ದಕ್ಷ ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಲ್ಲಿ ಉಳಿಗಾಲವಿಲ್ಲವೇ?

ಮಂಗಳೂರು, ಜೂನ್ 26: ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರ್ಷಗಳು ಕಳೆದಂತೆ ವಿವಿಧೆಡೆ ಕೋಮು ಸಂಘರ್ಷ ದಿನೇ ದಿನೇ ಉಲ್ಬಣಗೊಳ್ಳುತ್ತಿದೆ. ಪೊಲೀಸರ ಕಣ್ಣಮುಂದೆಯೇ ಪ್ರತಿನಿತ್ಯ ಹೆಣಗಳು ಬೀಳುತ್ತಿವೆ.

ಇಷ್ಟಾದರೂ ಪೊಲೀಸರು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಇದನ್ನು ಜಿಲ್ಲೆಯ ಪೊಲೀಸರಿಂದಲೇ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಪೊಲೀಸರು ಯಾಕೆ ಅಸಹಾಯಕರಾಗುತ್ತಿದ್ದಾರೆ? ಹಾಗಾದರೆ ಜಿಲ್ಲೆಯಲ್ಲಿ ಉತ್ತಮ ಪೊಲೀಸರಿಲ್ಲವೇ? ಇಂತಹ ಹಲವು ಪ್ರಶ್ನೆಗಳು ಈಗ ಜಿಲ್ಲೆಯ ಜನರ ಶಾಂತಿ ಕೆಡಿಸಿವೆ. ಇದಕ್ಕೆಲ್ಲಾ ಉತ್ತರ ಹುಡುಕುತ್ತಾ ಹೋದರೆ ಹಲವು ಆಯಾಮಗಳು ತೆರೆದುಕೊಳ್ಳುತ್ತವೆ.

ಪೊಲೀಸರಿಂದ ಯಾಕೆ ಕೋಮುಗಲಭೆ ನಿಯಂತ್ರಿಸಲಾಗುತ್ತಿಲ್ಲ?

ಈ ಪ್ರಶ್ನೆ ಪ್ರತಿಯೊಬ್ಬ ಜನಸಾಮಾನ್ಯನನ್ನೂ ಕಾಡುತ್ತಿದೆ. ಹಾಗಾದರೆ ಜಿಲ್ಲೆಯಲ್ಲಿ ದಕ್ಷ ಅಧಿಕಾರಿಗಳಿಲ್ಲವೇ? ಇದ್ದಾರೆ. ಆದರೆ, ಅವರನ್ನು ಕಾಣದ ಕೈಗಳು ಕಟ್ಟಿಹಾಕುತ್ತಿವೆ ಎಂಬ ಮಾತು ಪೊಲೀಸ್ ವಲಯದಿಂದಲೇ ಕೇಳಿಬರುತ್ತಿದೆ. ಈ ಪ್ರಶ್ನೆಗೆ ಪುಷ್ಟಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರೇ ಪೊಲೀಸ್ ವರಿಷ್ಠಾಧಿಕಾರಿಯನ್ನು ಪಕ್ಷದ ಕಾರ್ಯಕರ್ತರ ಮುಂದೆ ಪ್ರಶ್ನಿಸಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

ರಾಜಕೀಯ ನಾಯಕರು ತಾವು ಹೇಳುವ ವ್ಯಕ್ತಿಗಳ ಮೇಲೆ ಕೇಸ್ ದಾಖಲಿಸಿ ಎನ್ನುವಷ್ಟರ ಮಟ್ಟಿಗೆ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಸತ್ಯ ಜನರ ಮುಂದೆ ಬೆತ್ತಲಾಗಿದೆ. ತಾವು ಹೇಳಿದ ವ್ಯಕ್ತಿಗಳನ್ನು ಮಾತ್ರ ಜಿಲ್ಲೆಗೆ ಅಧಿಕಾರಿಯಾಗಿ ನೇಮಿಸಬೇಕೆಂಬ ಮನಸ್ಥಿತಿ ನಾಯಕರಲ್ಲಿದೆ. ಜೊತೆಗೆ ಜಿಲ್ಲೆಯಲ್ಲಿ ಕೆಲಸ ಮಾಡುವ ಅಧಿಕಾರಿಗಳು ತಾವು ಹೇಳಿದಂತೆ ಕೆಲಸ ಮಾಡಬೇಕು. ಯಾವುದೇ ರೀತಿಯ ಕಾನೂನು ಕ್ರಮ ಕೈಗೊಂಡಾಗಲೂ ನಾಯಕರನ್ನು ಕೇಳಿ ಮುಂದುವರೆಯಬೇಕೆಂಬ ಅಲಿಖಿತ ನಿಯಮ ಜಿಲ್ಲೆಯಲ್ಲಿದೆ. ಇಂತಹ ಪರಿಸ್ಥಿತಿ ಇರುವಾಗ ಅಧಿಕಾರಿಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವೇ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಕೋಮು ಗಲಭೆ ಸಂದರ್ಭದಲ್ಲಿಯೇ ಎಸ್‍ಪಿ ಎತ್ತಂಗಡಿ

ಕೋಮು ಗಲಭೆ ಸಂದರ್ಭದಲ್ಲಿಯೇ ಎಸ್‍ಪಿ ಎತ್ತಂಗಡಿ

ಸದ್ಯ ಜಿಲ್ಲೆಯಲ್ಲಿ ಗಲಾಟೆಗಳು ನಡೆಯುತ್ತಿರುವ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಗುಲಾಬ್ ರಾವ್ ಬೊರಸೆಯವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇಂತಹ ಬೆಳವಣಿಗೆ ಏಕೆ ನಡೆಯುತ್ತಿದೆ ಎಂಬುವುದನ್ನು ಜನರು ಪ್ರಶ್ನಿಸುತ್ತಿದ್ದಾರೆ.

ಬೊರಸೆಯವರು ಒಬ್ಬ ದಕ್ಷ ಅಧಿಕಾರಿ ಜತೆಗೆ ಮೃದು ಸ್ವಭಾವದ ವ್ಯಕ್ತಿ. ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುವ ಅಧಿಕಾರಿಯಾಗಿದ್ದರು. ಆದರೆ ಅವರನ್ನು ಅಸಮರ್ಥ ಅಧಿಕಾರಿ ಎಂಬುವುದಾಗಿ ಬಿಂಬಿಸಿ ಸರಕಾರ ಬೆಂಗಳೂರಿಗೆ ವರ್ಗಾವಣೆ ಮಾಡಿದೆ.

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ಉಪಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯ ರಜೆ ಮೇಲೆ ಕಳುಹಿಸಿದ್ದಾರೆ. ಯಾಕೆ ಈ ಬೆಳವಣಿಗೆಗಳು ಜಿಲ್ಲೆಯಲ್ಲಿ ನಡೆಯುತ್ತಿವೆ ಎಂದು ಜನರು ರಾಜಕೀಯ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ.

ಮಾತು ಕೇಳದಿದ್ದರೆ ಎತ್ತಂಗಡಿ ಶಿಕ್ಷೆ

ಮಾತು ಕೇಳದಿದ್ದರೆ ಎತ್ತಂಗಡಿ ಶಿಕ್ಷೆ

ಇಲಾಖೆಯಲ್ಲಿ ತಮ್ಮ ಮಾತು ಕೇಳದ ಅಧಿಕಾರಿಗಳನ್ನು ಕೆಲವೇ ತಿಂಗಳುಗಳಲ್ಲಿ ಎತ್ತಂಗಡಿ ಮಾಡುವ ವ್ಯವಸ್ಥಿತ ಪಿತೂರಿ ಜಿಲ್ಲೆಯಲ್ಲಿದೆ. ಇದಕ್ಕೆ ತಾಜಾ ಉದಾಹರಣೆ ಪೊಲೀಸ್ ಆಯುಕ್ತ ಚಂದ್ರಶೇಖರ್, ಮಂಗಳೂರು ಗ್ರಾಮಾಂತರ ಠಾಣೆಯ ಪ್ರಮೋದ್, ಭಾರತೀ ಮತ್ತಿತರರು. ಇವರ ಜೊತೆಗೆ ಈ ಹಿಂದೆ ಜಿಲ್ಲೆಗೆ ಬಂದ ಎಷ್ಟೋ ದಕ್ಷ ಅಧಿಕಾರಿಗಳು ಬರಿಗೈಯಲ್ಲಿ ಹಿಂತಿರುಗಿದ ಘಟನೆಗಳಿಗೆ ಲೆಕ್ಕವೇ ಇಲ್ಲ.

ಇಲ್ಲಿ ಯಾವುದೇ ಧರ್ಮದ ವ್ಯಕ್ತಿಗಳು ಬಂಧನವಾದಾಗ ಸಂಬಂಧಪಟ್ಟ ಸಂಘಟನೆಗಳು ಠಾಣೆಗೆ ಮುತ್ತಿಗೆ ಹಾಕುತ್ತವೆ. ಈ ಸಮಯದಲ್ಲಿ ರಾಜಕೀಯ ನಾಯಕರು, ಸಂಘಟನೆಯ ನಾಯಕರು ತಮ್ಮವರನ್ನು ಓಲೈಸುವ ಮತ್ತು ರಕ್ಷಿಸುವ ದೃಷ್ಟಿಯಿಂದ ಅಧಿಕಾರಿಗಳಿಗೆ ಆರೋಪಿಗಳನ್ನು ಬಿಡುವಂತೆ ತಾಕೀತು ಮಾಡುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಾಯಕರ ಕೈಗೊಂಬೆಗಳಾಗಿದ್ದಾರೆ.

ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಬೇಕು

ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಬೇಕು

"ನಾನು ಜಿಲ್ಲೆಯ ನಾಗರೀಕನಾಗಿ ಬೇಡುವುದು ಇಷ್ಟೇ ನಮಗೆ ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ಬೇಕು. ಯಾರೇ ಆದರೂ ಸರಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ ಮಾಡುವವರನ್ನು ಜಿಲ್ಲೆಯಿಂದ ಗಡಿಪಾರು ಮಾಡಿ. ನಮ್ಮ ಜಿಲ್ಲೆ ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ. ಆ ಮೂಲಕ ಬುದ್ದಿವಂತರ ಜಿಲ್ಲೆಯ ಹೆಸರಿಗೆ ಅಂಟಿರುವ ಕಪ್ಪು ಚುಕ್ಕೆಯನ್ನು ಅಳಿಸುವ" ಎನ್ನುತ್ತಾರೆ ನಗರ ನಿವಾಸಿಯಾದ ತೇಜ್‍ಕುಮಾರ್.

ಜನರ ಮಾನಸದಲ್ಲಿ 'ಸೂಪರ್‍ ಕಾಪ್' ಆದ ಅಧಿಕಾರಿಗಳು

ಜನರ ಮಾನಸದಲ್ಲಿ 'ಸೂಪರ್‍ ಕಾಪ್' ಆದ ಅಧಿಕಾರಿಗಳು

ಕೆಲದಿನಗಳ ಹಿಂದೆ ಬೇರೆಡೆ ವರ್ಗಾವಣೆಯಾದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಶೇಖರ್ ಜನಮಾನಸದಲ್ಲಿ ಜನಪ್ರಿಯರಾಗಿದ್ದರು. ಆರ್.ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣ, ಮಂಗಳೂರಿಗೆ ಪಿಣರಾಯಿ ವಿಜಯನ್ ಭೇಟಿ ಸಂದರ್ಭ ಅತ್ಯಂತ ಚಾಣಾಕ್ಷತನದಿಂದ ಗಲಭೆಯನ್ನು ನಿಯಂತ್ರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಕಟೀಲು ದುರ್ಗಾಪರಮೇಶ್ವರಿ ದೇವಳದ ಅವಹೇಳನ ಪ್ರಕರಣ ಹೀಗೆ ಹತ್ತು ಹಲವು ಪ್ರಕರಣವನ್ನು ದಡ ಮುಟ್ಟಿಸಿದ ಕೀರ್ತಿ ಚಂದ್ರಶೇಖರ್ ಗೆ ಸಲ್ಲುತ್ತದೆ.

ಪೇದೆಯಿಂದ ಹಿಡಿದು ಅಧಿಕಾರಿಗಳ ಉತ್ತಮ ಕೆಲಸಕ್ಕೆ ಪ್ರೋತ್ಸಾಹ ನೀಡಿದ್ದನ್ನು ಇಲ್ಲಿನ ಪೊಲೀಸ್ ಅಧಿಕಾರಿಗಳು ಈಗಲೂ ಮರೆಯುತ್ತಿಲ್ಲ. ನಗರದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ 'ಫೋನ್ ಇನ್ ಕಾರ್ಯಕ್ರಮ' ನಡೆಸಿದ್ದು, ಸಾಮಾನ್ಯ ಜನರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದ ರೀತಿಯನ್ನು ಯಾರೂ ಮರೆಯಲಾರರು. ಇದರ ಜೊತೆ ಈ ಹಿಂದೆ ಜಿಲ್ಲೆಯಲ್ಲಿ ಕೆಲಸ ಮಾಡಿದ ಲೇಡಿ ಸಿಂಗಂ ಪ್ರಖ್ಯಾತಿ ಪಡೆದ ಭಾರತೀ, ಪ್ರಮೋದ್, ಪ್ರಕಾಶ್ ಹೀಗೆ ಹತ್ತು ಹಲವು ದಕ್ಷ ಅಧಿಕಾರಿಗಳನ್ನು ಈ ಜಿಲ್ಲೆ ಕಂಡಿದೆ.

ಅಣ್ಣಾಮಲೈ ಬರುವಂತೆ ಜನಸಾಮಾನ್ಯರ ಆಗ್ರಹ

ಅಣ್ಣಾಮಲೈ ಬರುವಂತೆ ಜನಸಾಮಾನ್ಯರ ಆಗ್ರಹ

ರಾಜ್ಯದ್ಯಾಂತ ಪ್ರಸಿದ್ದಿ ಪಡೆದಿರುವ ಅಣ್ಣಾಮಲೈ, ರವಿ.ಡಿ.ಚೆನ್ನಣ್ಣವರ್ ಅವರಂತಹ ಕಟ್ಟುನಿಟ್ಟಿನ ಅಧಿಕಾರಿಗಳನ್ನು ಜಿಲ್ಲೆಗೆ ನಿಯೋಜನೆ ಮಾಡುವಂತೆ ಜನರೇ ಕೇಳಿಕೊಂಡರೂ ಅವರು ಜಿಲ್ಲೆಗೆ ಬರುತ್ತಿಲ್ಲ.

ಸದ್ಯ ಅಣ್ಣಾಮಲೈಗೆ ಜಿಲ್ಲೆಯ ಭದ್ರತಾ ಉಸ್ತುವಾರಿ ಕೊಟ್ಟಿದ್ದಕ್ಕೆ ಜನರು ನಿಟ್ಟುಸಿರು ಬಿಡುವಂತಾಗಿದೆ. ಅವರು ಉಡುಪಿ ಜಿಲ್ಲೆಯಿಂದ ವರ್ಗಾವಣೆಯಾಗುವಾಗ ದ.ಕ ಜಿಲ್ಲೆಗೆ ಬರಲಿ ಎಂಬ ದೊಡ್ಡ ಮಟ್ಟದ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿತ್ತು. ಸದ್ಯ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿರುವುದರಿಂದ ಅಣ್ಣಾಮಲೈ ಅವರನ್ನು ಇಂತಹ ಕೋಮುಸೂಕ್ಷ್ಮ ಜಿಲ್ಲೆಗೆ ನೇಮಿಸುವುದು ದೊಡ್ಡ ವಿಷಯವಲ್ಲ. ಆದರೂ ರಾಜಕೀಯ ನಾಯಕರು ಯಾಕೆ ಮನಸು ಮಾಡುತ್ತಿಲ್ಲ ಎಂಬುವುದು ಜನಸಾಮಾನ್ಯರ ಪ್ರಶ್ನೆಯಾಗಿದೆ.

ಬೇಕಾಗಿದ್ದು ಕೋಮು ಸಾಮರಸ್ಯ

ಬೇಕಾಗಿದ್ದು ಕೋಮು ಸಾಮರಸ್ಯ

ಇಲ್ಲಿನ ಜನರಿಗೆ ಈಗ ಮುಖ್ಯವಾಗಿ ಬೇಕಾದದ್ದು ಕೋಮುಸಾಮರಸ್ಯ ಜೊತೆಗೆ ಶಾಂತಿ. ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇದೆ. ಇನ್ನು ಗಲಾಟೆಗಳು ಜಾಸ್ತಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಆದ್ದರಿಂದ ಜಿಲ್ಲೆಗೆ ದಕ್ಷ ಅಧಿಕಾರಿಗಳನ್ನು ನೇಮಿಸಿ ಹಾಗೂ ಅವರು ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಅನುವು ಮಾಡಿಕೊಡಲಿ ಎಂಬುವುದು ಜನರ ಆಶಯ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+