ಮಲ್ಪೆ ಬಂದರಿನಲ್ಲಿ ತುಂಬಿದ ಹೂಳು; ಮೀನುಗಾರರ ಜೀವಕ್ಕಿಲ್ವಾ ಬೆಲೆ?
ಉಡುಪಿ, ನವೆಂಬರ್ 26: ಉಡುಪಿಯ ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು ಸರ್ಕಾರದ ನಿರ್ಲಕ್ಷ್ಯದಿಂದ ಬಹಳ ದೊಡ್ಡ ದುರಂತವನ್ನು ಎದುರು ನೋಡುತ್ತಿದೆ. ಬಂದರಿನಲ್ಲಿ ಹಡಗುಗಳು ಸಂಚಾರವೇ ಕಷ್ಟವಾಗುತ್ತಿದೆ. ಅಪ್ಪಿತಪ್ಪಿ ಯಾರಾದರೂ ಬಂದರಿನಲ್ಲಿ ನೀರಿಗೆ ಬಿದ್ದರೆ, ಜೀವ ಉಳಿಯೋದು ಬಿಡಿ, ಶವ ಸಿಗೋದು ಡೌಟ್ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಕೆಟ್ಟು ಹೋಗಿದೆ.
ಮೀನುಗಾರಿಕೆ ನಡೆಸುವುದು ಸಮುದ್ರದಲ್ಲಿ ಆದರೂ ಮತ್ಸ್ಯ ಬೇಟೆ ಮುಗಿಸಿ ಬಂದ ಹಡಗುಗಳು ನಿಲ್ಲುವುದು ಬಂದರಿನಲ್ಲಿ. ಬಂದರಿನಲ್ಲೇ ವ್ಯಾಪಾರ ವಹಿವಾಟು. ಬಂದರು ಸುಸಜ್ಜಿತವಾಗಿ ಇದ್ದರೆ ಹಡುಗು ನಿಲ್ಲುವುದಕ್ಕೂ ಸಹಕಾರಿ. ಆದರೆ ಕರಾವಳಿ ಸರ್ವಋತು ಬಂದರು ಅಂತ ಹೆಸರು ಪಡೆದ ಉಡುಪಿಯ ಮಲ್ಪೆ ಬಂದರು ಈಗ ದೊಡ್ಡ ಅಪಾಯವನ್ನು ಎದುರು ನೋಡುತ್ತಿದೆ. ಬಂದರು ಅಂದರೆ ನೀರು ತುಂಬಿಕೊಂಡಿರಬೇಕು, ಆದರೆ ಮಲ್ಪೆ ಬಂದರಿನಲ್ಲಿ ನೀರಿಗಿಂತ ಹೆಚ್ಚು ಹೂಳು ತುಂಬಿಕೊಂಡಿದೆ.

ಹಡಗುಗಳ ಸಂಚಾರಕ್ಕೆ ದೊಡ್ಡ ಸಮಸ್ಯೆ
ಹೂಳು ತುಂಬಿಕೊಂಡಿರುವ ಕಾರಣದಿಂದ ಹಡಗುಗಳ ಸಂಚಾರಕ್ಕೆ ದೊಡ್ಡ ಸಮಸ್ಯೆ ಆಗುತ್ತಿದೆ. ಅದರಲ್ಲೂ ನೀರಿನ ಇಳಿತದ ಸಂದರ್ಭ ಹೂಳು ಮೇಲೆಬಂದು ತಳಭಾಗ ಕಾಣುತ್ತದೆ. ಡ್ರೆಜ್ಜಿಂಗ್ ನಡೆಸದೇ 5 ವರ್ಷ ಆಗಿರುವುದರಿಂದ ಬೃಹತ್ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಕೆಲ ವರ್ಷಗಳ ಹಿಂದೆ ಡ್ರೆಜ್ಜಿಂಗ್ ನಡೆಸುವುದಕ್ಕೆ ಮುಂಬೈ ಕಂಪನಿಯೊಂದಕ್ಕೆ ಟೆಂಡರ್ ನೀಡಲಾಗಿತ್ತು. ಆದರೆ, ಕೆಲ ತಾಂತ್ರಿಕ ಕಾರಣದಿಂದ ಕೆಲಸ ಪೂರ್ತಿ ಆಗದೇ ಅರ್ಧಕ್ಕೆ ನಿಂತಿತ್ತು. ಹೀಗಾಗಿ ಬೃಹತ್ ಪ್ರಮಾಣದ ಹೂಳು ತುಂಬಿ ದೊಡ್ಡ ಗಂಡಾಂತರವನ್ನು ಬಂದರು ಎದುರು ನೋಡುತ್ತಿದೆ.

ಅಪ್ಪಿತಪ್ಪಿ ಬಿದ್ದರೆ ಹೆಣ ಸಿಗೋದು ಗ್ಯಾರಂಟಿ ಇಲ್ಲ
ಮಲ್ಪೆ ಬಂದರಿನಲ್ಲಿ ಸುಮಾರು 2 ಸಾವಿರದಷ್ಟು ಬೋಟ್ಗಳಿವೆ. ಬೆಳಗ್ಗೆ ನಾಲ್ಕು ಗಂಟೆಯಿಂದ ಸಾವಿರಾರು ಮಂದಿ ಬಂದರಿನಲ್ಲಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಒಂದು ವೇಳೆ ಅಪ್ಪಿತಪ್ಪಿ ಬಿದ್ದರೆ ಹೆಣ ಸಿಗೋದು ಗ್ಯಾರಂಟಿ ಇಲ್ಲ. ಅಷ್ಟು ಕಠಿಣ ಎನ್ನುವಂತಿದೆ ಸದ್ಯದ ಪರಿಸ್ಥಿತಿ. ಡ್ರೆಜ್ಜಿಂಗ್ ನಡೆಸಿ ಅಂತ ಮೀನುಗಾರರು ಒತ್ತಾಯ ಮಾಡಿದರೂ ಉತ್ತರ ಮಾತ್ರ ಶೂನ್ಯವಾಗಿದೆ.
ಮಲ್ಪೆಯ ದಕ್ಕೆ ಸುಮಾರು 25ರಿಂದ 30 ಅಡಿ ಆಳ ಇದ್ದು, ದಕ್ಕೆಯಲ್ಲಿ ತುಂಬಿರುವ ನೀರು ಕಲುಷಿತವಾಗಿ ವಿಷಪೂರಿತ ವಾಗಿದೆ. ಕೆಲವೊಮ್ಮೆ ಈಜು ತಿಳಿದವರೂ ಕೂಡ ಜೀವ ರಕ್ಷಣೆಗಾಗಿ ಈ ನೀರಿಗೆ ಇಳಿಯದಂತಹ ಪರಿಸ್ಥಿತಿ ಎದುರಾಗಿದೆ. ನೀರು ಕಮ್ಮಿ ಇದ್ದರೆ ಬೋಟ್ನ ಫ್ಯಾನಿಗೆ, ಬಲೆ, ರೋಪ್ ಟಯರ್- ಇತ್ಯಾದಿ ಸಿಕ್ಕಿ ಬೀಳುವ ಸಂಭವವಿದೆ. ಇನ್ನೂ ಐದರಿಂದ 7 ಅಡಿ ಹೂಳು ತೆಗೆದರೆ ಜೀವ ರಕ್ಷಣೆಯನ್ನಾದರೂ ಮಾಡಬಹುದು ಎಂಬುದು ಸ್ಥಳೀಯ ಮೀನುಗಾರರ ಅಭಿಪ್ರಾಯವಾಗಿದೆ.

ನೀರಿನ ಆಳದಲ್ಲಿ ತುಂಬಾ ಹೂಳು ತುಂಬಿದೆ
ಈ ಬಗ್ಗೆ ಮಾತನಾಡಿರುವ ಮಲ್ಪೆಯ ಮುಳುಗು ತಜ್ಞ ಈಶ್ವರ್ ಮಲ್ಪೆ, "ನೀರಿನ ಆಳದಲ್ಲಿ ತುಂಬಾ ಹೂಳು ತುಂಬಿ ಹೋಗಿದ್ದು, ಅದರಿಂದ ನೀರಿಗೆ ಬಿದ್ದವರು ಮೇಲೆ ಬರದೆ ಒದ್ದಾಡಿಕೊಂಡು ಪ್ರಾಣ ಬಿಡುತ್ತಾರೆ. ನೀರು ತುಂಬಾ ಇದ್ದರೆ ನೀರಿಗೆ ಬಿದ್ದ 2- 3 ಸಲ ಮೇಲೆ ಬರುತ್ತಾನೆ ಇದರಿಂದ ಪ್ರಾಣವನ್ನು ಉಳಿಸಬಹುದು. ಆದಷ್ಟು ಬೇಗ ನಮ್ಮ ಬಂದರಿನ ಒಳಗೆ ಹೂಳನ್ನು ತೆಗೆಯಬೇಕು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು.''
"ಈ ಕೊಳಕು ಕೆಸರು ಮಣ್ಣು ಮಿಶ್ರಿತ ನೀರಿನಲ್ಲಿ ಜೀವದ ಹಂಗು ತೊರೆದ ಕೆಲಸ ನಿರ್ವಹಿಸುತ್ತೇನೆ. ನೀರಿನ ಕೆಳಗೆ ಹೋದರೆ ಕಣ್ಣಿಗೆ ಏನೂ ಕಾಣುವುದಿಲ್ಲ. ಆದರೂ ಹುಡುಕುವಾಗ ನೀರಿನ ಆಳದಲ್ಲಿ ಫೈಬರ್ ಪೀಸ್, ಗ್ಲಾಸ್ ಪೀಸ್, ಟಯರ್ ಬಲೆ ಕಬ್ಬಿಣದ ರಾಡ್ ಹಾಗೂ ತಲೆಗೆ ಬೋಟ್ ತುಂಬಾ ಸಲ ತಾಗುತ್ತದೆ. ಇನ್ನಿತರ ಅಡತಡೆ ಇದ್ದರೂ ಅವರ ಮನೆಗೆ ಮೃತದೇಹವನ್ನು ತೆಗೆದುಕೊಡುತ್ತೇನೆ. ಅವನ ಪ್ರಾಣ ಉಳಿಸಲಾಗದಿದ್ದರೂ ಮೃತದೇಹ ತೆಗೆದು ಕೊಟ್ಟೆ ಅನ್ನುವ ತೃಪ್ತಿ ಅಷ್ಟೇ,'' ಅಂತಾ ಹೇಳಿದ್ದಾರೆ.

ಸಚಿವರಿಗೆ ಮೀನುಗಾರಿಕೆ ಬಗ್ಗೆ ಅರಿವು ಕಮ್ಮಿ
ಅಂದಹಾಗೆ, ಮೀನುಗಾರರ ಸಮಸ್ಯೆ ಅಳಿಸಬೇಕಾದ ಸಚಿವರಿಗೆ ಮೀನುಗಾರಿಕೆ ಬಗ್ಗೆ ಅರಿವು ಕಮ್ಮಿ ಇದೆ. ತಿಳಿದುಕೊಳ್ಳುವ ಆಸಕ್ತಿ ಕೂಡ ಇಲ್ಲ. ಹೀಗಾಗಿ ಮಲ್ಪೆ ಬಂದರಿನ ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಈ ಬಗ್ಗೆ ಗಮನ ಹರಿಸಿ, ಡ್ರೆಜ್ಜಿಂಗ್ ಕೆಲಸ ಆದಷ್ಟು ಬೇಗ ನಡೆಸುವತ್ತ ಸರ್ಕಾರ ಗಮನ ಹರಿಸಬೇಕಿದೆ ಅನ್ನೋದು ಮೀನುಗಾರರ ಅಭಿಪ್ರಾಯವಾಗಿದೆ.












Click it and Unblock the Notifications