ಹಿಲರಿ ಗೆಲ್ಲಲೆಂದು ಮಂಗಳೂರಲ್ಲಿ ಕೃಷ್ಣನಿಗೆ ವಿಶೇಷ ಪೂಜೆ
ಮಂಗಳೂರು, ನವೆಂಬರ್ 7: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ದ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಭಾನುವಾರ ದೇವರಿಗೆ ಅಭಿಷೇಕ ಹಾಗೂ ಕೃಷ್ಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಹಿಲರಿ ಕ್ಲಿಂಟನ್ಗೆ ಇಡೀ ಜಗತ್ತನ್ನು ಕಾಪಾಡುವ ಶಕ್ತಿ ಇದೆ. ಆಕೆ ಪಾಕಿಸ್ತಾನ ಪರವಾದ ನಿಲುವನ್ನು ಹೊಂದಿಲ್ಲ. ಭಾರತ ಪರವಾಗಿಯೇ ಇದ್ದಾರೆ. ಅಮೆರಿಕಾದಲ್ಲಿ ಇರುವ ಅನಿವಾಸಿ ಭಾರತೀಯರೂ ಹಿಲರಿ ಕ್ಲಿಂಟನ್ ಜೊತೆಗಿದ್ದಾರೆ. ಡೊನಾಲ್ಡ್ ಟ್ರಂಪ್ ಗೆದ್ದರೆ ಜಗತ್ತಿಗೆ ಅಪಾಯ ಇದೆ ಎಂದಿದ್ದಾರೆ.[ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆ ಮುನ್ನಲೆ]

ಡೊನಾಲ್ಡ್ ಟ್ರಂಪ್ ವಿಚಿತ್ರ ವ್ಯಕ್ತಿ. ಆತ ಯಾರ ಮಾತನ್ನೂ ಕೇಳುವಂತಹವನಲ್ಲ. ಆತ ಗೆದ್ದರೆ ಹೈಡ್ರೋಜನ್ ಬಾಂಬ್ ಉಪಯೋಗಿಸುತ್ತಾನೆ. ಏನು ಮಾಡುತ್ತಾನೆ ಎಂದು ಊಹಿಸಲಾಗದ ವ್ಯಕ್ತಿತ್ವ ಆತನದು. ಆತನಿಂದಾಗಿ ಭಾರತವೂ ಉಳಿಯಲಾರದು. ಹೀಗಾಗಿ ಟ್ರಂಪ್ನ ಬಗ್ಗೆ ಹೆಚ್ಚಿನ ದೇಶಗಳು ಚಿಂತೆಗೆ ಒಳಗಾಗಿವೆ ಎಂದರು.[ಇ ಮೇಲ್ ಪ್ರಕರಣದಲ್ಲಿ ಹಿಲರಿ ಕ್ಲಿಂಟನ್ ಗೆ ನಿರಾಳ]
ಈಗ ಹಿಲರಿ ಶೇ 46 ಹಾಗೂ ಟ್ರಂಪ್ ಶೇ 43 ಅಂಕಗಳಲ್ಲಿ ಇದ್ದಾರೆ. ಅಂದರೆ ಶೇ 3 ಅಂತರದಲ್ಲಿದ್ದಾರೆ. ನವೆಂಬರ್ 8ರಂದು ಫಲಿತಾಂಶದಲ್ಲಿ ಏನಾದರೂ ಆಗಬಹುದು. ಹಾಗಾಗಿ ಇಡೀ ದೇಶದ ಜನತೆ ಹಿಲರಿ ಕ್ಲಿಂಟನ್ ಗೆಲುವಿಗಾಗಿ ಪ್ರಾರ್ಥಿಸಬೇಕಾಗಿದೆ. ಮಂದಿರ, ಮಸೀದಿ, ಚರ್ಚ್ ಹಾಗೂ ಗುರುದ್ವಾರಗಳಲ್ಲಿ ದೇಶ ಹಾಗೂ ಜಗತ್ತಿನ ಹಿತಕ್ಕಾಗಿ ಒಗ್ಗಟ್ಟಿನಿಂದ ಪ್ರಾರ್ಥನೆ, ಹರಕೆಗಳನ್ನು ಸಲ್ಲಿಸಬೇಕಾಗಿದೆ ಎಂದರು.












Click it and Unblock the Notifications