ಮಂಗಳೂರಿನಲ್ಲಿ ಗುಡುಗು ಸಹಿತ ಭಾರೀ ಮಳೆ: ಆತಂಕಗೊಂಡ ಜನ
ಮಂಗಳೂರು, ಅಕ್ಟೋಬರ್. 04: ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಇತರ ಭಾಗಗಳಲ್ಲಿ ಇಂದು (ಅ.04)ಸಂಜೆಯಾಗುತ್ತಿದ್ದಂತೆ ಭಾರೀ ಮಳೆ ಸುರಿಯಲು ಆರಂಭಿಸಿದೆ.
ಮಂಗಳೂರಿನಾದ್ಯಂತ ಭಾರೀ ಸಿಡಿಲು ಸಹಿತ ನಿರಂತರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ. ನಗರದೆಲ್ಲೆಡೆ ಕತ್ತಲೆ ಆವರಿಸಿದ್ದು, ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿಯುತ್ತಿದೆ.
ವಾಯುಭಾರ ಕುಸಿತ, ಬೆಂಗಳೂರಲ್ಲಿ ಜಿಟಿ-ಜಿಟಿ ಮಳೆ, 5 ದಿನ ಛತ್ರಿ ಮರೆಯುವಂತಿಲ್ಲ
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲಭಾಗದಲ್ಲಿ ಕಳೆದ ರಾತ್ರಿ ಉತ್ತಮ ಮಳೆಯಾಗಿತ್ತು. ಮಂಗಳೂರು ನಗರದ ಹೊರಭಾಗದಲ್ಲಿ ನಿನ್ನೆ ಸಂಜೆ ಗುಡುಗು ಸಹಿತ ಮಳೆ ಸುರಿದಿತ್ತು. ಇಂದು ಮಧ್ಯಾಹ್ನದಿಂದ ದಕ್ಷಿಣ ಕನ್ನಡ ಬಂಟ್ವಾಳ, ಪುತ್ತೂರು , ಉಪ್ಪಿನಂಗಡಿ , ಧರ್ಮಸ್ಥಳ, ಗುರುವಾಯನ ಕೆರೆ , ಸುಬ್ರಹ್ಮಣ್ಯ , ಸುಳ್ಯ ದಲ್ಲಿ ಸಿಡುಲು ಸಹಿತ ಭಾರೀ ಮಳೆ ಸುರಿದಿದೆ.
ಗುಡುಗು ಸಿಡಿಲಿನ ಆರ್ಭಟಕ್ಕೆ ಜನರು ಬೆಚ್ಚಿಬಿದ್ದಿದ್ದಾರೆ. ಅರಬ್ಬೀ ಸಮುದ್ರದಲ್ಲಿ ತೀವ್ರ ವಾಯು ಭಾರ ಕುಸಿತ ಉಂಟಾಗುವ ಸಾಧ್ಯತೆ ಇದ್ದು, ಇದು ಚಂಡಮಾರುತವಾಗಿ ಬದಲಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ .
ಕರಾವಳಿಯಲ್ಲಿ ಚಂಡಮಾರುತದ ಭೀತಿ: ಅ.5ರ ನಂತರ ಭಾರೀ ಮಳೆ ಸಾಧ್ಯತೆ
ಈ ಹಿನ್ನೆಲೆಯಲ್ಲಿ ಅಕ್ಟೋಬರ್. 5ರ ಬಳಿಕ ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಎಚ್ಚರಿಕೆ ರವಾನಿಸಲಾಗಿದೆ. ಆದರೆ ಈಗಲೇ ಭಾರೀ ಮಳೆ ಆರಂಭಗೊಂಡಿದ್ದು, ಜನರು ಆತಂಕಗೊಂಡಿದ್ದಾರೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತಕ್ಕೆ ಪೂರಕವಾದ ವಾತಾವರಣವಿದ್ದು, ಮುಂದಿನ ಒಂದು ವಾರ ಮಳೆ ಮುಂದುವರಿಕೆ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಭಾರಿ ಮಳೆ ಸಂಭವ
ಅಕ್ಟೋಬರ್ 05 ರಿಂದ 8 ರವರೆಗೆ ಸಮುದ್ರ ಪ್ರಕ್ಷುಬ್ಧಗೊಳ್ಳುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಮೀನುಗಾರರು ಈ ಕೂಡಲೇ ಕಿನಾರೆಗೆ ಬರುವಂತೆ ಸಂದೇಶ ರವಾನಿಸಲಾಗಿದೆ.