ಸಾರಿಗೆ ನೌಕರರ ಮುಷ್ಕರ; ಅರ್. ಅಶೋಕ ಅಚ್ಚರಿಯ ಹೇಳಿಕೆ!
ಮಂಗಳೂರು, ಏಪ್ರಿಲ್ 9; ರಾಜ್ಯದಲ್ಲಿ ರಸ್ತೆ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಸರ್ಕಾರ ಮತ್ತು ನೌಕರರ ಮುಸುಕಿನ ಗುದ್ದಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಮುಷ್ಕರ ಕೈ ಬಿಡುವಂತೆ ಮನವಿ ಮಾಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ ಕೂಡಾ ಪ್ರತಿಭಟನೆ ಮಾಡುತ್ತಿರುವ ನೌಕರರ ವಿರುದ್ಧ ಕಿಡಿ ಕಾರಿದ್ದಾರೆ.
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಯಲ್ಲಿ 94 ಸಿ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳ ಜೊತೆ ಸಚಿವರು ಮಾತನಾಡಿದರು.
"ಕೆಎಸ್ಆರ್ಟಿಸಿ, ಬಿಎಂಟಿಸಿ, NWKRTC ಸಂಸ್ಥೆಗಳು ಈಗಾಗಲೇ ಮುಳುಗುತ್ತಿರುವ ಹಡಗುಗಳು. ಈ ಮೂರು ಸಂಸ್ಥೆಗಳು ಮುಳುಗುವ ಹಂತದಲ್ಲಿದೆ. ಇದರ ಮೇಲೂ ನೌಕರರ ಈ ಬೇಡಿಕೆ ಸರಿಯಲ್ಲ" ಎಂದರು.

"ಸಂಸ್ಥೆಗಳು ನಷ್ಟದಲ್ಲಿದ್ದರೂ ನೌಕರರಿಗೆ ಸರಿಯಾಗಿ ಸಂಬಳ ಕೊಟ್ಟಿದ್ದೇವೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲಸ ಮಾಡದಿದ್ದರೂ ಸಂಬಳದಲ್ಲಿ ಯಾವುದೇ ವ್ಯತ್ಯಯ ಮಾಡಿಲ್ಲ. ಇದನ್ನು ನೌಕರರು ಅರಿತು ಕರ್ತವ್ಯಕ್ಕೆ ಹಾಜರಾಗಬೇಕು" ಎಂದು ಆರ್. ಅಶೋಕ ಮನವಿ ಮಾಡಿದರು.
ನೌಕರರ ಬೇಡಿಕೆ ಬಗ್ಗೆ ಸರ್ಕಾರದ ನಿಲುವನ್ನು ಮತ್ತೆ ಪುನರುಚ್ಚಿಸಿದ ಆರ್. ಅಶೋಕ, "ನೌಕರರ ಈಗಿನ ಬೇಡಿಕೆ ಈಡೇರಿಸೋಕೆ ಸಾಧ್ಯವೇ ಇಲ್ಲ. ನೌಕರರು ಯಾರದ್ದೋ ಮಾತು ಕೇಳಿ ಪ್ರತಿಭಟನೆ ಮಾಡುತ್ತಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಮೊದಲು ರೈತ ಹೋರಾಟಗಾರರಾಗಿದ್ದರು. ಈಗ ಸಾರಿಗೆ ಹೋರಾಟಗಾರರಾಗಿ ಬದಲಾಗಿದ್ದಾರೆ" ಎಂದು ಟೀಕಿಸಿದರು.
"ಪ್ರತಿಭಟನಾ ನಿರತ ನೌಕರರ ಬಗ್ಗೆ ಕಠಿಣ ಕ್ರಮದ ಬಗ್ಗೆ ಸಿಎಂ ಮಾತನಾಡಿದ್ದಾರೆ. ಕೂಡಲೇ ಸಾರಿಗೆ ನೌಕರರು ಕೆಲಸಕ್ಕೆ ಹಾಜರಾಗಬೇಕು. ಈಗಾಗಲೇ ರಾಜ್ಯದಲ್ಲಿ ಜನರಿಗೆ ತೊಂದರೆಯಾಗದಂತೆ ಪರ್ಯಾಯ ವ್ಯವಸ್ಥೆ ಮಾಡಿದ್ದೇವೆ. ನೌಕರರು ಮತ್ತೆ ಕರ್ತವ್ಯಕ್ಕೆ ಹಾಜರಾಗುವ ವಿಶ್ವಾಸವಿದೆ" ಎಂದು ಸಚಿವರು ಹೇಳಿದರು.












Click it and Unblock the Notifications