ಡಿವೈಎಫ್ಐನಿಂದ ಮಂಗಳೂರಿನಲ್ಲಿ ಆಹೋರಾತ್ರಿ ಧರಣಿ
ಮಂಗಳೂರು, ಜೂ. 5 : ಬಜರಂಗದಳದ ಕಾರ್ಯಕರ್ತ ರಾಜೇಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಹಗಲು ರಾತ್ರಿ ಧರಣಿ ನಡೆಸುತ್ತಿದೆ.
ಬುಧವಾರ ಬೆಳಗ್ಗೆ ಡಿವೈಎಫ್ಐ ಧರಣಿಗೆ ಚಾಲನೆ ನೀಡಿದ್ದು ಗುರುವಾರದ ತನಕ ಧರಣಿ ಮುಂದುವರೆಯಲಿದೆ. ರಾಜೇಶ್ ಪೂಜಾರಿ ಕೊಲೆ ಪ್ರಕರಣದಲ್ಲಿ ಬಂಧಿಸಲಾಗಿರುವ ಮಲ್ಲೂರಿನ ಹುಸೇನ್, ಇರ್ಷಾದ್ ಹಾಗೂ ಇಮ್ರಾನ್ ಅಮಾಯಕರಾಗಿದ್ದು, ಅವರನ್ನು ತಕ್ಷಣ ಬಿಡುಗಡೆಗೊಳಿಸಿ, ನೈಜ ಆರೋಪಿಗಳನ್ನು ಬಂಧಿಸುವಂತೆ ಹೋರಾಟಗಾರರು ಒತ್ತಾಯಿಸುತ್ತಿದ್ದಾರೆ. ಚಿತ್ರಗಳಲ್ಲಿ ನೋಡಿ ಧರಣಿ [ಪೂಜಾರಿ ಕೊಲೆ ಪ್ರಕರಣದ ಮರು ತನಿಖೆ ಮಾಡಿ]

ಅಮಾಯಕ ಯವಕರನ್ನು ಬಂಧಿಸಲಾಗಿದೆ
ಧರಣಿ ಉದ್ದೇಶಿಸಿ ಮಾತನಾಡಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ರಾಜೇಶ್ ಪೂಜಾರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಯುವಕರನ್ನು ಬಂಧಿಸಲಾಗಿದೆ. ಈ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಮೌನ ವಹಿಸಿದ್ದು, ಜಿಲ್ಲೆಯ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಗೆ ಬಂಧಿತ ಯುವಕರು ಅಮಾಯಕರೆಂಬ ಅರಿವಿದ್ದರೂ ಪ್ರಕರಣದ ಮರು ತನಿಖೆಗೆ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ಸಂಘರ್ಷದಿಂದಾಗಿ ದ್ವೇಷದ ಕೊಲೆಗಳು ಸಾಕಷ್ಟಾಗಿವೆ. ಆದರೆ, ಈ ಕೊಲೆಗಳ ತನಿಖೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿಫಲವಾಗಿವೆ. ಆದ್ದರಿಂದ ಅಮಾಯಕರು ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮತೀಯ ದ್ವೇಷ ಕಾರಣ
ಫಿನಾಯಿಲ್, ಉಪ್ಪಿನಕಾಯಿ ಮಾರಿ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಹುಸೇನ್, ಕೂಲಿ ಕೆಲಸ ಮಾಡಿಕೊಂಡಿದ್ದ ಇರ್ಷಾದ್ ಹಾಗೂ ಕಲ್ಲಿನ ಕೋರೆಯಲ್ಲಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಇಮ್ರಾನ್ ಅವರನ್ನು ಮತೀಯ ದ್ವೇಷದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಅಸಲಿ ಆರೋಪಿಗಳನ್ನು ಬಂಧಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಸಚಿವರ ಮನೆ ಮುಂದೆ ಧರಣಿ
ರಾಜೇಶ್ ಪೂಜಾರಿ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ತನಕ ಹೋರಾಟ ಮುಂದುವರೆಯಲಿದೆ. ಮುಂದಿನ ಹಂತದಲ್ಲಿ ಸಚಿವ ರಮಾನಾಥ ರೈ ಹಾಗೂ ಶಾಸಕ ಮೊಯ್ದಿನ್ ಬಾವಾ ಅವರ ಮನೆ, ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಯಾರು ಭಾಗವಹಿಸಿದ್ದಾರೆ
ಅಹೋರಾತ್ರಿ ಧರಣಿಯಲ್ಲಿ ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ದಲಿತ ಹಕ್ಕುಗಳ ಹೋರಾಟ ಸಮಿತಿಯ ಲಿಂಗಪ್ಪ ನಂತೂರು, ಡಿವೈಎಫ್ಐ ನಾಯಕರು, ಮಲ್ಲೂರು ಗ್ರಾಮಸ್ಥರು ಹಾಗೂ ಬಂಧಿತ ಯುವಕರ ಕುಟುಂಬದವರು ಭಾಗವಹಿಸಿದ್ದಾರೆ.











Click it and Unblock the Notifications