ಮಂಗಳೂರು ಜಿಲ್ಲಾಡಳಿತದ ನಿರ್ಲಕ್ಷ್ಯ:ಕಳೆಗುಂದಿದ ಕರಾವಳಿ ಉತ್ಸವ
ಮಂಗಳೂರು, ಡಿಸೆಂಬರ್ 26: ಮಂಗಳೂರಿನಲ್ಲಿ ಕರಾವಳಿ ಉತ್ಸವ ಉದ್ಘಾಟನೆಗೊಂಡು 5 ದಿನ ಕಳೆದಿದೆ. ಈ ಉತ್ಸವದಲ್ಲಿ ಒಂದೆಡೆ ಸಾಂಸ್ಕೃತಿಕ ಕಾರ್ಯಕ್ರಮ ಹಲವಾರು ಅಡೆತಡೆಗಳ ನಡುವೆ ಸಾಂಗವಾಗಿ ನಡೆಯುತ್ತಿದೆ. ಆದರೆ ಉತ್ಸವದ ಅಂಗವಾಗಿ ಆಯೋಜಿಸಿರುವ ಬೃಹತ್ ವಸ್ತುಪ್ರದರ್ಶನ ಇನ್ನೂ ಆರಂಭವಾಗಿಲ್ಲ. ಸ್ಟಾಲ್ ಗಳಿಲ್ಲದೇ ಬಿಕೋ ಎನ್ನುತ್ತಿದೆ.
ಸ್ಟಾಲ್ ಗಳು ಅರಂಭವಾಗದಿದ್ದರೂ ವಸ್ತುಪ್ರದರ್ಶನ ವೇದಿಕೆಯಲ್ಲಿ ಪ್ರತಿದಿನ ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದು ಸರಣಿ ರಜೆ ಇರುವ ಹಿನ್ನೆಲೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಾರೆ.
ಆದರೆ ಕಳೆದ 5 ದಿನಗಳಿಂದ ಸ್ಟಾಲ್ ಗಳಲ್ಲಿ ಖರೀದಿ ಮತ್ತು ಮನರಂಜನಾ ಆಟಗಳ ವೀಕ್ಷಣೆಗೆಂದು ಬಂದವರು ನಿರಾಸೆಯಿಂದ ತೆರಳುವಂತಾಗಿದೆ . ಈಗ ಜನರಿಲ್ಲದೇ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.

ಕರಾವಳಿ ಉತ್ಸವದಲ್ಲಿ ವಸ್ತುಪ್ರದರ್ಶನ ಯಾಕೆ ಆರಂಭವಾಗಿಲ್ಲ ಎಂಬ ಪ್ರಶ್ನೆಗೆ ಯಾರಲ್ಲೂ ಸಮರ್ಪಕ ಉತ್ತರವಿಲ್ಲ. ಅದ್ದೂರಿ ಮೆರವಣಿಗೆ ನೆರವೇರಿಸಿ ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ಕರಾವಳಿ ಉತ್ಸವ ಉದ್ಘಾಟನೆಗೊಳಿಸಿದರು. ಪ್ರತಿವರ್ಷ ಉದ್ಘಾಟನೆ ಬಳಿಕ ಜನಪ್ರತಿನಿಧಿಗಳು, ಗಣ್ಯರು ಸ್ಟಾಲ್ ಗಳಿಗೆ ಭೇಟಿ ನೀಡಿ, ಸರ್ಕಾರದ ಮಳಿಗೆಗಳನ್ನು ಉದ್ಘಾಟಿಸುವ ಕ್ರಮವಿತ್ತು. ಆದರೆ ಈ ಬಾರಿ ವಾರ್ತಾ ಇಲಾಖೆಯ ಉದ್ಘಾಟನೆ ವೇದಿಕೆಯಲ್ಲೇ ನಡೆದಿದೆ. ಸಚಿವರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಲು ಅಲ್ಲಿ ಸ್ಟಾಲ್ ಗಳೇ ಇರಲಿಲ್ಲ.
ಕರಾವಳಿ ಉತ್ಸವ ಮೈದಾನದಲ್ಲಿ ವಸ್ತು ಪ್ರದರ್ಶನ ನಡೆಸುವ ಬಗ್ಗೆ ಏಕಮಾತ್ರ ಟೆಂಡರ್ ಸಲ್ಲಿಕೆಯಾಗಿತ್ತು. ಕೆ.ಮುಷ್ತಾಕ್ ಅಹಮದ್ ಎಂಬುವರು 30 ಲಕ್ಷ ರೂ.ಗೆ ಟೆಂಡರ್ ವಹಿಸಿದ್ದರು. ಬಿಡ್ ಮೊತ್ತದ ಶೇ.50ರಷ್ಟು ಡಿ.5ರೊಳಗೆ ಹಾಗೂ ಉಳಿದ ಮೊತ್ತ ಡಿ.20ರೊಳಗೆ ಪಾವತಿಸಬೇಕು. ಡಿ.22ರಿಂದ ಫೆ.4ವರೆಗೆ ವಸ್ತುಪ್ರದರ್ಶನದ ಅವಧಿ ಎಂದು ಷರತ್ತುಗಳಲ್ಲಿ ತಿಳಿಸಲಾಗಿದೆ.

ಗುತ್ತಿಗೆದಾರರ ವೈಯಕ್ತಿಕ ಸಮಸ್ಯೆಯಿಂದ ವಸ್ತುಪ್ರದರ್ಶನ ಆರಂಭ ವಿಳಂಬವಾಗಿದೆ ಎಂದು ಸಮಜಾಯಿಸಿ ಕೂಡ ನೀಲಾಗುತ್ತಿದೆ.












Click it and Unblock the Notifications