಲಿ ತಣ್ಣನೆ ಬೀಸುವ ತಂಗಾಳಿಯನ್ನು ಆಹ್ಲಾದಿಸುತ್ತ ಸೈಕಲ್ ಸವಾರಿ, ಅತ್ಯಾಧುನಿಕ ಸೌಲಭ್ಯಗಳೊಂದಿಗೆ ದೇಶಿ ಸಂಸ್ಕೃತಿಯನ್ನು ಸವಿಯುತ್ತ, ಮನಮೋಹಕ ಸೂರ್ಯಾಸ್ತ ದೃಶ್ಯಾವಳಿಗೆ ಸಾಕ್ಷಿಯಾಗುವುದೆಂದರೆ ಹೇಗಿರುತ್ತೆ? ಇಂತಹದೊಂದು ಆಲೋಚನೆಯೇ ರೋಮಾಂಚನ!
ಈ ಎಲ್ಲಾ ಪರಿಕಲ್ಪನೆಗಳು ರಾಜ್ಯದ ಕರಾವಳಿಯ ಸಮುದ್ರ ಕಿನಾರೆಗಳಲ್ಲಿ ಸಾಕಾರಗೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ರಾಜ್ಯದ ಕರಾವಳಿ ಅತ್ಯಾಕರ್ಷಕ ಕಡಲ ತಡಿಗಳು ದೇಶದ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಗುರುತಿಸಲ್ಪಡುತ್ತಿವೆ.

ಈ ತಾಣಗಳನ್ನು ಅಭಿವೃದ್ಧಿ ಪಡಿಸುವ ದೃಷ್ಟಿಯಿಂದ ಕೇಂದ್ರ ಸರಕಾರ 'ಸ್ವದೇಶ್ ದರ್ಶನ್' ಯೋಜನೆಯಡಿ ಅಭಿವೃದ್ದಿಗೆ ಚಿಂತನೆ ನಡೆದಿದೆ. ಈ ನಿಟ್ಟಿನಲ್ಲಿ 100 ಕೋಟಿ ರೂಪಾಯಿ ವೆಚ್ಚದ ಯೋಜನೆ ರೂಪಿಸಲು ನಿರ್ದೇಶನ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಸುರತ್ಕಲ್, ಉಡುಪಿ ಜಿಲ್ಲೆಯ ತ್ರಾಸಿ, ಮಲ್ಪೆ, ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ, ಓಂ ಬೀಚ್, ಮಾವಿನ ಕುರ್ವೆ, ಕುಡ್ಲೆ ಬೀಚ್, ಟಾಗೋರ್ ಬೀಚ್ ಗಳನ್ನು ಈ ಯೋಜನೆಯಡಿ ಗುರುತಿಸಲಾಗಿದ್ದು, ಐಪಿಇ ಗ್ಲೋಬಲ್ ಸಂಸ್ಥೆ ಯೋಜನೆಯ ರೂಪುರೇಷೆ ತಯಾರಿಸಿದೆ.

ಬೀಚ್ ಗಳಲ್ಲಿ ಯಾವೆಲ್ಲ ಸೌಲಭ್ಯಕ್ಕೆ ಒತ್ತು :
* ಬೀಚ್ ಸುತ್ತಮುತ್ತ ಪ್ರದೇಶದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸುವ ಮೂಲಕ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಒತ್ತು ನೀಡಲಾಗಿದೆ.
* ವಾಟರ್ ಎಟಿಎಂ ಕೇಂದ್ರಗಳ ಮೂಲಕ ಪ್ರವಾಸಿಗರಿಗೆ ಹಾಗು ಸ್ಥಳೀಯರಿಗೆ ಕಡಿಮೆ ದರದಲ್ಲಿ ಶುದ್ಧ ಕುಡಿಯುವ ನೀರು.
* ಬೀಚ್ ನಲ್ಲಿ ಸೌರ ಮತ್ತು ವಿದ್ಯುತ್ ದೀಪ ಅಳವಡಿಕೆ. ಎಲ್ಲಾ ಅತ್ಯಾಧುನಿಕ ಮೂಲಭೂತ ಸೌಕರ್ಯ.
* ಸೈಬರ್ ಕೇಂದ್ರ, ವೈಫೈ ವ್ಯವಸ್ಥೆ, ಮೋಬೈಲ್ ಚಾರ್ಜಿಂಗ್ ಕೇಂದ್ರ.
* ಇ-ರಿಕ್ಷಾ ಪಾರ್ಕಿಂಗ್ ವ್ಯವಸ್ಥೆ ಅಳವಡಿಸಿ ಆನ್ ಲೈನ್ ಬುಕ್ಕಿಂಗ್.
* ಕರಾವಳಿಯ ಪಾರಂಪರಿಕ ಖಾದ್ಯಗಳ ಸಂಕೀರ್ಣ ಸ್ಥಾಪನೆ.

ಇದಲ್ಲದೆ ಸ್ಥಳಿಯ ಗುಡಿಕೈಗಾರಿಕೆ, ಕರಕುಶಲ ವಸ್ತುಗಳಿಗೆ ಮಾರುಕಟ್ಟೆ ಒದಗಿಸಲು ಶಾಪಿಂಗ್ ಸ್ಟ್ರೀಟ್ ನಿರ್ಮಾಣದ ವಿಂತನೆ ಕೂಡ ಈ ಯೋಜನೆಯಲ್ಲಿ ಅಳವಡಿಸಲಾಗಿದೆ.
ಮುಂಬರುವ ದಿನಗಳಲ್ಲಿ 'ಸ್ವದೇಶ ದರ್ಶನ್' ಯೋಜನೆ ಕಾರ್ಯರೂಪಕ್ಕೆ ಬಂದಲ್ಲಿ ರಾಜ್ಯದ ಕರಾವಳಿಗೆ ಪ್ರವಾಸಿಗರ ದಂಡೇ ಹರಿದು ಬರಲಿದೆ. ನಮ್ಮ ಕಾವಳಿಯ ಬೀಚ್ ಗಳು ಮತ್ತಷ್ಟು ವಿದೇಶಿ ಪ್ರವಾಸಿಗರನ್ನು ಕೈ ಬೀಸಿ ಕರೆಯಲಿವೆ. ಈ ನಡುವೆ ಆಧುನಿಕ ಪ್ರಚಾರ ಮಾಧ್ಯಮದ ಮೂಲಕ ವಿಶ್ವ ಪ್ರವಾಸಿ ತಾಣಗಳ ಭೂಪಟ ಸೇರಿ, ದೇಶ ವಿದೇಶದ ಪ್ರವಾಸಿಗರನ್ನು ಸೆಳೆಯಲು ಉಡುಪಿ ಸಜ್ಜಾಗಿದೆ.
ಭೋರ್ಗರೆಯುವ ಕಡಲು, ನಿಸರ್ಗ ಸಿರಿ, ಧಾರ್ಮಿಕ ಕ್ಷೇತ್ರ, ಸಂಸ್ಕೃತಿಯ ಶ್ರೀಮಂತಿಕೆಯನ್ನು ಜನತೆಗೆ ಪರಿಚಯಿಸಲು ನೂತನ ಆ್ಯಪ್ ವೆಬ್ ಸೈಟ್ ರೂಪಿಸಿದೆ. ಪ್ರವಾಸೋದ್ಯಮ ಇಲಾಖೆ ಎಫ್ ಎಂ ರೇಡಿಯೋ ಜಿಂಗಲ್ ಸಿದ್ಧಪಡಿಸಿದೆ. ಉಡುಪಿ ಜಿಲ್ಲಾ ಪ್ರವಾಸೋದ್ಯಮ ತಾಣಗಳ ಮಾಹಿತಿಯ ಜಿಂಗಲ್ ರೆಡ್ ಎಫ್ಎಂ 93.5 ಮೂಲಕ ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಮುಂದಿನ ಹಂತದಲ್ಲಿ ಮುಂಬೈಯಲ್ಲಿ ಪ್ರಸಾರವಾಗಲಿದೆ.












Click it and Unblock the Notifications