ಉಳ್ಳಾಲದಲ್ಲಿ ಹಿಂದೂ ಸಂಘಟನೆಗಳಿಗೆ ಸವಾಲೆಸೆದ ಯು.ಟಿ. ಖಾದರ್!
ಮಂಗಳೂರು, ಆಗಸ್ಟ್ 13: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಐಸಿಸ್ ಸಂಪರ್ಕದ ಹಿನ್ನೆಲೆಯಲ್ಲಿ ಶಂಕಿತನೊರ್ವನನ್ನು ಬಂಧನ ಮಾಡಿದ್ದು, ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಕಾರ್ಯಕರ್ತರು ಶಂಕಿತನ ಮನೆಗೆ ಮುತ್ತಿಗೆ ಹಾಕಿದ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗೆ ಕಾವು ನೀಡಿದೆ.
ಉಳ್ಳಾಲದ ಮಾಸ್ತಿಕಟ್ಟೆಯಲ್ಲಿರುವ ಮಾಜಿ ಶಾಸಕ ಎಂ. ಇದಿನಬ್ಬರ ಪುತ್ರ ಭಾಷಾ ಮನೆಗೆ ಮುತ್ತಿಗೆ ಹಾಕಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಭಾಷಾ ಸೊಸೆ ದೀಪ್ತಿ ಮಾರ್ಲ ಆಲಿಯಾಸ್ ಮರಿಯಂಳನ್ನು ಭೇಟಿಯಾಗಬೇಕೆಂದು ಪಟ್ಟು ಹಿಡಿದಿದ್ದರು. ಈ ವಿಚಾರ ಕೋಮು ಸೂಕ್ಷ್ಮ ಪ್ರದೇಶವಾದ ಉಳ್ಳಾಲದಲ್ಲಿ ಕೋಮು ಸೌಹಾರ್ದತೆಯನ್ನು ಕೆದಕಿದ್ದು, ವಾದ- ಪ್ರತಿವಾದಕ್ಕೆ ಆಸ್ಪದ ನೀಡಿದೆ. ವಿಶ್ವ ಹಿಂದೂ ಪರಿಷತ್ ಪ್ರತಿಭಟನೆ ಬಗ್ಗೆ ಉಳ್ಳಾಲ ಶಾಸಕ, ಮಾಜಿ ಸಚಿವ ಯು.ಟಿ. ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದೂ ಸಂಘಟನೆಗಳ ಪ್ರತಿಭಟನೆಯ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಯು.ಟಿ. ಖಾದರ್, "ಉಳ್ಳಾಲ ವ್ಯಾಪ್ತಿಯಲ್ಲಿ ಮಾತ್ರ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ. ಇಲ್ಲಿನ ಜನರು ಪರಸ್ಪರ ಭಾವೈಕ್ಯತೆ ಮತ್ತು ಪ್ರೀತಿಯಿಂದ ಬದುಕ್ತಿದಾರೆ. ದೇಶವನ್ನು ಪ್ರೀತಿಸುವ ದೇಶಪ್ರೇಮಿ ಜನರು ಈ ಭಾಗದಲ್ಲಿ ಇದ್ದಾರೆ. ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸಲ್ಲ," ಅಂತಾ ಸ್ಪಷ್ಟನೆ ನೀಡಿದ್ದಾರೆ.
"ಉಳ್ಳಾಲದ ನಾಗರಿಕರು ಭಯೋತ್ಪಾದನೆಯನ್ನು ಒಪ್ಪಲ್ಲ, ಎನ್ಐಎ ಅಂತಲ್ಲ, ಯಾರೂ ಬಿಡಲ್ಲ. ಮೊನ್ನೆ ಘಟನೆಯಲ್ಲಿ ಎನ್ಐಎ ಬಂದು ಒಬ್ಬನನ್ನು ಬಂಧಿಸಿದ್ದಾರೆ. ಹೀಗಾಗಿ ತನಿಖೆ ನಡೆಯುವಾಗ ಅದರ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ. ಅದರ ತನಿಖೆ ನಡೆದು ಸಮಗ್ರವಾದ ವಿಚಾರ ಬೆಳಕಿಗೆ ಬರಲಿ, ಎನ್ಐಎ ಬಂದಿರುವುದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ," ಎಂದು ಆಗ್ರಹಿಸಿದ್ದಾರೆ.
"ಇನ್ನು ಈ ಬಗ್ಗೆ ರಾಜಕೀಯ ಮಾಡಿ ಯಾರೂ ಗೊಂದಲ ಸೃಷ್ಟಿಸಬಾರದು. ಇದನ್ನು ರಾಜಕೀಯ ಮಾಡಲು ಹೋದರೆ ಕ್ಷೇತ್ರದ ಜನ ಯಾರೂ ಕ್ಷಮಿಸಲ್ಲ. ಅಪರಾಧಿ ಆಗಿದ್ದರೆ ಉಳ್ಳಾಲದ ಜನರು ಅವರನ್ನು ಯಾವತ್ತೂ ಕ್ಷಮಿಸಲ್ಲ. ಅವರು ನಿರಪರಾಧಿ ಆಗಿದ್ದರೆ ಯಾಕೆ ಅವರ ಮೇಲೆ ಆರೋಪ ಬಂತು ಅನ್ನುವುದರ ಬಗ್ಗೆ ತನಿಖೆ ನಡೆಯಲಿ," ಎಂದು ಮಾಜಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಇನ್ನು ಮಂಗಳೂರಿನಲ್ಕಿ ಎನ್ಐಎ ಘಟಕ ಸ್ಥಾಪನೆ ಆಗುವ ವಿಚಾರವಾಗಿ ಮಾತನಾಡಿದ ಯು.ಟಿ. ಖಾದರ್, "ಎನ್ಐಎ ಘಟಕ ಮಂಗಳೂರಿನಲ್ಲಿ ಆಗಲಿ, ಅದು ಸಂತೋಷದ ವಿಚಾರ. ಅದರ ಜೊತೆಗೆ ನಾರ್ಕೋಟೀಕ್ ಮತ್ತು ಸೈಬರ್ ಸೆಲ್ ಕೂಡ ಆಗಲಿ," ಎಂದು ಖಾದರ್ ಒತ್ತಾಯಿಸಿದ್ದಾರೆ.
ಇನ್ನು ಭಾಷಾ ಸೊಸೆ ಮರಿಯಂ ಮತಾಂತರದ ಬಗ್ಗೆ ಮಾತನಾಡಿದ ಖಾದರ್, "ಆ ಮನೆಯ ದೀಪ್ತಿ ಮಾರ್ಲ ಬಗ್ಗೆ ಕೇಳುವುದಕ್ಕೆ ಈ ಸಂಘಟನೆಯವರು ಯಾರು? ಇವರಿಗೆ ಅವರ ತಂದೆ- ತಾಯಿ ಬಂದು ಏನಾದರೂ ದೂರು ಕೊಟ್ಟಿದ್ದಾರಾ? ಲವ್ ಜಿಹಾದ್ ಮತ್ತೊಂದು, ಇನ್ನೊಂದು ಅಂತ ಅಜೆಂಡಾ ಇಟ್ಟುಕೊಂಡು ಪ್ರತಿಭಟನೆ ಯಾಕೆ ಮಾಡುತ್ತೀರಾ? ಹಾಗಿದರೆ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಸಾಯುವವರೆಗೆ ಉಪವಾಸ ಮಾಡಿ. ಅದು ಬಿಟ್ಟು ಹೊರಗಿನವರು ನನ್ನ ಉಳ್ಳಾಲ ಕ್ಷೇತ್ರಕ್ಕೆ ಬಂದು ಯಾಕೆ ಸಮಸ್ಯೆ ಮಾಡ್ತೀರಾ? ಮುಸ್ಲಿಂ ಸಹೋದರಿ ಹಿಂದೂ ಸಹೋದರನನ್ನು ಮದುವೆ ಆಗಿಲ್ವಾ?," ಎಂದು ಯು.ಟಿ. ಖಾದರ್ ಹಿಂದೂ ಸಂಘಟನೆಗಳಿಗೆ ಪ್ರಶ್ನಿಸಿದ್ದಾರೆ.
Recommended Video
"ನಿಮಗೆ ಬದ್ಧತೆ ಇದ್ದರೆ ಬಿಜೆಪಿ ಕಚೇರಿ ಮುಂದೆ ಲವ್ ಜಿಹಾದ್ ಕಾನೂನು ತರಲು ನಾಳೆಯಿಂದ ಪ್ರತಿಭಟಿಸಿ. ಈ ಸಂಘಟನೆಯವರ ಬಣ್ಣ ಮೊದಲು ಬಯಲಾಗಬೇಕು. ಮನೆಯಲ್ಲಿ ಕಷ್ಟ ಇದ್ದರೆ, ಫೀಸ್ ಕಟ್ಟುವುದಕ್ಕೆ ಆಗದೆ ಇದ್ದರೆ ಇವರ ಕಚೇರಿಯನ್ನು ಸಂಪರ್ಕಿಸಿ. ಈ ಜಾತಿ ಪ್ರೇಮ, ಸಮುದಾಯ ಪ್ರೇಮ, ಧರ್ಮ ಪ್ರೇಮ ಇರುವ ಎಲ್ಲರನ್ನೂ ಸಂಪರ್ಕಿಸಿ ಸಹಾಯ ಕೇಳಿ. ಆಗ ಇವರು ಎಷ್ಟು ನೆರವು ಕೊಡುತ್ತಾರೆ ಅನ್ನೋದನ್ನು ನೋಡೋಣ," ಎಂದು ಯು.ಟಿ. ಖಾದರ್ ಸವಾಲು ಎಸೆದರು.