75 ವರ್ಷಗಳ ಕನಸಾದ ಫಲ್ಗುಣಿ ತೂಗುಸೇತುವೆ ಉದ್ಘಾಟನೆ
ಮಂಗಳೂರು, ಆಗಸ್ಟ್ 12: 75 ವರ್ಷಗಳಿಂದ ಎದುರು ನೋಡುತ್ತಿದ್ದ ಫಲ್ಗುಣಿ ತೂಗುಸೇತುವೆಯನ್ನು ಅರಣ್ಯ ಸಚಿವ ಬಿ.ರಮಾನಾಥ ರೈ ಲೋಕಾರ್ಪಣೆ ಮಾಡಿದ್ದಾರೆ. ಈ ಸೇತುವೆ ಉದ್ಘಾಟನೆ ಮೂಲಕ ಮುತ್ತೂರು ಹಾಗೂ ಬಡಗಬೆಳ್ಳೂರು ಗ್ರಾಮಗಳ ಜನತೆಯ 75 ವರ್ಷಗಳ ನಿರೀಕ್ಷೆ ಸಾಕಾರವಾಗಿದೆ.
ಸೇತುವೆ ಉದ್ಘಾಟನೆ ನಂತರ ಮಾತನಾಡಿದ ಸಚಿವ ರಮಾನಾಥ ರೈ, ಫಲ್ಗುಣಿ ನದಿಗೆ ಕೂಟೆಲು ಬಳಿ ಅಣೆಕಟ್ಟು ಕಟ್ಟಲು ಉದ್ದೇಶಿಸಲಾಗಿದೆ. ಈ ಯೋಜನೆಗೆ ಸಂಪುಟದಲ್ಲಿ ಒಪ್ಪಿಗೆ ಸಿಗಬೇಕು ಎಂದರು.
ಬಡಗಬೆಳ್ಳೂರು ಕಾವೇಶ್ವರ ದೇಗುಲವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ವಹಿಸಲು ಪತ್ರ ಬರೆಯಲಾಗಿದೆ. ಶೀಘ್ರವೇ ಆ ಇಲಾಖೆ ಇದಕ್ಕೆ ಅನುಮೋದನೆ ನೀಡಲಿದೆ ಎಂದು ಹೇಳಿದರು.

ಮುತ್ತೂರಿನ ಪದವಿಪೂರ್ವ ಕಾಲೇಜಿನಲ್ಲಿ ಐಟಿಐ ಶಿಕ್ಷಣ ಪ್ರಾರಂಭಿಸಲಾಗುವುದು. ಪೊಳಳಿಯಿಂದ ಮಳಲಿಗೆ ತೂಗು ಸೇತುವೆ ನಿರ್ಮಾಣ , ಕುಪ್ಪೆಪದವು ಸಿದ್ದಕಟ್ಟೆ ತೂಗುಸೇತುವೆ ನಿರ್ಮಾಣ ಕಾಮಗಾರಿ ಮುಂದಿನ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದರು.
ಸೇತುವೆ ನಿರ್ಮಾಣ ಮಾಡಿದ ಗಿರೀಶ್ ಭಾರದ್ವಾಜ್ ಹಾಗೂ ಸ್ಥಳಾವಕಾಶ ನೀಡಿದ ಜನರನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಚಿವರು, ಈ ಎರಡೂ ಗ್ರಾಮಗಳನ್ನು ಮಾದರಿ ಗ್ರಾಮಗಳನ್ನಾಗಿ ರೂಪಿಸಲಾಗುವುದು ಎಂದು ಭರವಸೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮೊಹಿದ್ದೀನ್ ಬಾವಾ ಮಾತನಾಡಿ, ಮುತ್ತೂರು ಪ್ರೌಢಶಾಲೆಗೆ 50 ಲಕ್ಷ ರು. ಬಿಡುಗಡೆಯಾಗಿದೆ, ನಾಲ್ಕು ಕೊಠಡಿಗಳ ನಿರ್ಮಾಣ ಕಾಮಗಾರಿ ಶೀಘ್ರ ಆರಂಭಿಸಲಾಗುವುದು ಎಂದರು.












Click it and Unblock the Notifications