ತಳ್ಳಾಡಿ- ಶರ್ಟಿನ ಗುಂಡಿ ಕಿತ್ತು, ಸ್ವಕ್ಷೇತ್ರದಲ್ಲೇ ಖಾದರ್ ಗೆ ಅವಮಾನ
Recommended Video
ಮಂಗಳೂರು, ಅಕ್ಟೋಬರ್ 6: ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯುಟಿ ಖಾದರ್ ಅವರಿಗೆ ತಮ್ಮ ಸ್ವ ಕ್ಷೇತ್ರದಲ್ಲಿಯೇ ಜನರು ಬಹಿಷ್ಕಾರ ಹಾಕಿ, ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ. ಉಳ್ಳಾಲದಲ್ಲಿ ಈಚೆಗೆ ಕೊಲೆಯಾದ ಜುಬೇರ್ ಮನೆಗೆ ಭೇಟಿ ನೀಡಲು ಸಚಿವ ಯು.ಟಿ. ಖಾದರ್ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.
ಮಂಗಳೂರಲ್ಲಿ ಐಸಿಸ್ ಚಟುವಟಿಕೆ: ಹೇಳಿಕೆಗೆ ಖಾದರ್ ಗರಂ
ಉಳ್ಳಾಲದ ಮುಕ್ಕಚ್ಚೇರಿಯ ಕಿಲೇರಿಯಾ ನಗರ ಎಂಬಲ್ಲಿರುವ ಜುಬೇರ್ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಲು ಸಚಿವ ಯು.ಟಿ.ಖಾದರ್ ಶುಕ್ರವಾರ ಸಂಜೆ ತೆರಳಿದ್ದರು.
ಈ ಸಂದರ್ಭದಲ್ಲಿ ಸ್ಥಳೀಯರು ಸಚಿವ ಯು.ಟಿ ಖಾದರ್ ಅವರನ್ನು ಸ್ಥಳದಿಂದ ತೆರಳುವಂತೆ ಸೂಚಿಸಿದರು. ಜುಬೇರ್ ಅಂತ್ಯಸಂಸ್ಕಾರಕ್ಕೂ ಬಾರದ ಸಚಿವ ಯು.ಟಿ.ಖಾದರ್ ಈಗ ಮನೆಗೆ ಭೇಟಿ ನೀಡಲು ಬಂದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳೀಯರಿಗೂ ಹಾಗೂ ಯು.ಟಿ ಖಾದರ್ ಬೆಂಬಲಿಗರಿಗೂ ಮಾತಿನ ಚಕಮಕಿ ನಡೆದು, ಘರ್ಷಣೆ ನಡೆಯಿತು.
ಉದ್ರಿಕ್ತರಲ್ಲಿ ಕೆಲವರು ಖಾದರ್ ಅವರನ್ನು ತಳ್ಳಿ, ಶರ್ಟಿನ ಗುಂಡಿಗಳನ್ನೂ ಕಿತ್ತು ಹಾಕಿದರು. ಸಚಿವರ ಕಾರಿಗೆ ಉದ್ರಿಕ್ತರು ಕಲ್ಲೆಸೆಯಲು ಮುಂದಾದಾಗ ಪೊಲೀಸರ ರಕ್ಷಣೆಯಲ್ಲಿ ಖಾದರ್ ಸ್ಥಳದಿಂದ ಹೊರಟರು.