ಶಬರಿಮಲೆ ತೀರ್ಪಿನ ವಿರುದ್ಧ ಅ.9 ರಂದು ಮಂಗಳೂರಲ್ಲಿ ಬೃಹತ್ ಪ್ರತಿಭಟನೆ
ಮಂಗಳೂರು, ಅಕ್ಟೋಬರ್ 07 : ಶಬರಿಮಲೆ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆ. ಕೇರಳದಲ್ಲಿ ಈಗಾಗಲೇ ಬೃಹತ್ ಪ್ರತಿಭಟನೆಗಳು ಆರಂಭವಾಗಿವೆ. ಕರ್ನಾಟಕದಲ್ಲೂ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಆಕ್ರೋಶ ಬಲ ಪಡೆಯುತ್ತಿದೆ.
ಈ ನಡುವೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಬೃಹತ್ ಹೋರಾಟ ನಡೆಸಲು ಮಂಗಳೂರಿನ ಅಯ್ಯಪ್ಪ ಸೇವಾ ಸಮಿತಿ ನಿರ್ಧರಿಸಿದೆ.
ಹೋರಾಟದ ಪೂರ್ವಭಾವಿ ಸಭೆ ಶನಿವಾರ ಸಂಜೆ ನಗರದ ಸಂಘನಿಕೇತನದಲ್ಲಿ ನಡೆಸಲಾಯಿತು. ಮೊದಲ ಹಂತವಾಗಿ ಅಕ್ಟೋಬರ್ 9 ರಂದು ಸಂಜೆ ಕದ್ರಿ ಮೈದಾನದಲ್ಲಿ ಮಹಿಳೆಯರು ಸೇರಿದಂತೆ ಸಹಸ್ರಾರು ಜನ ಸೇರಿ ಪ್ರತಿಭಟನೆ ನಡೆಸಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಭಜನೆಯ ಮೂಲಕ ಶ್ರೀ ಕ್ಷೇತ್ರ ಕದ್ರಿಗೆ ತೆರಳಿ ಪ್ರಾರ್ಥನೆ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯಲ್ಲಿ ಪಾಲ್ಗೊಂಡ ವಿವಿಧೆಡೆಯ ಅಯ್ಯಪ್ಪಸ್ವಾಮಿ ಭಕ್ತರು, ಸಂಘಟನೆಗಳ ಪ್ರಮುಖರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ತಮ್ಮ ತಮ್ಮ ವ್ಯಾಪ್ತಿಯ ಪುಣ್ಯ ಕ್ಷೇತ್ರಗಳಲ್ಲಿ ಪೂಜೆ ಸಲ್ಲಿಸಿ ಆ ಬಳಿಕ ಕದ್ರಿ ಮೈದಾನದಲ್ಲಿ ಸೇರುವಂತೆ ಸೂಚನೆ ನೀಡಲಾಗಿದೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ಆರ್ ಎಸ್ಎಸ್ ನ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್, ಇಡೀ ದೇಶವನ್ನು ಒಗ್ಗೂಡಿಸಿದ ಶಕ್ತಿಯ ಕ್ಷೇತ್ರವೆಂದರೆ ಅದು ಶಬರಿಮಲೆ.
ಅತ್ಯಂತ ಶ್ರದ್ಧಾ ಭಕ್ತಿಯಿಂದ ಕೋಟ್ಯಂತರ ಮಂದಿ ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದರೆ ಪರಂಪರೆಯಿಂದ ಬಂದ ಜನತೆಯ ನಂಬಿಕೆಗೆ ಧಕ್ಕೆ ತರುವ ಕೆಲಸ ಸುಪ್ರೀಂ ಕೋರ್ಟ್ ತೀರ್ಪಿನ ಮೂಲಕ ಆಗಿದೆ ಎಂದು ಅಭಿಪ್ರಾಯಪಟ್ಟರು.

ಕೇರಳ ಸರಕಾರ ತೀರ್ಪಿನ ಮರು ಪರಿಶೀಲನೆಗೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲೇಬೇಕು. ಭಕ್ತರ ಧಾರ್ಮಿಕ ಭಾವನೆಗೆ ಮೊದಲ ಅವಕಾಶ ನೀಡಬೇಕು. ಅಲ್ಲಿವರೆಗೆ ಹೋರಾಟ ನಿಲ್ಲಬಾರದು ಎಂದು ಕರೆ ನೀಡಿದರು.
ಹಿಂದು ಸಮಾಜ ಮಹಿಳಾ ವಿರೋಧಿಯಲ್ಲ, ಶಬರಿಮಲೆಗೆ ಮಹಿಳೆಯರಿಗೆ ನಿಷೇಧವನ್ನೂ ಹೇರಿಲ್ಲ. 10 ನೇ ವಯಸ್ಸಿನೊಳಗಿನ ಮತ್ತು 50 ವರ್ಷ ಮೇಲ್ಪಟ್ಟ ಮಹಿಳೆಯರು ಶಬರಿ ಮಲೆಗೆ ಬರಲು ಹಿಂದಿನಿಂದಲೂ ಅವಕಾಶವಿದೆ. ಆದರೆ ಶಬರಿಮಲೆ ಏನೆಂದೇ ಗೊತ್ತಿರದ ಮಂದಿ ಕೋರ್ಟ್ ಮೆಟ್ಟಿಲೇರುವ ಮೂಲಕ ಪರಂಪರೆಗೆ ಪೆಟ್ಟು ನೀಡುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದರು.











Click it and Unblock the Notifications