ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್ ನಾಥ್ ವಿಧಿವಶ
Recommended Video
ಮಂಗಳೂರು, ಅಕ್ಟೋಬರ್ 11: ಪ್ರಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲ್ ನಾಥ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಅವರು ಕೊನೆಯುಸಿರೆಳೆದರು.
ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ವ್ಯಕ್ತಿಚಿತ್ರ
ಸ್ಯಾಕ್ಸೋಫೋನ್ ವಾದಕರಾಗಿದ್ದ ಕದ್ರಿ ಅವರು ಕರ್ನಾಟಕ ಸಂಗೀತದಲ್ಲಿ ಅಚ್ಚಳಿಯದ ಹೆಜ್ಜೆಗುರುತು ನಿರ್ಮಿಸಿದವರು. ಸ್ಯಾಕ್ಸೋಫೋನ್ ಮೂಲಕ ವಿಶ್ವದೆಲ್ಲೆಡೆ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಮನೆಮಾತಾಗಿಸಿದ ಕೀರ್ತಿ ಕದ್ರಿ ಅವರಿಗೆ ಸಲ್ಲುತ್ತದೆ..
1950 ರ ಡಿಸೆಂಬರ್ 11 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಿಕೆರೆ ಎಂಬಲ್ಲಿ ಜನಿಸಿದರು.
ಇದೀಗ ತಮ್ಮ ಸ್ವರಯಾತ್ರೆಗೆ ವಿದಾಯ ಹೇಳಿರುವ ಕದ್ರಿ ಅವರು ಪತ್ನಿ, ಪುತ್ರ ಮತ್ತು ಅಪಾರ ಬಂಧು, ಅಭಿಮಾನಿ ಬಳಗವನ್ನು ಅಗಲಿದ್ದಾರೆ.
ಪದ್ಮಶ್ರೀ ಪುರಸ್ಕೃತ ಕದ್ರಿ ಅವ್ರು ಮೊದಲ ಬಾರಿಗೆ ಮೈಸೂರು ಅರಮನೆಯಲ್ಲಿ ಬ್ಯಾಂಡ್ ವೊಂದರಲ್ಲಿ ಸ್ಯಾಕ್ಸೋಫೋನ್ ನುಡಿಸುತ್ತಿದ್ದಿದ್ದುದನ್ನು ಕೇಳಿ ರೋಮಾಂಚನಗೊಂಡು ಸ್ಯಾಕ್ಸೋಫೋನ್ ಕಲಿಯುವ ಮನಸ್ಸು ಮಾಡಿದರು. ಮುಂದೊಮ್ಮೆ ಸ್ಯಾಕ್ಸೋಫೋನ್ ಚಕ್ರವರ್ತಿ ಎಂಬ ಬಿರುದನ್ನೂ ಪಡೆದು, ಸ್ಯಾಕ್ಸೋಫೋನ್ ಎಂದರೆ ಕದ್ರಿ ಗೋಪಾಲ್ ನಾಥ್ ಎಂಬಷ್ಟರ ಮಟ್ಟಿಗೆ ಅದರೊಂದಿಗೆ ಬೆರೆತರು, ಸಾಧಿಸಿದರು.
ಕದ್ರಿ ಅವರ ಅಗಲಿಕೆಗೆ ನಾಡಿನ ಸಂಗೀತ ದಿಗ್ಗಜರು, ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ