ಬೆಂಗಳೂರು-ಮಂಗಳೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ
ಮಂಗಳೂರು, ಅಕ್ಟೋಬರ್ 05: ಬೆಂಗಳೂರು ಮತ್ತು ಮಂಗಳೂರು ನಡುವೆ ಹೆಚ್ಚಿನ ರೈಲುಗಳ ಸಂಚಾರಕ್ಕೆ ನೈಋತ್ಯ ರೈಲ್ವೆ ಅಗತ್ಯ ವ್ಯವಸ್ಥೆಗಳನ್ನು ಮಾಡಿದೆ. 4.4 ಕೋಟಿ ರೂ.ಗಳ ವೆಚ್ಚದಲ್ಲಿ ಸಿಗ್ನಲ್ ವ್ಯವಸ್ಥೆಯನ್ನು ಉನ್ನತೀಕರಿಸಿದೆ.
ಹೊಸ ಸಿಗ್ನಲ್ ವ್ಯವಸ್ಥೆಯಿಂದಾಗಿ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಸಾಮರ್ಥ್ಯ ಶೇ 35ರಷ್ಟು ವೃದ್ಧಿಯಾಗಲಿದೆ. ಸರಕು ಸಾಗಣೆ ರೈಲು ಸಹ ಸಂಚಾರ ನಡೆಸಬಹುದಾಗಿದೆ. ನೈಋತ್ಯ ರೈಲ್ವೆ ಕೈಗೊಂಡಿದ್ದ ಕಾಮಗಾರಿ ಅಕ್ಟೋಬರ್ 1ಕ್ಕೆ ಪೂರ್ಣಗೊಂಡಿದೆ.
ಯಡಕಮುರಿ ಮತ್ತು ಕಡಗರವಳ್ಳಿ ನಿಲ್ದಾಣಗಳಲ್ಲಿ ರೈಲು ಕ್ರಾಸಿಂಗ್ ಸೌಲಭ್ಯಗಳು ಸಿಕ್ಕಿವೆ. ಇದರಿಂದಾಗಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚಿನ ರೈಲುಗಳನ್ನು ಓಡಿಸಲು ಇಲಾಖೆಗೆ ಸಹಕಾರಿಯಾಗಿದೆ. ಈಗ 13 ರೈಲುಗಳು ಸಂಚಾರ ನಡೆಸುತ್ತಿದ್ದು, ಅದನ್ನು 20ಕ್ಕೆ ಹೆಚ್ಚಿಸಲಾಗುತ್ತದೆ.

ಸಕಲೇಶಪುರ-ಸುಬ್ರಮಣ್ಯ ರಸ್ತೆ ನಡುವಿನ ಘಟ್ಟ ಪ್ರದೇಶದಲ್ಲಿ ಈ ಮಾರ್ಗ ಬರುತ್ತದೆ. 55 ಕಿ. ಮೀ.ಗಳ ಘಾಟ್ ಸೆಕ್ಷನ್ನಲ್ಲಿ ಒಂದು ರೈಲು ಬರುವಾಗ ಇನ್ನೊಂದು ರೈಲು ಸಂಚಾರ ನಡೆಸುವಂತಿರಲಿಲ್ಲ. ಆದ್ದರಿಂದ, ರೈಲು ಸಂಚಾರದ ಅವಧಿ ಹೆಚ್ಚಾಗುತ್ತಿತ್ತು.
4.4 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾದ ಹೊಸ ಸಿಗ್ನಲ್ ವ್ಯವಸ್ಥೆಗಳಿಂದ ಯಡಕಮುರಿ ಮತ್ತು ಕಡಗರವಳ್ಳಿ ನಿಲ್ದಾಣಗಳಲ್ಲಿ ರೈಲು ಕ್ರಾಸಿಂಗ್ ವ್ಯವಸ್ಥೆ ಸಿಕ್ಕಿದೆ. ಇದರಿಂದಾಗಿ ರೈಲುಗಳ ಸಂಚಾರದ ಅವಧಿ ಹೆಚ್ಚಳವಾಗಲಿದೆ.
ಜೂನ್ನಲ್ಲಿ ಹೊಸ ಸಿಗ್ನಲ್ ವ್ಯವಸ್ಥೆ ಕಾಮಗಾರಿಯನ್ನು ಆರಂಭಿಸಲಾಗಿತ್ತು. ಮೂರು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಂಡು ರೈಲು ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬೆಂಗಳೂರು-ಕರಾವಳಿ ಸಂಪರ್ಕಿಸಲು ಹೊಸ ರೈಲುಗಳನ್ನು ಓಡಿಸುವ ಕುರಿತು ನೈಋತ್ಯ ರೈಲ್ವೆ ತೀರ್ಮಾನ ಕೈಗೊಳ್ಳಬೇಕಿದೆ.












Click it and Unblock the Notifications