ಲಾಕ್ಡೌನ್ ಎಫೆಕ್ಟ್; ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಆದಾಯದಲ್ಲಿ ಭಾರೀ ಇಳಿಕೆ
ಮಂಗಳೂರು, ಏಪ್ರಿಲ್ 18: ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ದಕ್ಷಿಣ ಕನ್ನಡ ಜಿಲ್ಲೆಯ ನಾಗಕ್ಷೇತ್ರ ಸುಬ್ರಹ್ಮಣ್ಯದ ವಾರ್ಷಿಕ ಆದಾಯದಲ್ಲಿ ಭಾರೀ ಇಳಿಕೆ ಕಂಡುಬಂದಿದೆ.
ಕುಕ್ಕೆ ಸುಬ್ರಹ್ಮಣ್ಯ ದೇಗುಲದ 2020 ಎಪ್ರಿಲ್ ನಿಂದ 2021 ಮಾರ್ಚ್ 31ರ ತನಕ ವಾರ್ಷಿಕ ಆದಾಯದ ಲೆಕ್ಕಾಚಾರ ಮಾಡಲಾಗಿದ್ದು, ಕಳೆದ ಬಾರಿಗಿಂತ ಈ ಬಾರಿ 29 ಕೋಟಿ ರೂಪಾಯಿ ಇಳಿಕೆ ಕಂಡುಬಂದಿದೆ. ಈ ಬಾರಿ ಅರವತ್ತೆಂಟು ಕೋಟಿ ತೊಂಬತ್ನಾಲ್ಕು ಲಕ್ಷ ಎಂಬತ್ತೆಂಟು ಸಾವಿರದ ಮೂವತ್ತೊಂಬತ್ತು ರೂಪಾಯಿ ಹದಿನೇಳು ಪೈಸೆ (68,94,88,039.17) ಆದಾಯ ಕಂಡು ಬಂದಿದ್ದು, ಕಳೆದ ಬಾರಿಗಿಂತ 29,97,36,154.17 ರೂ. ಆದಾಯ ಕಡಿಮೆ ಬಂದಿದೆ.
ಕಳೆದ ವರ್ಷ ಮಾರ್ಚ್ 17ರಿಂದ ಸೆ.8ರ ತನಕ ಲಾಕ್ಡೌನ್ ಹಿನ್ನೆಲೆಯಲ್ಲಿ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿತ್ತು. ಮತ್ತು ದೇವಸ್ಥಾನ ಸಂಪೂರ್ಣ ಬಂದ್ ಆಗಿತ್ತು. ಲಾಕ್ಡೌನ್ ತೆರವಾದ ಬಳಿಕವೂ ಹಲವು ಕಾಲ ಸೇವೆಗಳು ಸಂಪೂರ್ಣವಾಗಿ ನಡೆದಿರಲಿಲ್ಲ. ಹೀಗಾಗಿ ಸೆಪ್ಟೆಂಬರ್ 15 ರಿಂದ ಮಾರ್ಚ್ 31ರವರೆಗಿನ ತನಕದ ಆದಾಯ ಇದಾಗಿದೆ.

ದೇವಸ್ಥಾನಕ್ಕೆ ಪ್ರಮುಖವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ ಕಟ್ಟಡ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ. ಎಲ್ಲವನ್ನು ಸೇರಿಸಿ ಈ ವರ್ಷದ ಆದಾಯ 68 ಕೋಟಿ 94 ಲಕ್ಷದ 88 ಸಾವಿರದ 039 ರೂಪಾಯಿ 17 ಪೈಸೆ ಆದಾಯ ಬಂದಿದೆ.
ದಕ್ಷಿಣಕನ್ನಡ ಜಿಲ್ಲೆ ಸುಳ್ಯ ತಾಲ್ಲೂಕಿನ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯ, ದೇಶಾದ್ಯಂತ ಭಕ್ತರು ಬರುತ್ತಾರೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಈ ನಿಟ್ಟಿನಲ್ಲಿ ಭಕ್ತರ ಅನುಕೂಲಕ್ಕಾಗಿ ಸರ್ಕಾರ ಹಲವು ಯೋಜನೆಗಳನ್ನು ಮಾಡುತ್ತಿದೆ. ಈಗಾಗಲೇ 180 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಸ್ಟರ್ ಪ್ಲಾನ್ ಯೋಜನೆಯ ಹಲವು ಕಾಮಗಾರಿ ನಡೆಯುತ್ತಿದೆ. ವಸತಿಗೃಹ ನಿರ್ಮಾಣ, ಶೌಚಾಲಯ, ಸಮಗ್ರ ನೀರು ಸರಬರಾಜು ಯೋಜನೆ, ಚರಂಡಿ ವ್ಯವಸ್ಥೆ, ರಸ್ತೆ ನಿರ್ಮಾಣ ಯೋಜನೆ ಪ್ರಗತಿಯಲ್ಲಿದೆ.












Click it and Unblock the Notifications