ನವರಾತ್ರಿ ಆರಂಭವಾಗುತ್ತಿದ್ದಂತೆ ತುಳುನಾಡಲ್ಲಿ ಪಿಲಿಗಳ ದರ್ಬಾರ್ ಶುರು
ಮಂಗಳೂರು, ಅಕ್ಟೋಬರ್. 11 : ದಸರಾ ಬಂದರೆ ಕರಾವಳಿಯಲ್ಲಿ ತಾಸೆಯ ಸದ್ದು ಮೊಳಗಲಾರಂಭಿಸುತ್ತದೆ. ತಾಸೆಯ ಬಡಿತದ ತಾಳಕ್ಕೆ ತಕ್ಕಂತೆ ತುಳುನಾಡಿನ ಪಿಲಿಗಳ ದರ್ಬಾರ್ ಶುರುವಾಗುತ್ತದೆ. ನವರಾತ್ರಿ ವೇಳೆ ಕರಾವಳಿ ಜನರಿಗೆ ಥಟ್ಟನೆ ನೆನಪಾಗುವುದು ಪಿಲಿ ನಲಿಕೆ.
ಹುಲಿಯಂತೇ ಕಾಣುವ ವೇಷಧಾರಿಗಳಿಂದ ರಸ್ತೆ-ವೃತ್ತಗಳಲ್ಲಿ ತಾಸೆಯ ತಾಳಕ್ಕೆ ವಿಶಿಷ್ಟ ನರ್ತನ ಕಂಡು ಬರುತ್ತದೆ. ಮಂಗಳೂರು ದಸರಾ ಉತ್ಸವ ಮತ್ತು ಮೆರವಣಿಗೆಯಲ್ಲಿ ಈ ಹುಲಿ ಕುಣಿತವೇ ಮುಖ್ಯ ಆಕರ್ಷಣೆ.
ಮಂಗಳೂರು ದಸರಾ ಉತ್ಸವಕ್ಕೆ ಅದ್ಧೂರಿ ಚಾಲನೆ
ಕುದ್ರೋಳಿ ದೇವಾಲಯದಲ್ಲಿ ಮಂಗಳೂರು ದಸರಾ ವೈಭವಕ್ಕೆ ಚಾಲನೆ ದೊರೆಯುತ್ತಿದ್ದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಸೆಯ ಪಟ್ಟಿಗೆ ಹುಲಿ ವೇಷಧಾರಿಗಳ ನರ್ತನ ಆರಂಭವಾಗುತ್ತದೆ. ಒಂದು ಮಾಹಿತಿ ಪ್ರಕಾರ ಮಂಗಳೂರಿನಲ್ಲಿಯೇ ಸುಮಾರು 50ಕ್ಕೂ ಅಧಿಕ ಪಿಲಿನಲಿಕೆ ತಂಡಗಳಿವೆ. ಜಿಲ್ಲೆಯ ಇತರ ತಾಲೂಕುಗಳಲ್ಲಿನ ತಂಡಗಳ ಸಂಖ್ಯೆ 30 ದಾಟುತ್ತದೆ.
ಒಂದೊಂದು ತಂಡದಲ್ಲಿ 15 ರಿಂದ 60 ವೇಷಧಾರಿಗಳವರೆಗೂ ಇರುತ್ತಾರೆ. ಕರಾವಳಿಯ ದಸರಾ ಉತ್ಸವದಲ್ಲಿ ಹುಲಿವೇಷಗಳಿಗೆ ವಿಶಿಷ್ಟ ಸ್ಥಾನವಿದೆ. ತಾಸೆ, ಡೋಲಿನ ಲಯಕ್ಕೆ ವೇಷಧಾರಿಗಳು ಪ್ರದರ್ಶಿಸುವ ಕಸರತ್ತು, ವರಸೆ ಎಂಥವರನ್ನು ಚಕಿತಗೊಳಿಸುತ್ತದೆ. ಮುಂದೆ ಓದಿ...
ಪಿಲಿ ನಲಿಕೆಯೇ ಸ್ಪೆಷಲ್
ಮೈಸೂರಿನಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಚಿನ್ನದ ಅಂಬಾರಿಯಲ್ಲಿ ಹೊತ್ತು ಸಾಗುವ ಗಜಪಡೆಗಳನ್ನು ನೋಡುವುದೇ ಚಂದ. ಹಾಗೆಯೇ ಮಂಗಳೂರು ದಸರಾ ಮೆರವಣಿಗೆಯಲ್ಲಿ ಮಂಗಳೂರು ಪಿಲಿ ನಲಿಕೆಯೇ ಸ್ಪೆಷಲ್. ಪಿಲಿ ಅಂದರೆ ತುಳುವಿನಲ್ಲಿ ಹುಲಿ ಎಂದರ್ಥ.
ಹುಲಿಯಂತೆ ಮೈಗೆ ಬಣ್ಣಬಳಿದು, ಹುಲಿಯಂತೆ ಹಾವ ಭಾವ ಪ್ರದರ್ಶಿಸುತ್ತಾ ತಾಸೆಯ ತಾಳಕ್ಕೆ ನೃತ್ಯ ಮಾಡುವುದೇ ಪಿಲಿ ನಲಿಕೆ. ದಸರಾ ವೇಳೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ದೇವಾಲಯಗಳ ಎದುರು ಈ ಪಿಲಿನಲಿಕೆ ತಂಡಗಳ ನೃತ್ಯ ಇದ್ದೇ ಇರುತ್ತದೆ.
ಜನ ಮನ ಗೆಲ್ಲುವ ಹುಲಿಗಳು
ಮಂಗಳೂರಿನ ರಥ ಬೀದಿ ವೆಂಕಟರಮಣ ದೇವಸ್ಥಾನ, ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನ , ಬೋಳಾರ ಮಂಗಳಾದೇವಿ ದೇವಸ್ಥಾನ, ಉರ್ವ ಮಾರಿಗುಡಿ, ಕಟೀಲು ದುರ್ಗಾಪರಮೇಶ್ವರಿ ದೇವಾಲಯಗಳಲ್ಲಿ ಗಳಲ್ಲಿ ಪಿಲಿನಲಿಕೆ ತಂಡಗಳ ನೃತ್ಯ ಸಾಮಾನ್ಯವಾಗಿ ನೋಡಬಹುದಾಗಿದೆ.
ದಸರಾ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಈ ಪಟ್ಟೆಪಿಲಿ, ಚಿಟ್ಟೆ ಪಿಲಿ, ಪಚ್ಚೆ ಪಿಲಿ, ಅಪ್ಪೆ ಪಿಲಿ, ಕಪ್ಪು ಪಿಲಿ, ಬೊಲ್ದು ಪಿಲಿ, ಹೀಗೆ ನಾನಾ ರೀತಿಯ ಹುಲಿಗಳು ಮತ್ತೆ ಮತ್ತೆ ಎದುರಾಗುತ್ತವೆ. ತಮ್ಮ ವಿಭಿನ ಕಸರತ್ತುಗಳಾದ ತೇಲ್ ಬಗ್ಗುನಿ, ಮಂಕಿ ಡೈ, ಎರಡು ಕೈಗಳಿಂದ ನಡೆಯುವುದು ಸಹಿತ ವಿವಿಧ ಸಾಹಸಗಳನ್ನು ಈ ತಂಡಗಳು ಪ್ರದರ್ಶಿಸಿ ಜನ ಮನ ಗೆಲ್ಲುತ್ತವೆ.
ಸಂಭ್ರಮದ ದಸರಾ ಮಹೋತ್ಸವಕ್ಕೆ ಸಜ್ಜಾದ ಕಡಲತಡಿಯ ನಗರ ಮಂಗಳೂರು
ಅಗಸೆಕಾಯಿ ಬೀಜದ ಬದಲಿಗೆ ಪೈಂಟ್
ಹಿಂದೆ ಹುಲಿವೇಷದ ಬಣ್ಣ ತಯಾರಿಸಲು ಆಗಸೆಕಾಯಿಯ ಬೀಜವನ್ನು ಕಲ್ಲಿನಿಂದ ಅರೆದು ಬಣ್ಣತಯಾರಿಸಿ ಹಚ್ಚಲಾಗುತ್ತಿತ್ತು . ಹುಲಿಗೆ ಪಟ್ಟೆ ಬಣ್ಣಕ್ಕಾಗಿ ಚಿಮಿಣಿಯ ಕರಿಯನ್ನು ಬಳಿಯ ಲಾಗುತ್ತಿತ್ತು . ಅದರೆ ಪರಿಸ್ಥಿತಿ ಈಗ ಬದಲಾಗಿದೆ. ಈಗ ಅಗಸೆಕಾಯಿ ಬೀಜದ ಬದಲಿಗೆ ಪೈಂಟ್ ಗಳು ಬಂದಿವೆ.
ಈ ಬಾರಿಯ ಮಂಗಳೂರು ದಸರಾ ಉದ್ಘಾಟಿಸಲಿದ್ದಾರೆ ಸಿಎಂ ಕುಮಾರಸ್ವಾಮಿ
ನೋಟಿನ ಮಾಲೆ
ಮಂಗಳೂರಿನ ಬಳ್ಳಾಲ್ ಭಾಗ್ ಫ್ರೆಂಡ್ಸ್ ರಿ. ನೇತೃತ್ವದಲ್ಲಿ ಪಿಲಿನಲಿಕೆ ತಂಡ ಸತತ 12 ವರ್ಷಗಳಿಂದ ಮಂಗಳೂರು ದಸರಾ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುತ್ತಿದೆ. ಈ ತಂಡದಿಂದ ಪ್ರತಿ ವರ್ಷ ಸುಮಾರು 60 ಹುಲಿಗಳು ಭಾಗವಹಿಸುತ್ತಿದೆ. ಜನಾಕರ್ಷಣೆಗಾಗಿ ಹುಲಿವೇಷದಾರಿಗೆ ನೋಟಿನ ಮಾಲೆ ಹಾಕಲಾಗುತ್ತದೆ.
ಸಾವಿರ ರೂಪಾಯಿಯಿಂದ ಹಿಡಿದು 1 ಲಕ್ಷ ರೂಪಾಯಿವರೆಗೆನ ಮೌಲ್ಯದ ನೋಟಿನ ಮಾಲೆಯನ್ನು ಹಾಕಲಾಗುತ್ತದೆ.