Mangaluru-Vijayapura Train: ಮಂಗಳೂರು-ವಿಜಯಪುರ ರೈಲು ವಿಸ್ತರಣೆ, ವೇಳಾಪಟ್ಟಿ ಬದಲು
ಮಂಗಳೂರು, ಡಿಸೆಂಬರ್ 28: ರೈಲ್ವೆ ಇಲಾಖೆ ಕರಾವಳಿ, ಉತ್ತರ ಕರ್ನಾಟಕ ಭಾಗದ ಜನರಿಗೆ ಸಿಹಿಸುದ್ದಿಯನ್ನು ನೀಡಿದೆ. ಮಂಗಳೂರು-ವಿಜಯಪುರ ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಮತ್ತೆ ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ. ಆದರೆ ಮೂರು ವರ್ಷಗಳಿಂದ ಸಂಚಾರ ನಡೆಸುತ್ತಿರುವ ರೈಲನ್ನು ಖಾಯಂಗೊಳಿಸಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಇಲಾಖೆ ಮನ್ನಣೆ ನೀಡಿಲ್ಲ. ಕರ್ನಾಟಕ ಕರಾವಳಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ಪ್ರಮುಖ ರೈಲು ಇದಾಗಿದೆ.
ರೈಲು ನಂಬರ್ 07377/ 07378 ಮಂಗಳೂರು-ವಿಜಯಪುರ ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಜೂನ್ 2025ರ ತನಕ ವಿಸ್ತರಣೆ ಮಾಡಲಾಗಿದೆ. ಈ ರೈಲನ್ನು ಖಾಯಂಗೊಳಿಸಿದರೆ ದರಗಳು ಕಡಿಮೆಯಾಗಲಿವೆ. ಆದರೆ ಈ ಕುರಿತು ಬೇಡಿಕೆ ಸಲ್ಲಿಸಿದರೂ ಸಹ ಇಲಾಖೆ ಅದನ್ನು ಪರಿಗಣಿಸಿಲ್ಲ.

ವೇಳಾಪಟ್ಟಿ ಬದಲು: ರೈಲ್ವೆ ಇಲಾಖೆ ಮಂಗಳೂರು-ವಿಜಯಪುರ ನಡುವಿನ ಪ್ರತಿದಿನದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಯನ್ನು ಜೂನ್ 2025ರ ತನಕ ವಿಸ್ತರಣೆ ಮಾಡಿದೆ. ಅಲ್ಲದೇ ಜನವರಿ 1, 2025ರಿಂದ ಜಾರಿಗೆ ಬರುವಂತೆ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿದೆ.
ರೈಲು ನಂಬರ್ 07377 ವಿಜಯಪುರ-ಮಂಗಳೂರು ಸೆಂಟ್ರಲ್ ರೈಲು 3.35ರ ಬದಲು 3 ಗಂಟೆಗೆ ಹೊರಡಲಿದೆ. ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಈಗಿರುವ ವೇಳಾಪಟ್ಟಿಯಂತೆಯೇ ಮರುದಿನ ಬೆಳಗ್ಗೆ 9.50ಕ್ಕೆ ತಲುಪಲಿದೆ.
ವಾಪಸ್ ತೆರಳುವ ಮಾರ್ಗದಲ್ಲಿ ರೈಲು ನಂಬರ್ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ 2.35ಕ್ಕೆ ಹೊರಟು, ಮರುದಿನ ಬೆಳಗ್ಗೆ 9.35ಕ್ಕೆ ವಿಜಯಪುರ ತಲುಪಲಿದೆ.
ರೈಲು ನಂಬರ್ 07377 ಸೇವೆಯನ್ನು ಜೂನ್ 30, 2025 ಮತ್ತು ರೈಲು ನಂಬರ್ 07378 ಸೇವೆಯನ್ನು ಜುಲೈ 1, 2025ರ ತನಕ ವಿಸ್ತರಣೆ ಮಾಡಲಾಗಿದೆ. ಈ ವರ್ಷದ ಏಪ್ರಿಲ್ನಲ್ಲಿ ಈ ರೈಲನ್ನು ಪ್ರಯಾಣಿಕರ ಬೇಡಿಕೆಯಂತೆ ಮಂಗಳೂರು ಜಂಕ್ಷನ್ನಿಂದ, ಮಂಗಳೂರು ಸೆಂಟ್ರಲ್ ತನಕ ವಿಸ್ತರಣೆ ಮಾಡಲಾಗಿತ್ತು.
ಈ ರೈಲು ಮಂಗಳೂರು-ವಿಜಯಪುರ ನಡುವೆ ಬೇಡಿಕೆಯ ಮೇಲೆ ಎಕ್ಸ್ಪ್ರೆಸ್ ವಿಶೇಷ ರೈಲು (ಟಿಒಡಿ) ಆಧಾರದ ಮೇಲೆಯೇ ಸಂಚಾರವನ್ನು ನಡೆಸಲಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ವಿಶೇಷ ಎಕ್ಸ್ಪ್ರೆಸ್ ರೈಲು ಎಂಬ ಕಾರಣಕ್ಕೆ ಟಿಕೆಟ್ ದರಗಳು ಹೆಚ್ಚಿರುತ್ತದೆ. ರೈಲನ್ನು ಖಾಯಂಗೊಳಿಸಿ ಟಿಕೆಟ್ ದರ ಇಳಿಕೆ ಮಾಡಿ ಹೆಚ್ಚಿನ ಪ್ರಯಾಣಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಬೇಡಿಕೆಗೆ ಈ ಬಾರಿಯೂ ಮನ್ನಣೆ ಸಿಕ್ಕಿಲ್ಲ.
ಈ ರೈಲು ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಭಾಗದ ದೇವಾಲಯಗಳಿಗೆ ಆಗಮಿಸುವ ಭಕ್ತರಿಗೆ. ಉಡುಪಿ, ಮಣಿಪಾಲ ಭಾಗಕ್ಕೆ ಆರೋಗ್ಯ ಸೇವೆ ಪಡೆಯು, ವಿದ್ಯಾಭ್ಯಾಸ ಮಾಡಲು ಉತ್ತರ ಕರ್ನಾಟಕ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ. ಆದರೆ ಇದನ್ನು ಖಾಯಂಗೊಳಿಸಲು ಇನ್ನೂ ಸಹ ಇಲಾಖೆ ಮುಂದಾಗಿಲ್ಲ.
ದಕ್ಷಿಣ ಕನ್ನಡ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್, ವಿಜಯಪುರ ಸಂಸದ ರಮೇಶ್ ಜಿಗಜಿಣಗಿ, ದಕ್ಷಿಣ ಕನ್ನಡ ರೈಲ್ವೆ ಪ್ರಯಾಣಿಕರ ವೇದಿಕೆ ಸೇರಿದಂತೆ ವಿವಿಧ ರೈಲ್ವೆ ಬಳಕೆದಾರರ ಸಂಘಟನೆಗಳು ರೈಲನ್ನು ಖಾಯಂಗೊಳಿಸುವಂತೆ ಇಲಾಖೆಗೆ ಬೇಡಿಕೆ ಸಲ್ಲಿಸಿವೆ. ಆದರೆ ಅದನ್ನು ಇಲಾಖೆ ಪರಿಗಣಿಸಿಲ್ಲ.












Click it and Unblock the Notifications