ಲವ್ ಸೆಕ್ಸ್ ದೋಖಾ; ಆರೋಪಿಯ ರಕ್ಷಣೆಗೆ ನಿಂತ್ರಾ ರಮಾನಾಥ ರೈ?
ಮಂಗಳೂರು, ಏಪ್ರಿಲ್ 30: ಪ್ರೀತಿಸಿದ ಯುವಕನ ಜತೆ ಮದುವೆ ಕನಸು ಕಂಡು, ಅದೇ ಕನಸು ಕಣ್ಣೆದುರು ನುಚ್ಚು ನೂರಾಗಿ ನೋವಿನಿಂದ ಬಳಲುತ್ತಿರುವ ಬಂಟ್ವಾಳದ ಯುವತಿಯ ಕಥೆಯಿದು. ಮೂಲತಃ ಬಂಟ್ವಾಳದವಳಾಗಿರುವ ಯುವತಿ ಮಂಗಳೂರಿನ ಎನ್ಎಂಸಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಳು.
ಕಾರ್ಯಕ್ರಮ ಒಂದರಲ್ಲಿ ನೋಡಿದ್ದ ಈಕೆಯನ್ನು ನೋಡಿ, ನಾಟಕ ಕಂಪನಿಯಲ್ಲಿ ಅವಕಾಶ ಕೊಡುತ್ತೇನೆಂದು ಹೇಳಿ, ಕೊನೆಗೆ ತನ್ನದೇ ನಾಟಕ ತಂಡದಲ್ಲಿ ಪಾತ್ರ ನೀಡಿದ್ದ ಕಾಂಗ್ರೆಸ್ ಮುಖಂಡ ಪುರುಷೋತ್ತಮ ಕೊಯಿಲ.
ಸೋಲಿನ ಭೀತಿಯಲ್ಲಿ ಎಸ್ಡಿಪಿಐ ಜೊತೆ ರೈ ಮೈತ್ರಿ: ಹರಿಕೃಷ್ಣ ಬಂಟ್ವಾಳ
ಬಳಿಕ ಪ್ರೇಮದ ನಾಟಕವಾಡಿದ್ದ ಆತ ಮದುವೆಯಾಗುವುದಾಗಿ ನಂಬಿಸಿ, ದೈಹಿಕ ಸಂಪರ್ಕ ಬೆಳೆಸಿದ್ದ. ಅಶ್ಲೀಲ ವಿಡಿಯೋ ಮಾಡಿ ಜಾಲತಾಣಕ್ಕೆ ಹರಿಬಿಟ್ಟು ಯುವತಿಯ ಮಾನ ಹರಾಜು ಹಾಕಿದ್ದ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಬಹುದು ಎಂದುಕೊಂಡ ಆತ ಕೊನೆಗೆ ಯುವತಿ ಜತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡ. ಕಳೆದ ಮಾರ್ಚ್ 4ರಂದು ಮದುವೆಗೆ ದಿನಾಂಕ ಫಿಕ್ಸ್ ಮಾಡಿ ಆತ ಮದುವೆ ಕಾಗದವನ್ನೂ ಮುದ್ರಿಸಿದ್ದ.
ಆದರೆ, ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಆರೋಪಿ ಪುರುಷೋತ್ತಮ, ಮದುವೆಗೆ ನಿರಾಕರಿಸಿ ವಂಚಿಸಿದ್ದಲ್ಲದೇ, ತಲೆ ಮರೆಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.
ಬಡ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಕಾಮತೃಷೆ ತೀರಿಸಿಕೊಂಡು ವಂಚಿಸಿದ ಈ ಕಾಂಗ್ರೆಸ್ ಮುಖಂಡನ ವಿರುದ್ಧ ಯುವತಿಯು ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾಳೆ. ಇನ್ನು ಕಾಂಗ್ರೆಸ್ ಮುಖಂಡನ ರಕ್ಷಣೆಗೆ ಸಚಿವ ರಮಾನಾಥ ರೈಯವರ ಆಪ್ತ ಹಾಗೂ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಗದೀಶ್ ಕೊಯ್ಲ ನಿಂತಿದ್ದಾರೆ ಎಂದು ಆರೋಪಿಸಲಾಗಿದೆ.
ಯುವತಿ ತನ್ನ ದೂರಿನಲ್ಲಿ ಜಗದೀಶ, ಪುರುಷೋತ್ತಮ ಮತ್ತು ಪ್ರವೀಣ ಎಂಬ ಮೂವರ ವಿರುದ್ಧ ಬಂಟ್ವಾಳ ನಗರ ಠಾಣೆಗೆ ದೂರು ನೀಡಿದ್ದಾಳೆ. ಮೊದಲು ಮದುವೆಗೆ ನಕಾರ ವ್ಯಕ್ತಪಡಿಸುತ್ತಿದ್ದ ಆರೋಪಿ, ಇದೀಗ ರಮಾನಾಥ ರೈ ಚುನಾವಣೆ ಗೆದ್ದರೆ ಮಾತ್ರ ಮದುವೆಯಾಗ್ತೀನಿ ಎಂದಿದ್ದಾನಂತೆ.
"ಪ್ರಾರಂಭದಲ್ಲೇ ತನಗಾದ ಮೋಸದ ಕುರಿತು ಪೊಲೀಸರಿಗೆ ದೂರು ನೀಡಿದ್ದೆ. ಈ ವೇಳೆ ರೈ ಆಪ್ತರಿಂದ ಪೊಲೀಸರಿಗೂ ಸಾಕಷ್ಟು ಒತ್ತಡ ಬಂದಿತ್ತು. ಇದರಿಂದಾಗಿ ಪ್ರಕರಣ ದಾಖಲಿಸಲು ಪೊಲೀಸರು ಹಿಂಜರಿದಿದ್ದರು," ಎಂದು ಸಂತ್ರಸ್ಥ ಯುವತಿ ಆರೋಪಿಸಿದ್ದಾಳೆ.
ತನ್ನ ನೋವಿನ ಕತೆ ಸಚಿವ ರಮಾನಾಥ ರೈಯವರಿಗೆ ಗೊತ್ತಿದ್ದರೂ ಆರೋಪಿಗಳು ಕಾಂಗ್ರೆಸ್ ಕಾರ್ಯಕರ್ತರೆಂಬ ನೆಲೆಯಲ್ಲಿ ಸಚಿವ ರಮಾನಾಥ್ ರೈ ರಕ್ಷಣೆ ಮಾಡುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ಪ್ರಸ್ತುತ ಆರೋಪಿಗಳು ತಲೆಮರೆಸಿಕೊಂಡಿದ್ದು, ಪ್ರಕರಣ ದಾಖಲಾಗಿ 3 ದಿನವಾದ್ರೂ ಪೊಲೀಸರು ಆರೋಪಿಗಳನ್ನು ಬಂಧಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.