ಕರಿಂಗಾನದಲ್ಲಿ ಜಗಳದ ಮಧ್ಯೆ ತಂದೆಯನ್ನೇ ಕೊಂದ ಮಗ
ಮೂಡಬಿದ್ರೆಯ ಕರಿಂಗಾನದಲ್ಲಿ ಜಗಳದ ಮಧ್ಯೆ ಮಗನೇ ತಂದೆಯನ್ನು ಕೊಂದ ಘಟನೆ ನಡೆದಿದೆ. ಈ ಹಿಂದೆ ಕೊಲೆಯಾದ ವ್ಯಕ್ತಿಯ ಪತ್ನಿ ಅಂದರೆ ಆರೋಪಿಯ ತಾಯಿ ಕೂಡ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು
ಮಂಗಳೂರು, ಏಪ್ರಿಲ್ 15: ಮಗನೊಬ್ಬ ತಂದೆಯನ್ನೇ ಕೊಂದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿ ನಡೆದಿದೆ. ಹೊಸಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಿಂಗಾನ ಎಂಬಲ್ಲಿ 82 ವರ್ಷದ ಪೌಲ್ ಗೋವಿಯಸ್ ಎಂಬುವವರನ್ನ 45 ವರ್ಷದ ಪುತ್ರ ಸ್ಟ್ಯಾಂಡಿ ಗೋವಿಯಸ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಪೌಲ್ ಮಗನ ಜೊತೆ ವಾಸವಾಗಿದ್ದರು. ಶುಕ್ರವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಕೋಪದ ಭರದಲ್ಲಿ ಗೋವಿಯಸ್ ತನ್ನ ತಂದೆ ಪೌಲ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ಎದೆ, ಹೊಟ್ಟೆ, ತಲೆ ಭಾಗಕ್ಕೆ ಗಂಭೀರವಾಗಿ ಗಾಯಗೊಂಡ ಪೌಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.[ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಟಿವಿ ಕದ್ದೋನು ಮಾರ್ಕೆಟಿಂಗ್ ಮ್ಯಾನೇಜರ್!]

ಎರಡು ವರ್ಷಗಳ ಹಿಂದಷ್ಟೇ ಪೌಲ್ ಪತ್ನಿ ಲಿಲ್ಲಿ ಗೋಯಸ್ ಸಾವನ್ನಪ್ಪಿದ್ದರು. ಲಿಲ್ಲಿ ಶವ ನೇಣು ಬಿಗಿದ ಸ್ಥಿತಿಯಲ್ಲಿತ್ತು. ಸಂಬಂಧಿಕರು ಇದೊಂದು ಕೊಲೆ ಎಂದು ಆಪಾದಿಸಿದ್ದರು. ಆದರೆ ಇನ್ನೂ ಪೌಲ್ ಪತ್ನಿ ಸಾವಿನ ರಹಸ್ಯ ಬಯಲಾಗಿಲ್ಲ. ಇದೀಗ ಪೌಲ್ ಮಗನಿಂದಲೇ ಕೊಲೆಯಾಗಿದ್ದಾರೆ. ಅಪ್ಪ-ಮಗನ ಮಧ್ಯೆ ಆಸ್ತಿ ವಿಚಾರದಲ್ಲಿ ಜಗಳವುಂಟಾಗಿತ್ತು. ಇದುವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಕೂಟರ್ ಸವಾರ ಸಾವು
ಬಸ್ ಮತ್ತು ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರಿನ ಪಣಂಬೂರು ಕಸ್ಟಮ್ಸ್ ಕಚೇರಿ ಮುಂಭಾಗ ಶನಿವಾರ ಮುಂಜಾನೆ ಸಂಭವಿಸಿದೆ. ಮೃತನನ್ನು ಚೊಕ್ಕಬೆಟ್ಟು ಸೋನಾಲ್ ಕಾಂಪೌಂಡ್ ನ ಶರೀಫ್ ಎಂಬವರ ಪುತ್ರ ಅಬ್ದುಲ್ ಹಿಕ್ರಾಮ್ (22) ಎಂದು ಗುರುತಿಸಲಾಗಿದೆ.[ಬ್ಲ್ಯಾಕ್ ಮೇಲ್: ಕನ್ನಡ ಟಿವಿ ಚಾನಲ್ ಸಿಇಒ ಬಂಧನ]

ಅಬ್ದುಲ್ ಹಿಕ್ರಾಮ್ ಮಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ಉದ್ಯೋಗಿಯಾಗಿದ್ದ. ಬೆಳಗ್ಗೆ ಚೊಕ್ಕಬೆಟ್ಟುವಿನಿಂದ ಮಂಗಳೂರಿಗೆ ಬರುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಈ ವೇಳೆ ಗಂಭೀರ ಗಾಯಗೊಂಡಿದ್ದ ಹಿಕ್ರಾಮ್ ಸ್ಥಳದಲ್ಲೇ ಮೃಪಟ್ಟಿದ್ದಾನೆ. ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications