'ರಫೇಲ್ ಒಪ್ಪಂದದಲ್ಲಿ ಕೇಂದ್ರ ಪಾರದರ್ಶಕತೆ ತೋರುತ್ತಿಲ್ಲ'
ಮಂಗಳೂರು, ಡಿಸೆಂಬರ್ 18: ರಫೇಲ್ ಒಪ್ಪಂದದಲ್ಲಿ ಕೇಂದ್ರ ಪಾರದರ್ಶಕತೆ ತೋರುತ್ತಿಲ್ಲ. ರಫೇಲ್ ಡೀಲ್ ಹಗರಣದ ಬಗ್ಗೆ ಜಂಟಿ ಸದನ ಸಮಿತಿ ರಚಿಸಿ ಪ್ರಕರಣದ ತನಿಖೆ ನಡೆಸಬೇಕು ಎಂದು ಕೇಂದ್ರ ಮಾಜಿ ಸಚಿವ ಪಲ್ಲಂ ರಾಜು ಒತ್ತಾಯಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು ರಫೇಲ್ ಡೀಲ್ ಬಗ್ಗೆ ಕೇಂದ್ರ ಸರ್ಕಾರದ ಸುಳ್ಳು ಅಫಿಡವಿಟನ್ನು ನಂಬಿ ಸುಪ್ರೀಂ ವಿಚಾರಣೆಗೆ ನಿರಾಕರಿಸಿದೆ. ರಫೇಲ್ ಒಪ್ಪಂದದ ಬಗ್ಗೆ ಸುಪ್ರೀಂ ಕೋರ್ಟ್ಗೆ ಕೇಂದ್ರ ಸರಕಾರದಿಂದ ತಪ್ಪು ಮಾಹಿತಿ ರವಾನೆಯಾಗಿದೆ ಎಂದು ಆರೋಪಿಸಿದರು.
ರಫೇಲ್ ಒಪ್ಪಂದ ದೇಶದ ರಕ್ಷಣಾ ವಿಭಾಗಗಕ್ಕೆ ಸಂಬಂಧಿಸಿದ ಅತ್ಯಂತ ದೊಡ್ಡ ಹಗರಣ. ಎಚ್ಎಎಲ್ ದೇಶದ ರಕ್ಷಣಾ ವಿಭಾಗಕ್ಕೆ ವಿಮಾನ ತಯಾರಿಸಲು ಸಾಮರ್ಥ್ಯ ಹೊಂದಿರುವ 40ವರ್ಷಗಳ ಅನುಭವ ಹೊಂದಿರುವ ಏಕೈಕ ಸಂಸ್ಥೆ. ಇದನ್ನು ಹೊರತು ಪಡಿಸಿ ಇನ್ನೊಂದು ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕಾರಣವೇನು ? ಎಂದು ಅವರು ಪ್ರಶ್ನಿಸಿದರು.

ವಿಮಾನ ಖರೀದಿಗೆ ಸಂಬಂಧಿಸಿದಂತೆ ಯುಪಿಎ ಸರಕಾರ ಇರುವಾಗ ಆಗಿರುವ ಒಪ್ಪಂದವನ್ನು ಬದಲಾಯಿಸಿ ರಫೇಲ್ ಮೂಲಕ ರಿಲಾಯೆನ್ಸ್ ಡಿಫೆನ್ಸ್ ಲಿಮಿಟೆಡ್ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಕಾರಣವೇನು ?ಖರೀದಿಸುವ ವಿಮಾನದ ಮೊತ್ತವನ್ನು ಮೂರು ಪಟ್ಟಿಗಿಂತಲೂ ಹೆಚ್ಚಿಸಿದ ಕಾರಣವೇನು ? ಇದರಿಂದ ದೇಶದ ಬೊಕ್ಕಸಕ್ಕೆ 41,205 ಕೋಟಿ ರೂಪಾಯಿ ನಷ್ಟವಾಗಲಿದೆ.
ಈ ಹಗರಣವನ್ನು ದೇಶದ ಜನರ ಮುಂದೆ ಬಹಿರಂಗ ಪಡಿಸಬೇಕಾದ ಹೊಣೆಗಾರಿಕೆ ದೇಶದ ಪ್ರಧಾನಿ ಅವರಿಗೆ ಇದೆ ಎಂದು ಪಲ್ಲಂ ರಾಜು ತಿಳಿಸಿದರು.












Click it and Unblock the Notifications