ಹಜ್ಜಾಜಿಗಳ ಸೇವೆಯಲ್ಲಿ ನಿರತರಾದ ಕೆಸಿಎಫ್ ಸ್ವಯಂ ಸೇವಕರು
ಮಕ್ಕಾ, ಸೌದಿ ಅರೇಬಿಯಾ, ಸೆಪ್ಟೆಂಬರ್ 3: ವಿವಿಧ ರಾಷ್ಟ್ರಗಳಿಂದ ಆಗಮಿಸಿದ ಹಜ್ಜ್ ಯಾತ್ರಾರ್ಥಿಗಳಿಗೆ ಸೇವೆ ಮಾಡುವುದರಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಹಜ್ಜ್ ಸ್ವಯಂ ಸೇವಕರು ನಿರತರಾಗಿದ್ದಾರೆ.
ಹಜ್ಜ್ ಗಾಗಿ ಆಗಮಿಸಿದ ಹಾಜಿಗಳಿಗೆ ಕೊಠಡಿಗಳನ್ನು ತೋರಿಸುವಲ್ಲಿ, ಹಾಜಿಗಳನ್ನು ಜಂರಾತ್ ಗೆ (ಶೈತಾನನಿಗೆ ಕಲ್ಲು ಬಿಸಾಡುವ ಸ್ಥಳ) ಕರೆದುಕೊಂಡು ಹೋಗಿ ಕಲ್ಲು ಬಿಸಾಡಲು, ಲಕ್ಷಾಂತರ ಜನರ ನಡುವೆ ಕೊಠಡಿಗಳ ದಾರಿ ತಪ್ಪಿದ ಹಾಜಿಗಳನ್ನು ಕೊಠಡಿಗೆ ತಲುಪಿಸುವಲ್ಲಿ ಕೆಸಿಎಫ್ ಕಾರ್ಯಕರ್ತರು ಹಾಜಿಗಳಿಗೆ ನೆರವಾಗಿದ್ದಾರೆ.
(ಚಿತ್ರಕೃಪೆ - ಹಕೀಂ ಬೋಳಾರ್)

ಅನಾರೋಗ್ಯ ಹಾಜಿಗಳಿಗೆ ಸಹಾಯ
ಮಾತ್ರವಲ್ಲ ಅನಾರೋಗ್ಯ ಪೀಡಿತ ಹಾಜಿಗಳನ್ನು ಆಸ್ಪತ್ರೆಗೆ ತಲುಪಿಸಿ ಔಷಧಿ ಪಡೆಯಲು ಸಹಾಯ ಹಸ್ತ ನೀಡಿದ್ದಾರೆ. ನಡೆಯಲು ಅಶಕ್ತರಾದ ಹಜ್ಜಾಜಿಗಳನ್ನು ಗಾಲಿ ಕುರ್ಚಿಯಲ್ಲಿಯೇ ಜಂರಾತ್ ತಲುಪಿಸಿ ಪುನಃ ಅವರ ಕೊಠಡಿ ಗಳಿಗೆ ತಲುಪಿಸಿದ್ದಾರೆ.

ಎಲ್ಲೆಡೆಯಿಂದ ಶ್ಲಾಘನೆ
ಕೆ.ಸಿಎಫ್ ಕಾರ್ಯಕರ್ತರ ಸೇವೆಯನ್ನು ವಿವಿಧ ರಾಷ್ಟ್ರಗಳ ಹಜ್ಜಾಜಿಗಳು, ಸೌದಿ ಹೆಲ್ತ್ ಮಿನಿಸ್ಟ್ರಿ ಸಿಬ್ಬಂದಿಗಳು, ಸೌದಿ ಪ್ರಜೆಗಳು, ಸೇರಿದಂತೆ ಸೌದಿ ಪೋಲೀಸ್ ಇಲಾಖೆಯೂ ಕೂಡ ಪ್ರಶಂಸಿರುವುದು ಶ್ಲಾಘನೀಯ.

ಕುಟುಂಬದಿಂದ ಬೇರ್ಪಟ್ಟ ಹಾಜಿಗಳಿಗೆ ಸಹಾಯ
ಲಕ್ಷಾಂತರ ಹಾಜಿಗಳ ನಡುವೆ ಕುಟುಂಬದ ಸದಸ್ಯರಿಂದ ಬೇರ್ಪಟ್ಟ ಹಾಜಿಗಳನ್ನು ತಮ್ಮ ಕೊಠಡಿಗೆ ತಲುಪಿಸಲು ಕರ್ನಾಟಕ ಕಲ್ಚರಲ್ ಫೌಂಡೇಶನ್ ನ ಕಾರ್ಯಕರ್ತರು ಹರಸಾಹಸಪಟ್ಟರು.

ಅಲ್ಲಾಹನ ಸೇವೆ
"ಹಜ್ಜಾಜಿಗಳ ಸೇವೆ ಅಲ್ಲಾಹನ ಸೇವೆ ಎಂಬ ನೆಲೆಯಲ್ಲಿ ನಾವು ಹಾಜಿಗಳ ಸೇವೆ ಮಾಡುತ್ತಿದ್ದೇವೆ. ಈ ಬಾರಿಯೂ ಕೆಸಿಎಫ್ ಹಜ್ಜ್ ಸ್ವಯಂ ಸೇವಕರು ದಿನದ 24ಗಂಟೆ ಹಾಜಿಗಳ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ," ಎಂದು ಕೆಸಿಎಫ್ ಹಜ್ಜ್ ವಾಲೇಂಟಿಯರ್ ಕೋರ್ ಚೇರ್ಮೇನ್ ಹನೀಫ್ ಮಂಜನಾಡಿ, ಕೆಸಿಎಫ್ ಹಜ್ಜ್ ವಾಲೇಂಟಿಯರ್ ಕೋರ್ ಕನ್ವೀನರ್ ಅಬೂಬಕ್ಕರ್ ತಂಙಳ್, ಕೆಸಿಎಫ್ ರಾಷ್ಟ್ರೀಯ ಅಧ್ಯಕ್ಷ ಡಿ.ಪಿ.ಯೂಸುಫ್ ಸಖಾಫಿ ಬೈತಾರ್, ಕೆಸಿಎಫ್ ರಾಷ್ಟ್ರೀಯ ಕಾರ್ಯದರ್ಶಿ ಫಾರೂಕ್ ಕಾಟಿಪಳ್ಳ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.












Click it and Unblock the Notifications