ಕರಾವಳಿಯ ಗದ್ದೆ, ಅಡುಗೆ ಮನೆಯಿಂದ ಮಾಯವಾಗಿವೆ ಶಂಕುಹುಳುಗಳು
ಮಂಗಳೂರು, ಜೂನ್ 21: ಕರಾವಳಿಯಲ್ಲಿ ಮಳೆ ಆರಂಭವಾಗುತ್ತಿದ್ದಂತೆ ಚುಮು ಚುಮು ಚಳಿಯ ನಡುವೆ ನರ್ತೆ (ಶಂಕುಹುಳು) ಪಲ್ಯದ ಘಮಲು ಮೂಗಿಗೆ ರಾಚುತಿತ್ತು. ಕರಾವಳಿಯಲ್ಲಿ ಅದರಲ್ಲೂ ತುಳುನಾಡಿನಲ್ಲಿ ಈ ನರ್ತೆ ಪಲ್ಯದ ರುಚಿ ನೋಡದವರೇ ಅಪರೂಪ. ಆದರೆ ಇತ್ತೀಚೆಗೆ ನರ್ತೆಗಳೇ ಕರಾವಳಿಯ ಗದ್ದೆಗಳಿಂದ ಹಾಗು ಅಡಿಗೆ ಮನೆಯಿಂದ ಕಣ್ಮರೆಯಾಗುತ್ತಿವೆ. ರೈತನ ಮಿತ್ರನಂತಿದ್ದ ಈ ಮೃದ್ವಂಗಿಗಳು ಇಂದು ವಿನಾಶದ ಅಂಚಿಗೆ ತಲುಪಿವೆ.
ಮುಂಗಾರು ಪ್ರವೇಶಿಸುತ್ತಿದ್ದಂತೆ ಕರಾವಳಿಯಲ್ಲಿ ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಹಿಂದೆ ನರ್ತೆಗಳು ಹೇರಳವಾಗಿ ಸಿಗುತ್ತಿದ್ದವು. ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಮನೆಯಲ್ಲೂ ನರ್ತೆಯ ರುಚಿಕರ ಖಾದ್ಯ ಕಾಯಂ ಆಗಿ ಇರುತ್ತಿತ್ತು. ಬಸಳೆ, ಸೌತೆಕಾಯಿಯೊಂದಿಗೆ ನರ್ತೆ ಪಲ್ಯ ಮಾಡಿದರೆ ಅದರ ರುಚಿ ಸವಿದವರಿಗೇ ಗೊತ್ತು.
ಅಧಿಕ ಮಳೆ ಸುರಿಯುವ ಜೂನ್ ಹಾಗು ಸೆಪ್ಟೆಂಬರ್ ತಿಂಗಳಲ್ಲಿ ಗದ್ದೆಗಳಲ್ಲಿ ಕಾಣ ಸಿಗುತ್ತಿದ್ದ ಶಂಖಾಕೃತಿಯ ಈ ಉಭಯವಾಸಿ ಜೀವಿಗಳಿಗೆ ಕರಾವಳಿಯಲ್ಲಿ ನರ್ತೆ ಎಂದು ಕರೆಯುತ್ತಾರೆ. ಗದ್ದೆಗಳ ಅಂಟು ಮಣ್ಣಿನಲ್ಲಿ ಕಾಣ ಸಿಗುವ ಈ ನರ್ತೆಗಳು ಪಾಚಿ, ಕೆಸರು ಮಣ್ಣನ್ನು ಅಹಾರವಾಗಿ ಸೇವಿಸುತ್ತವೆ.

ಈ ಮೃದ್ವಂಗಿಗಳನ್ನು ಮಣ್ಣನ್ನು ಆಹಾರವಾಗಿ ಸೇವಿಸುವುದೂ ಅಲ್ಲದೆ, ಮಣ್ಣನ್ನು ಹದಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದವು. ಬೆಳೆರಕ್ಷಣೆಯಲ್ಲೂ ಇವುಗಳದ್ದು ಮಹತ್ತರ ಪಾತ್ರ. ಹೀಗಾಗಿ ಇದನ್ನು ರೈತನ ಮಿತ್ರ ಎಂದು ಕರೆಯಲಾಗುತ್ತದೆ.

ಆದರೆ, ಇಂದು ಈ ಜೀವ ಸಂಕುಲವೇ ವಿನಾಶದ ಅಂಚಿನಲ್ಲಿದೆ. ಪ್ರಕೃತಿಯ ಮಡಿಲಲ್ಲಿ ಜೀವಿಸುವ ಈ ಮೃದ್ವಂಗಿಗಳು ಮಾನವನ ದುಷ್ಕೃತ್ಯಕ್ಕೆ ಬಲಿಯಾಗುತ್ತಿವೆ. ಗದ್ದೆಗಳು, ಕೃಷಿ ಭೂಮಿಗಳು ಈಗ ಸೈಟ್ ಗಳಾಗಿ ಬದಲಾಗುತ್ತಿವೆ. ಗದ್ದೆಗಳಲ್ಲಿ ಅತಿಯಾದ ರಾಸಾಯನಿಕಗಳ ಬಳೆಯಿಂದ ಈ ಉಭಯವಾಸಿಗಳು ಅಳಿವಿ ಅಂಚಿಗೆ ಬಂದು ತಲುಪಿವೆ. ಈ ಕುರಿತು ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದೆ.












Click it and Unblock the Notifications