ಕಲ್ಲಡ್ಕ ಶಾಲೆಗೆ ಅನುದಾನ ರದ್ದಿನಲ್ಲಿ ನನ್ನ ಪಾತ್ರವಿಲ್ಲ : ರಮಾನಾಥ ರೈ
ಮಂಗಳೂರು, ಆಗಸ್ಟ್ 8: 'ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ರವರ ಶ್ರೀರಾಮ ವಿದ್ಯಾಕೇಂದ್ರ ಮತ್ತು ಬಂಟ್ವಾಳದ ಪುಣಚ ಶ್ರೀದೇವಿ ವಿದ್ಯಾ ಕೇಂದ್ರ ಶಾಲೆಗಳಿಗೆ ಅನುದಾನ ರದ್ದು ಗೊಳಿಸಿರುವುದರಲ್ಲಿ ನನ್ನ ಪಾತ್ರ ಇಲ್ಲ,' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಿಂದ ಖಾಸಗಿ ಶಾಲೆಗಳಿಗೆ ಅನುದಾನ ಕೊಡುವ ವ್ಯವಸ್ಥೆ ಇಲ್ಲ," ಎಂದು ಹೇಳಿದರು.

"ಹಾಗಿದ್ದರೂ ಎರಡೂ ಶಾಲೆಗಳಿಗೆ ಮಾತ್ರ ಅನುದಾನ ನೀಡಲಾಗಿದ. 2007 ರಲ್ಲಿ ಸಮ್ಮಿಶ್ರ ಸರ್ಕಾರದಿಂದ ಅಧಿಕಾರ ದುರುಪಯೋಗ ಪಡಿಸಿಕೊಂಡು ಈ ಶಾಲೆಗಳಿಗೆ ಅನುದಾನ ನೀಡಲಾಗಿದೆ," ಎಂದು ಅವರು ಆರೋಪಿಸಿದರು. 'ಕಲ್ಲಡ್ಕ ಶಾಲೆಗೆ ಸಂಘ ಪರಿವಾರದ ಬೆಂಬಲವಿದೆ. ಅವಕಾಶ ವಂಚಿತವಾದ ಹಲವಾರು ಶಾಲೆಗಳಿವೆ,' ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು .
"5 ತಿಂಗಳ ಹಿಂದೆಯೇ ಮುಖ್ಯಮಂತ್ರಿಯವರು ಮುಜರಾಯಿ ಇಲಾಖೆಗೆ ಅನುದಾನ ಕಡಿತಗೊಳಿಸುವಂತೆ ಪತ್ರ ಬರೆದಿದ್ದರು . ಅದು ಈಗ ಕಾರ್ಯರೂಪಕ್ಕೆ ಬಂದಿದೆ ಅಷ್ಟೆ," ಎಂದು ಅವರು ಅನುದಾನ ಕಡಿತಕ್ಕೆ ಸಮಜಾಯಿಷಿ ನೀಡಿದರು.
ತಮ್ಮ ಶಾಲೆಗಳಿಗೆ ಅನುದಾನ ರದ್ದು ಮಾಡುವಲ್ಲಿ ನನ್ನ ಪಾತ್ರವಿದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಆರೋಪ ನಿರಾಧಾರ ಎಂದು ಅವರು ಹೇಳಿದರು.












Click it and Unblock the Notifications