ಮಂಗಳೂರು-ಬೆಂಗಳೂರು: ಏ. 9ರಂದು ’ಕುಡ್ಲ ಎಕ್ಸ್ಪ್ರೆಸ್’ಗೆ ಚಾಲನೆ
ಮಂಗಳೂರು-ಬೆಂಗಳೂರು ಹಗಲು ರೈಲು 'ಕುಡ್ಲ ಎಕ್ಸ್ಪ್ರೆಸ್ ' ಸಂಚಾರಕ್ಕೆ ಏಪ್ರಿಲ್ 9ರಂದು ಚಾಲನೆ ದೊರೆಯಲಿದೆ. ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್ (ಕಂಕನಾಡಿ)ನಿಂದ ಈ ರೈಲು ಓಡಾಟ ನಡೆಸಲಿದೆ.
ಮಂಗಳೂರು, ಏಪ್ರಿಲ್ 6: ಮಂಗಳೂರು-ಬೆಂಗಳೂರು ಹಗಲು ರೈಲು 'ಕುಡ್ಲ ಎಕ್ಸ್ಪ್ರೆಸ್ ' ಸಂಚಾರಕ್ಕೆ ಏಪ್ರಿಲ್ 9ರಂದು ಚಾಲನೆ ದೊರೆಯಲಿದೆ.
ಕುಡ್ಲ ಎಕ್ಸ್ ಪ್ರೆಸ್ ರೈಲನ್ನು ಫ್ಲ್ಯಾಟ್ಫಾರಂ ಹಾಗೂ ನಿಲುಗಡೆಗೆ ಅವಕಾಶ ಇಲ್ಲ ಎಂಬ ಕಾರಣಕ್ಕೆ ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್ (ಕಂಕನಾಡಿ)ನಿಂದ ಓಡಿಸಲು ಅವಕಾಶ ಮಾಡಿಕೊಡಲಾಗಿದೆ ಎಂದು ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ತಿಳಿಸಿದೆ.[ಮಂಗಳೂರಿನಲ್ಲಿ ತೆಂಗಿನ ಮರದೆತ್ತರಕ್ಕೇರಿದ ಎಳನೀರು ಬೆಲೆ!]

ಮಂಗಳೂರು ಜಂಕ್ಷನ್ನಿಂದ ಏ. 9ರಂದು ಬೆಳಗ್ಗೆ 11.00 ಗಂಟೆಗೆ ರೈಲು ಸಂಚಾರಕ್ಕೆ ಚಾಲನೆ ದೊರೆಯಲಿದೆ. ರೈಲ್ವೆ ಸಚಿವ ಸುರೇಶ್ ಪ್ರಭು ಅವರು ದಿಲ್ಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಕುಡ್ಲ ಎಕ್ಸ್ಪ್ರೆಸ್ಗೆ ಗ್ರೀನ್ ಸಿಗ್ನಲ್ ತೋರಿಸಲಿದ್ದಾರೆ. ಈ ನಡುವೆ ಕುಡ್ಲ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದ ಬದಲು ಮಂಗಳೂರು ಜಂಕ್ಷನ್ನಿಂದ ಓಡಿಸುವುದನ್ನು ವಿರೋಧಿಸಿ ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಸಂಘ ಸೇರಿದಂತೆ ವಿವಿಧ ರೈಲ್ವೆ ಯಾತ್ರಿಕರ ಸಂಘ ಸಮಾರಂಭವನ್ನು ಬಹಿಷ್ಕರಿಸಲು ನಿರ್ಧರಿಸಿವೆ.
ಮೈಸೂರು ಮಾರ್ಗವಾಗಿ ಸಂಚಾರ ಮಾಡುತ್ತಿದ್ದ ಮಂಗಳೂರು-ಬೆಂಗಳೂರು ಹಗಲು ರೈಲು ಕೂಡ ಮಂಗಳೂರು ಜಂಕ್ಷನ್ನಿಂದಲೇ ನಷ್ಟದಲ್ಲಿ ಓಡಾಟ ನಡೆಸುತ್ತಿತ್ತು. ಕಂಕನಾಡಿ ರೈಲ್ವೆ ನಿಲ್ದಾಣದ ವರೆಗೆ ಆಟೋರಿಕ್ಷಾಕ್ಕೆ 150 ರೂ. ಬಾಡಿಗೆ ಕೊಟ್ಟು ರೈಲಿನಲ್ಲಿ ತೆರಳಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದರು. ಹೊಸ ರೈಲು ಯಾನವನ್ನು ಕಂಕನಾಡಿ ರೈಲ್ವೆ ನಿಲ್ದಾಣದಿಂದ ಆರಂಭಿಸಿದರೆ ಅದು ಕೂಡ ನಷ್ಟದಲ್ಲೇ ಓಡಾಡುವ ಸಾಧ್ಯತೆಯೇ ಹೆಚ್ಚು ಎಂದು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿಕರ ಸಂಘ ಅಭಿಪ್ರಾಯಪಟ್ಟಿದೆ.[ತಿಂಗಳೊಳಗೆ ಕುಡ್ಲ ಎಕ್ಸ್ ಪ್ರೆಸ್ ರೈಲು ಸಂಚಾರ: ಸುರೇಶ್ ಪ್ರಭು]
ಭಾರತೀಯ ರೈಲ್ವೆ ಮಂಡಳಿಯು ಸೆಂಟ್ರಲ್ನಿಂದ ರೈಲ್ವೇ ಓಡಾಟಕ್ಕೆ ಅವಕಾಶ ನೀಡಿದರೂ ರೈಲು ನಿಲುಗಡೆಗೆ ಸ್ಥಳಾವಕಾಶ ಇಲ್ಲ ಎಂಬ ಸುಳ್ಳು ನೆಪವನ್ನು ದಕ್ಷಿಣ ರೈಲ್ವೆಯ ಪಾಲ್ಘಾಟ್ ವಿಭಾಗ ನೀಡುತ್ತಿದೆ ಎಂದು ಯಾತ್ರಿಕರ ಸಂಘ ಆಪಾದಿಸಿದೆ.
ಆದರೆ ಹೊಸ ಫ್ಲ್ಯಾಟ್ಫಾರಂ ನಿರ್ಮಿಸಲು ಕನಿಷ್ಠ ಪಕ್ಷ ಮೂರು ವರ್ಷಗಳ ಕಾಲಾವಕಾಶ ಬೇಕಾಗುತ್ತದೆ. ಹೀಗಾಗಿ ಮಂಗಳೂರು ಸೆಂಟ್ರಲ್ನಲ್ಲಿ ನೂತನ ಫ್ಲ್ಯಾಟ್ಫಾರಂ ನಿರ್ಮಿಸುವವರೆಗೆ ಅಲ್ಲಿಂದ ಕುಡ್ಲ ಎಕ್ಸ್ಪ್ರೆಸ್ ಬಿಡಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಕುಡ್ಲಾ ಎಕ್ಸ್ ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ಬದಲಿಗೆ ಮಂಗಳೂರು ಜಂಕ್ಷನ್ (ಕಂಕನಾಡಿ)ನಿಂದ ಓಡಿಸಲು ನಿರ್ಧರಿಸಲಾಗಿದೆ.












Click it and Unblock the Notifications