ನಳೀನ್ ವಿರುದ್ಧ ಸುದ್ದಿ ಪ್ರಸಾರಕ್ಕೆ ತಡೆಯಾಜ್ಞೆ
ಮಂಗಳೂರು, ಮೇ.15: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರವರ ವಿರುದ್ಧ ಅನೈತಿಕ ಸಂಬಂಧ ಪ್ರಕರಣ ಕುರಿತಂತೆ ಸುದ್ದಿ ಪ್ರಸಾರಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಲಾಗಿದೆ. ಮಂಗಳೂರು ಜಿಲ್ಲಾ ರಜಾಕಾಲದ ನ್ಯಾಯಾಲಯ ಗುರುವಾರ ಈ ರೀತಿ ಆದೇಶ ಹೊರಡಿಸಿದೆ.
ತನ್ನ ವಿರುದ್ಧ ಕೆಲವೊಂದು ಸುದ್ದಿ ಮಾಧ್ಯಮಗಳು ಅಪಪ್ರಚಾರ ಮಾಡುತ್ತಿದ್ದು, ತನಿಖೆ ಹಂತದಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದಿ ಬಿತ್ತರಿಸುತ್ತಿದ್ದು ಇದರ ವಿರುದ್ಧ ತಡೆಯಾಜ್ಞೆ ನೀಡಬೇಕೆಂದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ರವರು ಮಂಗಳೂರು ಜಿಲ್ಲಾ ರಜಾಕಾಲದ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.ಮಾನ್ಯ ನ್ಯಾಯಾಲಯವು ಈ ಸಂಬಂಧ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.
O/S No 15/2014 ಮೂಲ ದಾವೆಯಲ್ಲಿ ಸತೀಶ್ ಶೆಟ್ಟಿ ನೀಡಿರುವ ದೂರಿನ ಬಗ್ಗೆ ಅಥವಾ ಅದಕ್ಕೆ ಸಂಬಂಧಪಟ್ಟ ಯಾವುದೇ ವಿಷಯವನ್ನು ದೃಶ್ಯ ಮಾಧ್ಯಮದಲ್ಲಿ ಪ್ರಕಟಿಸುವುದಕ್ಕೆ ಹಾಗೂ ಬಿತ್ತರಿಸುವುದಕ್ಕೆ ಮಾನ್ಯ ನ್ಯಾಯಾಲಯವು ಮಧ್ಯಂತರ ತಡೆಯಾಜ್ಞೆಯನ್ನು ನೀಡಿರುತ್ತದೆ.
ನ್ಯಾಯಾಲಯದಲ್ಲಿ ನ್ಯಾಯವಾದಿ ಶಂಭು ಶರ್ಮರವರು ನಳಿನ್ ಕುಮಾರ್ ಕಟೀಲ್ ಅವರ ಪರವಾಗಿ ವಾದಿಸಿದ್ದು ನ್ಯಾಯಾಲಯ ನೀಡಿದ ಆದೇಶ ತಕ್ಷಣ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಅವರ ವಿರುದ್ಧ ಸತೀಶ್ ಶೆಟ್ಟಿ ಎಂಬುವರು ನೀಡಿದ ದೂರಿನ ಅನ್ವಯ ಬಂದರು ಠಾಣೆಯಲ್ಲಿ ನಳೀನ್ ಕುಮಾರ್ ಕಟೀಲು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ನಳೀನ್ ಕುಮಾರ್ ಕಟೀಲು ಹಾಗೂ ನನ್ನ ಪತ್ನಿ ವಿನುತಾ ಶೆಟ್ಟಿ ನಡುವೆ ಅಕ್ರಮ ಸಂಬಂಧವಿದೆ ಎಂದು ಉಡುಪಿ ಮೂಲದ ಮುಂಬೈ ನಿವಾಸಿ ಸತೀಶ್ ಶೆಟ್ಟಿ ಅವರು ಆರೋಪಿಸಿದ್ದಾರೆ. ಸಂಸದ ನಳಿನ್ ಕುಮಾರ್ ಹಾಗೂ ವಿನುತಾ ಶೆಟ್ಟಿ ಇಬ್ಬರೂ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇಷ್ಟು ದಿನ ಸುಮ್ಮನಿದ್ದು ಈಗ ದೂರು ನೀಡಲು ಮುಖ್ಯ ಕಾರಣ, ನರೇಂದ್ರ ಮೋದಿ ಹಾಗೂ ಬಿಜೆಪಿ ಮರ್ಯಾದೆ ಪ್ರಶ್ನೆ ಹಾಗೂ ನನ್ನ ಜೀವಕ್ಕೆ ಅಪಾಯವಿದೆ ಹೀಗಾಗಿ ಪೊಲೀಸರ ಮೊರೆ ಹೊಕ್ಕಿದ್ದೇನೆ ಎಂದು ಸತೀಶ್ ಹೇಳಿದ್ದಾರೆ.












Click it and Unblock the Notifications