ಲಾಕ್ ಡೌನ್; ಕಾರ್ಮಿಕರಿಗೆ ಮನೆಯಲ್ಲಿ ಆಶ್ರಯ ಕೊಟ್ಟ ಬೆಳ್ತಂಗಡಿ ಕೃಷಿಕ!
ಮಂಗಳೂರು, ಮೇ 07; ಲಾಕ್ ಡೌನ್ ಎಲ್ಲರಿಗೂ ಒಂದೇ ತರ ಇರಲ್ಲ ಎಂಬ ಮಾತಿದೆ. ಸ್ಥಿತಿವಂತರಿಗೆ ವಿಶ್ರಾಂತಿ ನೀಡಿದರೆ, ಬಡವನಿಗೆ ಮಾತ್ರ ಹೊಟ್ಟೆ ತುಂಬಿಸುವ ಯೋಚನೆಯೇ ಜಾಸ್ತಿ ಇರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಳ್ಳಿಯಲ್ಲಿ ಲಾಕ್ ಡೌನ್ ಪರಿಣಾಮ ಸಿಲುಕಿದ್ದ ಕಾರ್ಮಿಕರಿಗೆ ಕೃಷಿಕರೋರ್ವರು ತಮ್ಮ ಮನೆಯಲ್ಲೇ ಆಶ್ರಯ ನೀಡಿ ಉದಾರತೆ ಮೆರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆಯ ಕಾಪು ಎಂಬಲ್ಲಿ ಕಿಂಡಿ ಅಣೆಕಟ್ಟು ಕಾಮಗಾರಿ ನಡೆಯುತ್ತಿದ್ದು, ಸರಿಸುಮಾರು ಒಂದೂವರೆ ತಿಂಗಳಿನಿಂದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೇರಳದ ಗುತ್ತಿಗೆದಾರ ನಡೆಸುವ ಈ ಕಾಮಗಾರಿಯಲ್ಲಿ ಉತ್ತರ ಕರ್ನಾಟಕ ಮೂಲದ ಪುರುಷ, ಮಹಿಳೆಯರು ಸೇರಿ 20ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದರು.
ಗುತ್ತಿಗೆದಾರ ಎಲ್ಲಾ ಕಾರ್ಮಿಕರಿಗೆ ಕಾಮಗಾರಿ ನಡೆಯುವ ಸ್ಥಳದಿಂದ 10 ಕಿ. ಮೀ. ದೂರದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದ. ಆದರೆ ಲಾಕ್ ಡೌನ್ ಆರಂಭವಾದ ಬಳಿಕ ಕಾರ್ಮಿಕರಿಗೆ ತಮ್ಮ ವಸತಿ ಪ್ರದೇಶಕ್ಕೆ ತೆರಳಲು ಕಷ್ಟವಾಗಿದ್ದರಿಂದ ಸ್ಥಳೀಯ ಕೃಷಿಕ ಸಚಿನ್ ಭಿಡೆ ತಮ್ಮ ಮನೆಯಲ್ಲೇ ಕಾರ್ಮಿಕರಿಗೆ ಆಶ್ರಯ ನೀಡಿದ್ದಾರೆ.

ಕಾರ್ಮಿಕರು ಊರಿಗೆ ಹೋಗಲೂ ಆಗದೆ, ವಸತಿ ಸ್ಥಳಕ್ಕೂ ತೆರಳಲೂ ಆಗದೇ ಕಂಗಾಲಾಗಿದ್ದ ಸಮಯದಲ್ಲಿ ಸಚಿನ್ ಭಿಡೆ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ತಮ್ಮ ಮನೆಯಲ್ಲೇ ಕಾರ್ಮಿಕರಿಗೆ ಆಶ್ರಯ ನೀಡಿ ಮಾನವೀಯತೆ ಮೆರೆದಿದ್ದಾರೆ.
ತಮ್ಮ ವಿಶಾಲವಾದ ಮನೆಯಲ್ಲಿ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದು, ಕೊರೊನಾ ಮುನ್ನಚ್ಚೆರಿಕಾ ಕಾರಣದಿಂದ ಮನೆ ಎದುರು ಭಾಗದಲ್ಲಿ ಟೆಂಟ್ ವ್ಯವಸ್ಥೆ ಮಾಡಿಕೊಡಲಾಗಿದೆ. ಅಗತ್ಯ ಸಂದರ್ಭದಲ್ಲಿ ಕಾರ್ಮಿಕರಿಗೆ ಆಹಾರ ಸಾಮಾಗ್ರಿ, ಔಷಧ ವ್ಯವಸ್ಥೆಯನ್ನು ಮಾಡಿದ್ದಾರೆ.

ಲಾಕ್ ಡೌನ್ ಮುಗಿಯುವ ತನಕ ಕಾರ್ಮಿಕರಿಗೆ ವಸತಿ ವ್ಯವಸ್ಥೆ ತಮ್ಮದೇ ಮನೆಯಲ್ಲಿ ಮಾಡಿಕೊಡುವುದಾಗಿ ಹೇಳಿರುವ ಸಚಿನ್, ಸಂಕಷ್ಟದ ಕಾಲದಲ್ಲಿ ಕಾರ್ಮಿಕರಿಗೆ ನೆರವಾಗಿದ್ದಾರೆ.
ಬಹುತೇಕ ಕಾರ್ಮಿಕರು ಗದಗ ಮತ್ತು ಬೆಳಗಾವಿ ಜಿಲ್ಲೆಯವರಾಗಿದ್ದು, ಮಹಿಳೆ ಮತ್ತು ಮಕ್ಕಳನ್ನು ಒಳಗೊಂಡಿದ್ದಾರೆ. ಅದರಲ್ಲೂ ಬೆಳ್ತಂಗಡಿ ತಾಲೂಕಿನಲ್ಲಿ ಕಳೆದೊಂದು ವಾರದಿಂದ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಭಾರೀ ಮಳೆ, ಚಳಿಗೆ ಕಷ್ಟಪಡುತ್ತಿದ್ದ ಕಾರ್ಮಿಕರು ಬೆಚ್ಚನೆಯ ಸೂರು ನೀಡಿರುವುದಕ್ಕೆ ಸಚಿನ್ ಭಿಡೆಗೆ ಧನ್ಯವಾದ ಸಲ್ಲಿಸಿದ್ದಾರೆ.











Click it and Unblock the Notifications