ಪಾಕಿಸ್ತಾನದಲ್ಲಿದ್ದಾನೆ ಕೇರಳದ ಮೋಸ್ಟ್ ವಾಂಟೆಡ್ ಶಂಕಿತ ಉಗ್ರ
ಮಂಗಳೂರು, ಮೇ 09:ಕೇರಳ ಉಗ್ರಗಾಮಿ ಚಟುವಟಿಕೆಗಳ ಕೇಂದ್ರವಾಗುತ್ತಿದೆ. ವಿಶ್ವದ ಅತ್ಯಂತ ಕ್ರೂರ ಉಗ್ರಗಾಮಿ ಸಂಘಟನೆ ಐಎಸ್ ಐಎಸ್ ಕೇರಳದಲ್ಲಿ ಬೇರೂರುತ್ತಿದ್ದು, ತನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ಕೇರಳದ ಯುವಕರನ್ನು ಸೆಳೆಯುತ್ತಿದೆ.
ಶ್ರೀಲಂಕಾ ಸರಣಿ ಬಾಂಬ್ ಸ್ಫೋಟದ ಬಳಿಕ ದೇಶದಲ್ಲಿ ಉಗ್ರಗಾಮಿ ಚಟುವಟಿಕೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ ಹದ್ದಿನ ಕಣ್ಣಿಟ್ಟಿದೆ. ಅದರಲ್ಲೂ ಕೇರಳದಲ್ಲಿ ನಡೆಯುತ್ತಿರುವ ಪ್ರತಿಯೊಂದು ಚಟುವಟಿಗೆಗಳ ಮೇಲೆ ನಿಗಾ ಇಟ್ಟಿದೆ.
ಕೇರಳದಲ್ಲಿ ಉಗ್ರಗಾಮಿ ಚಟುವಟಿಕೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಕಣ್ಣೂರು ಮರಕ್ಕಾರ್ ಕಂಡಿ ನಿವಾಸಿ ಕೊಚ್ಚುಪಿಡಿಯಾಕಲ್ ಮೊಹಮ್ಮದ್ ಸಬೀರ್ ಯಾನೆ ಅಯೂಬ್ ಪಾಕಿಸ್ತಾನದಲ್ಲಿ ಅವಿತಿರುವ ಆಘಾತಕಾರಿ ವಿಚಾರ ಎನ್ ಐಎ ಬಹಿರಂಗಪಡಿಸಿದೆ.

ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಆತನಿಗೆ ಪಾಸ್ಪೋರ್ಟ್ ನೀಡಿ ಸಂರಕ್ಷಿಸುತ್ತಿದೆ ಎಂದು ಎನ್ಐಎ ತಿಳಿಸಿದೆ.
ಮೊಹಮ್ಮದ್ ಸಬೀರ್ ವರ್ಷಗಳ ಹಿಂದೆಯೇ ಕೇರಳದಿಂದ ದುಬೈಗೆ ಪರಾರಿಯಾಗಿ ತಲೆಮರೆಸಿಕೊಂಡಿದ್ದ. ಅತನ ಬಂಧನಕ್ಕೆ ನ್ಯಾಯಾಲಯ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ನಡೆಸಿದಾಗ ಆತ ಪಾಕಿಸ್ತಾನದ ರಾವಲ್ಪಿಂಡಿಯಲ್ಲಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈತನನ್ನು ಇಂಟರ್ಪೋಲ್ ಮುಖಾಂತರ ಬಂಧಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎನ್ಐಎ ತಿಳಿಸಿದೆ.
ಕೇರಳದ ಮೂವರನ್ನು ಐಸಿಸ್ ಸಂಬಂಧಿಸಿದ ಪ್ರಕರಣದಲ್ಲಿ ಆರೋಪಿಗಳೆಂದು ಎನ್ ಐಎ ಇತ್ತೀಚೆಗೆ ಗುರುತಿಸಿತ್ತು. ಕಾಸರಗೋಡಿನ ಇಬ್ಬರು ಸೇರಿದಂತೆ ಮೂವರನ್ನು ರಾಷ್ಟ್ರೀಯ ತನಿಖಾ ದಳ ಆರೋಪಿಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿತ್ತು . ಈ ಹಿನ್ನೆಲೆಯಲ್ಲಿ ಎನ್ ಐಎ ತಂಡ ತನಿಖೆ ಆರಂಭಿಸಿತ್ತು .












Click it and Unblock the Notifications