ಚಾರ್ಮಾಡಿ ಘಾಟಿಯಲ್ಲಿ ಬೆಂಕಿ, ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ
ಮಂಗಳೂರು, ಡಿಸೆಂಬರ್ 26: ಪಶ್ಚಿಮ ಘಟ್ಟದ ಚಾರ್ಮಾಡಿ ಘಾಟಿಯ ಅರಣ್ಯ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆಂಬ ಆರೋಪ ಕೇಳಿಬಂದಿದೆ. ಕಳೆದ ಐದಾರು ದಿನಗಳಿಂದ ಚಾರ್ಮಾಡಿ ಘಾಟಿ ಪ್ರದೇಶದ ಹಲವೆಡೆ ಬೆಂಕಿ ಕೆನ್ನಾಲಿಗೆ ಬೀರುತ್ತಿದ್ದರೂ ಬೆಂಕಿ ನಂದಿಸುವ ಕಾರ್ಯಕ್ಕೆ ಇಲಾಖೆ ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ.
ಹೀಗಾಗಿ ಅಮೂಲ್ಯ ಅರಣ್ಯ ಸಂಪತ್ತು ಸೇರಿದಂತೆ ವನ್ಯಜೀವಿಗಳು ಸುಟ್ಟು ಕರಕಲಾಗುತ್ತಿವೆ. ಮಾಹಿತಿ ಪ್ರಕಾರ, ಅರಣ್ಯ ಒತ್ತುವರಿ ಮೂಲಕ ಎಸ್ಟೇಟ್ ಮಾಡಿಕೊಂಡಿರುವ ಮಾಫಿಯಾಗಳೇ ಈ ಅರಣ್ಯ ಪ್ರದೇಶದಲ್ಲಿ ಬೆಂಕೆ ಹಚ್ಚುತ್ತಿದ್ದಾರೆ. ಪ್ರತಿ ವರ್ಷ ಒಂದೊಂದು ಭಾಗದಲ್ಲಿ ಬೆಂಕಿ ಹಚ್ಚುತ್ತಾ ಮುಂದಿನ ವರ್ಷ ಆ ಭಾಗವನ್ನು ಒತ್ತುವರಿ ಮಾಡಿಕೊಳ್ಳುತ್ತಾರೆ ಎಂದು ಆರೋಪಿಸಲಾಗಿದೆ.

ಅರಣ್ಯಾಧಿಕಾರಿಗಳು ಸೇರಿ ಇಲಾಖೆಯ ಪ್ರಮುಖರಿಗೆ ಈ ವಿಚಾರ ಗೊತ್ತಿದ್ದೇ ಈ ಚಟುವಟಿಕೆ ನಡೆಯುತ್ತಿದೆ ಎಂದು ದೂರಲಾಗಿದ್ದು ಇದೇ ರೀತಿ ಪಶ್ಚಿಮ ಘಟ್ಟದ ಹಲವು ಕಡೆ ರೆಸಾರ್ಟ್ ಮತ್ತು ಎಸ್ಟೇಟ್ ಮಾಫಿಯಾಗಳು ಹುಟ್ಟಿಕೊಂಡಿದೆ. ಇದೀಗ ಅರಣ್ಯದಲ್ಲಿ ಬೆಂಕಿ ಕೆನ್ನಾಲಿಗೆ ಬೀರುತ್ತಿರುವ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸ್ಥಳಕ್ಕೆ ಬಾರದೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಅನ್ನುವ ಸಿದ್ಧ ಉತ್ತರದೊಂದಿಗೆ ನಿರ್ಲಕ್ಷ್ಯ ಭಾವನೆ ತೋರುತ್ತಾರೆ ಎಂದು ಪರಿಸರ ಹೋರಾಟಗಾರರು ಕಿಡಿಕಾರಿದ್ದಾರೆ.

ಅರಣ್ಯ ಸಚಿವ ರಮಾನಾಥ ರೈ ಅವರಲ್ಲಿ ಬೆಂಕಿ ಹತೋಟಿಗೆ ತರಲು ಹೆಲಿಕಾಪ್ಟರ್ ಬಳಸಬಹುದಲ್ಲ ಎಂದು ಪ್ರಶ್ನಿಸಿದರೆ ಹಾಗೆಲ್ಲ ಹೆಲಿಕಾಪ್ಟರ್ ಬಳಕೆಗೆ ನಮ್ಮ ಇಲಾಖೆಯಲ್ಲಿ ಅನುದಾನ ಇಲ್ಲ ಅಂತಾ ಮೂಗು ಮುರಿಯುತ್ತಾರೆ. ಸಚಿವರಿಂದ ತೊಡಗಿ ಅಧಿಕಾರಿಗಳ ವರೆಗೆ ಇಂಥ ನಿರ್ಲಕ್ಷ್ಯದ ಭಾವನೆ ಪಶ್ಚಿಮಘಟ್ಟದ ಅಮೂಲ್ಯ ಹಸಿರ ಸಿರಿ ಮತ್ತು ಜೀವ ಸಂಕುಲದ ನಾಶಕ್ಕೆ ಕಾರಣವಾಗುತ್ತಿದೆ ಎಂದು ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications