ಕತುವಾ ಅತ್ಯಾಚಾರ ಖಂಡಿಸಿ ಪ್ರತಿಭಟನೆ ವೇಳೆ ಪೊಲೀಸ್ ಜೀಪಿಗೆ ಕಲ್ಲು
ಮಂಗಳೂರು ಏಪ್ರಿಲ್ 16: ಜಮ್ಮು ಮತ್ತು ಕಾಶ್ಮೀರದ ಕತುವಾ ಜಿಲ್ಲೆಯಲ್ಲಿ ನಡೆದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಖಂಡಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಗೆ ಘೇರಾವ್ ಹಾಕಿ ಜೀಪಿಗೆ ಕಲ್ಲೆಸೆದ ಘಟನೆ ಸೋಮವಾರ ನಡೆದಿದೆ.
ಕೇರಳ ಗಡಿಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಆನೆಕಲ್ಲು ಎಂಬಲ್ಲಿ ಈ ಘಟನೆ ನಡೆದಿದೆ.
ಜಮ್ಮು ಮತ್ತು ಕಾಶ್ಮೀರದ ಅತ್ಯಾಚಾರ ಘಟನೆ ಖಂಡಿಸಿ ಕಾಸರಗೋಡು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಂಘಟನೆಗಳ ಕಾರ್ಯಕರ್ತರು ಬಲವಂತವಾಗಿ ರಸ್ತೆ ಸಂಚಾರ ಬಂದ್ ಮಾಡಿದ್ದರು. ಕರ್ನಾಟಕ ಗಡಿಭಾಗದ ರಸ್ತೆಗಳಿಗೆ ಕಲ್ಲು ಅಡ್ಡ ಇಟ್ಟು ಸಾರ್ವಜನಿಕರ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ್ದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಡಿಭಾಗದ ರಸ್ತೆಗೆ ಹಾಕಿದ್ದ ತಡೆ ತೆರವುಗೊಳಿಸಲು ಮುಂದಾಗಿದ್ದರು. ಇದನ್ನು ಇದನ್ನು ವಿರೋಧಿಸಿದ ಸ್ಥಳೀಯ ಮುಸ್ಲಿಂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಜೀಪಿಗೆ ಕಲ್ಲೆಸೆದು ಮುತ್ತಿಗೆ ಹಾಕಿದ್ದಾರೆ.
ಪೊಲೀಸರನ್ನು ಅವಾಚ್ಯವಾಗಿ ನಿಂದಿಸಿ ಅಲ್ಲಿಂದ ತೆರಳುವಂತೆ ಎಚ್ಚರಿಸಿದ್ದಾರೆ. ಜೀಪಿನ ಮೇಲೆ ಕೆಸರು ಎರಚಿದ್ದಾರೆ. ಉಳಿದ ಪೊಲೀಸರನ್ನು ಜೀಪಿನಿಂದ ಇಳಿಯಲೂ ಬಿಡದೆ ಸ್ಥಳದಿಂದ ಹಿಂದಕ್ಕೆ ಅಟ್ಟಿದ್ದಾರೆ. ನೀವ್ಯಾಕೆ ಬಂದಿದ್ದೀರಿ? ಕೇರಳದ ಪೊಲೀಸರು ಬರಲಿ ಎಂದು ಗದ್ದಲ ನಡೆಸಿದ್ದಾರೆ.

ಪೊಲೀಸರಿಗೆ ಮುತ್ತಿಗೆ ಹಾಕಿದ ವಿಡಿಯೊ ಈಗ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.












Click it and Unblock the Notifications