ಎರಡೂ ಕ್ಷೇತ್ರಕ್ಕೆ ಒಬ್ಬರೇ ಸಚಿವ; ಕರಾವಳಿ ಮೀನುಗಾರರ ವಲಯದಲ್ಲಿ ಸಂತಸ
ಮಂಗಳೂರು, ಆಗಸ್ಟ್ 28: ರಾಜ್ಯದಲ್ಲಿ ರಚನೆಯಾಗಿರುವ ನೂತನ ಸಚಿವ ಸಂಪುಟದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮೀನುಗಾರಿಕಾ ಮತ್ತು ಬಂದರು ಖಾತೆ ಹಂಚಿಕೆಯಾಗಿರುವುದಕ್ಕೆ ಕರಾವಳಿಯ ಮೀನುಗಾರರ ವಲಯ ಹರ್ಷ ವ್ಯಕ್ತಪಡಿಸಿದೆ.
ಮೀನುಗಾರಿಕೆ, ಬಂದರು ಎರಡೂ ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿದ್ದು, ಈ ಹಿಂದೆ ಹಲವು ಬಾರಿ ಎರಡು ಕ್ಷೇತ್ರಗಳನ್ನು ಪ್ರತ್ಯೇಕಿಸಿ ಬೇರೆ ಬೇರೆ ಸಚಿವರಿಗೆ ನೀಡಲಾಗಿತ್ತು. ಆದರೆ ಈ ಬಾರಿ ಎರಡು ಕ್ಷೇತ್ರಗಳನ್ನು ಒಬ್ಬರಿಗೇ ನೀಡಿರುವುದು ಮೀನುಗಾರರಲ್ಲಿ ಸಂತಸ ತಂದಿದೆ.
ಮೀನುಗಾರರ ಬಗ್ಗೆ ಕಾಳಜಿ ಇರುವ ವ್ಯಕ್ತಿಗೆ ಆ ಹುದ್ದೆ ದೊರಕಿರುವುದು ಸಂತಸ ತಂದಿದೆ. ಅವರು ಮೀನುಗಾರರ ಆಶಾಕಿರಣವಾಗುವರೆಂಬ ವಿಶ್ವಾಸ ಸಮಸ್ತ ಮೀನುಗಾರರದ್ದು ಎಂದು ಸಂತಸ ಹಂಚಿಕೊಂಡಿದ್ದಾರೆ ಕರಾವಳಿ ಮೀನುಗಾರರು. ಮೀನುಗಾರಿಕೆ ದಕ್ಕೆಗಳ ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಸಂಬಂಧಪಟ್ಟ ಹಲವು ವಿಚಾರಗಳ ಬಗ್ಗೆ ನೂತನ ಸಚಿವರ ಗಮನ ಸೆಳೆಯಲು ಮೀನುಗಾರರು ಸಿದ್ಧತೆ ನಡೆಸಿದ್ದಾರೆ.

ಎರಡೂ ಖಾತೆಗಳನ್ನು ಒಬ್ಬರಿಗೇ ವಹಿಸಬೇಕು ಎಂದು ಈ ಹಿಂದೆಯೂ ಮೀನುಗಾರರು ಒತ್ತಾಯಿಸಿದ್ದರು. ಅದೀಗ ಕಾರ್ಯಗತವಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ದೊರೆಯಲಿದೆ ಎಂದು ಮೀನುಗಾರ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಎರಡೂ ಖಾತೆಗಳನ್ನು ಒಬ್ಬರಿಗೇ ವಹಿಸಬೇಕು ಎಂದು ಒತ್ತಾಯಿಸಿದ್ದೆವು. ಆ ಕೆಲಸವೀಗ ಆಗಿದೆ. ಇದರಿಂದ ಮೀನುಗಾರರಿಗೆ ಖುಷಿಯಾಗಿದೆ" ಎಂದು ಟ್ರಾಲ್ಬೋಟು ಮೀನುಗಾರರ ಸಂಘದ ಅಧ್ಯಕ್ಷ ನಿತಿನ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications