ಕಾರ್ತಿಕ್ ರಾಜ್ ಕೊಲೆ, ಜಿಹಾದಿ ಕೃತ್ಯ; ಯಡಿಯೂರಪ್ಪ
ಬೆಂಗಳೂರು/ಮಂಗಳೂರು, ಅಕ್ಟೋಬರ್ 25: ಮಂಗಳೂರಿನ ಕೋಣಾಜೆ ಬಳಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಅವರ ಹತ್ಯೆಯನ್ನು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತೀವ್ರವಾಗಿ ಖಂಡಿಸಿದ್ದಾರೆ.
ರಾಜಕೀಯ ದ್ವೇಷಪೂರಿತ ಕೊಲೆಗಳು ಜಿಹಾದಿಗಳ ಕೃತ್ಯ, ಎಷ್ಟು ಮಂದಿ ಹಿಂದೂ ಕಾರ್ಯಕರ್ತರನ್ನು ಕೊಲ್ಲಲು ಬಯಸಿದ್ದೀರಿ? ಗೃಹ ಸಚಿವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಕೋಣಾಜೆಯ ಅಸೈಗೊಳಿ ಬಳಿ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದ ವೇಳೆ ದುಷ್ಕರ್ಮಿಗಳಿಂದ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದರು. ಆಸ್ಪತ್ರೆಗೆ ದಾಖಲಾಗಿದ್ದ ಕಾರ್ತಿಕ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಕೊಣಾಜೆ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲೇ ಘಟನೆಯನ್ನು ಮೊದಲಿಗೆ ಹಿಟ್ ಆಂಡ್ ರನ್ ಎಂದು ಪೊಲೀಸರು ಹೇಳಿದ್ದರು. ಆದರೆ, ನಂತರ ತನಿಖೆ ನಡೆಸಿ ಇದು ದ್ವೇಷಪೂರಿತ ಕೊಲೆ ಇರಬಹುದು ಎಂದು ಶಂಕಿಸಿದ್ದಾರೆ.
ಕೊಣಾಜೆ ಪಜೀರಿನ ಸುದರ್ಶನ ನಗರ ನಿವಾಸಿ ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಉಮೇಶ್ ಪೂಜಾರಿ ಅವರ ಸುಪುತ್ರರಾದ ಕಾರ್ತಿಕ್ ರಾಜ್ (27) ಅವರ ಹತ್ಯೆ ಖಂಡಿಸಿ ಆರೆಸ್ಸೆಸ್ ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ಕೃತ್ಯ
ಕಳೆದ ಶನಿವಾರ ಮುಂಜಾನೆ ಕೊಣಾಜೆ ಪೊಲೀಸ್ ಠಾಣಾ ಕೂಗಳತೆಯ ದೂರದಲ್ಲೇ ರಸ್ತೆ ಅಂಚಿನಲ್ಲಿ ಜಾಗಿಂಗ್ ಮಾಡುತ್ತಿದ್ದ ಬಿಜೆಪಿ ಮುಖಂಡನೋರ್ವನ ಪುತ್ರನನ್ನು ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ನಡುರಸ್ತೆಯಲ್ಲೇ ಮಾರಣಾಂತಿಕವಾಗಿ ಕಡಿದು ಪರಾರಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಗಾಯಾಳುವನ್ನು ಹಿಟ್ ಆಂಡ್ ರನ್ ಕೇಸೆಂದು ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

ಹಿಟ್ ಆಂಡ್ ರನ್ ಕೇಸನ್ನಾಗಿ ಪರಿವರ್ತಿಸುವ ಹುನ್ನಾರ
ಬೈಕಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಾರ್ತಿಕ್ ಅವರನ್ನು ತಲವಾರಿಂದ ನಡು ರಸ್ತೆಯಲ್ಲೇ ಕಡಿದು ಪರಾರಿಯಾಗಿರುವುದನ್ನು ಪ್ರತ್ಯಕ್ಷದರ್ಶಿಗಳೇ ಕಂಡಿದ್ದಾರೆ. ಕಾರ್ತಿಕ್ ಅವರ ತಲೆಯ ಹಿಂಭಾಗಕ್ಕೆ ತಲವಾರಿಂದ ಬಲವಾಗಿ ಕಡಿದ ಪರಿಣಾಮ ವಿಪರೀತ ರಕ್ತವು ಚೆಲ್ಲಿದ್ದು ಸ್ಥಳಕ್ಕೆ ಬಂದ ಕೊಣಾಜೆ ಪೊಲೀಸರು ಗಾಯಾಳುವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಸೇರಿಸಿ ತದನಂತರ ಪೊಲೀಸ್ ಠಾಣೆಯ ಕೂಗಳತೆಯ ಪ್ರದೇಶದಲ್ಲೇ ನಡೆದ ಪ್ರಕರಣವನ್ನು ಹಿಟ್ ಆಂಡ್ ರನ್ ಕೇಸನ್ನಾಗಿ ಪರಿವರ್ತಿಸುವ ಹುನ್ನಾರ ನಡೆಸಿದ ಆರೋಪ ಕೇಳಿ ಬಂದಿತ್ತು.

ಕೊಲೆಯತ್ನ ಪ್ರಕರಣವನ್ನೇ ದಾಖಲಿಸಬೇಕಾಯಿತು
ಅಪರಿಚಿತ ವಾಹನ ಹೊಡೆದು ಕಾರ್ತಿಕ್ ಗಾಯಗೊಂಡಿದ್ದಾರೆಂದು ಕೇಸನ್ನು ಉಲ್ಟಾ ಹೊಡೆಸುವ ಕೊಣಾಜೆ ಪೊಲೀಸರ ತಂತ್ರವನ್ನು ಅರಿತ ಬಿಜೆಪಿ ಕಾರ್ಯಕರ್ತರು ಅತ್ಯಧಿಕ ಸಂಖ್ಯೆಯಲ್ಲಿ ಆಸ್ಪತ್ರೆಯಲ್ಲಿ ಜಮಾವಣೆಗೊಂಡಿದ್ದು ಸ್ಥಳಕ್ಕೆ ಬಂದ ವಿಧಿ,ವಿಜ್ಞಾನ ತಂಡವು ಕೂಡಲೇ ಇದು ತಲವಾರು ದಾಳಿಯೆಂದು ಹೇಳಿದಾಗ ಬೇರೆ ವಿಧಿಯಿಲ್ಲದೆ ಪೊಲೀಸರು ಕೊಲೆಯತ್ನ ಪ್ರಕರಣವನ್ನೇ ದಾಖಲಿಸಿದ್ದಾರೆ.

ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಶಾಂತರಾಜು,ಎಸಿಪಿ ಶೃತಿ ಭೇಟಿ ನೀಡಿ ತನಿಖೆ ನಡೆಸಿದ್ದರು.ಅಸೈಗೋಳಿ ರಸ್ತೆಯಲ್ಲಿ ನಿತ್ಯವೂ ಜಾಗಿಂಗ್ ಮಾಡುವ ಸ್ಥಳೀಯ ಮುಖಂಡರೋರ್ವರನ್ನು ಕೊಲೆ ಮಾಡಲು ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ಗುರಿ ತಪ್ಪಿ ಕಾರ್ತಿಕ್ ಅವರ ಮೇಲೆ ತಲವಾರು ದಾಳಿಯನ್ನು ನಡೆಸಿರುವುದಾಗಿ ಹೇಳಲಾಗುತ್ತಿದ್ದು ಪೊಲೀಸರ ನಿಷ್ಪಕ್ಷಪಾತ ತನಿಖೆಯಿಂದಷ್ಟಲೆ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಅವರು ಕಾರ್ತಿಕ್ ಅವರು ಅಮಾಯಕನಾಗಿದ್ದು ಆತನ ಚಿಂತಾಜನಕ ಸ್ಥಿತಿಗೆ ಕಾರಣರಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಲು ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.












Click it and Unblock the Notifications