ಪುತ್ತೂರು: ಶಾಲಾ ಮೈದಾನವನ್ನೇ ಗದ್ದೆ ಮಾಡಿದ ಶಾಲಾ ಆಡಳಿತ ಮಂಡಳಿ
ಮಂಗಳೂರು, ಜುಲೈ 6: ಕೋವಿಡ್ ಸೋಂಕಿನ ಕಾರಣದಿಂದ ಶಾಲೆಯಲ್ಲಿ ಮಕ್ಕಳ ಕಲರವ ನಿಂತು ಹಲವು ತಿಂಗಳುಗಳೇ ಕಳೆದಿವೆ. ಶಾಲೆಯ ಆಟದ ಮೈದಾನದಲ್ಲಿ ಮಕ್ಕಳ ಓಡಾಟ, ತುಂಟಾಟಗಳೆಲ್ಲಾ ಮಾಯವಾಗಿದೆ. ಶಾಲೆಯ ಆವರಣದಲ್ಲಾ ನೀರವ ಮೌನ ಆವರಿಸಿದೆ.
ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರದ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮೈದಾನ ಈಗ ಭತ್ತದ ಗದ್ದೆಯಾಗಿ ಮಾರ್ಪಾಡಾಗಿದೆ.
ಸರ್ಕಾರಿ ಕನ್ನಡ ಶಾಲೆ ಇದಾಗಿದ್ದು, ಊರಿನ ಸಂಘ ಸಂಸ್ಥೆಗಳು, ಶಾಲಾ ಮಕ್ಕಳ ಪೋಷಕರ ಜೊತೆ ಸೇರಿ ಶಾಲಾ ಆಡಳಿತ ಮಂಡಳಿ ಭತ್ತದ ಗದ್ದೆಯನ್ನಾಗಿ ಮಾರ್ಪಾಟು ಮಾಡಿದ್ದಾರೆ. ಕುಂಬ್ರ ಶಾಲೆಯ ಆಟದ ಮೈದಾನವನ್ನು ನವೀಕರಿಸಲಾಗಿದ್ದು, ಮೈದಾನದ 80 ಸೆಂಟ್ಸ್ ಜಾಗದಲ್ಲೂ ಯಾಂತ್ರೀಕೃತ ಉಳುಮೆ ಮಾಡಿ ನೀರು ನಿಲ್ಲಿಸಿ ಬದು ಕಟ್ಟಲಾಗಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುತುವರ್ಜಿಯಿಂದ ಈ ಬೇಸಾಯ ಮಾಡಲಿದ್ದು, ನಾಟಿಗೆ ಬೇಕಾದ ಚಾಪೆ ನೇಜಿಯನ್ನು ಸಿದ್ಧಪಡಿಸಿ ಈಗಾಗಲೇ 30 ಕೆಜಿ ಬಿತ್ತನೆ ಬೀಜವನ್ನು ಬಿತ್ತನೆ ಮಾಡಲಾಗಿದೆ. ಗದ್ದೆಯ ಎಲ್ಲಾ ಕೆಲಸಗಳನ್ನು ವಿದ್ಯಾರ್ಥಿಗಳ ಪೋಷಕರು ಮತ್ತು ಸಂಘ ಸಂಸ್ಥೆಗಳ ಕಾರ್ಯಕರ್ತರೇ ಮಾಡಿದ್ದಾರೆ.

ಒಟ್ಟಿನಲ್ಲಿ ಲಾಕ್ಡೌನ್ ವೇಳೆ ಮಕ್ಕಳಿಲ್ಲದ ಶಾಲಾ ಮೈದಾನದಲ್ಲಿ ಇನ್ನು ಭತ್ತದ ಪೈರು ನಳನಳಿಸಲಿದ್ದು, ಶಾಲಾ ಅಭಿವೃದ್ಧಿ ಮಂಡಳಿಯ ನಿರ್ಧಾರ ರಾಜ್ಯಕ್ಕೆ ಮಾದರಿಯಾಗಿದೆ.












Click it and Unblock the Notifications