ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಕುಮಾರ್ ಗೆ ಸನ್ಮಾನ
ಮಂಗಳೂರು, ಜನವರಿ 18: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಡಾ ಎಂಎನ್ ರಾಜೇಂದ್ರ ಕುಮಾರ್ 25 ವರ್ಷ ಸೇವೆ ಸಲ್ಲಿಸಿದ್ದಾರೆ. ನಿರಂತರ 25 ವರ್ಷಗಳ ಸಾರ್ಥಕ ಅಧ್ಯಕ್ಷತೆ ವಹಿಸಿಕೊಂಡಿರುವ ಎಂ. ಎನ್. ರಾಜೇಂದ್ರ ಕುಮಾರ್ ಅವರ ರಜತ ಸಂಭ್ರಮ, ನವೋದಯ ಸ್ವಸಹಾಯಸಂಘಗಳ ವಿಂಶತಿ ಸಮಾವೇಶ ನಾಳೆ ಜ. 19 ರಂದು ಮಂಗಳೂರಿನಲ್ಲಿ ಜರುಗಲಿದೆ.
ನಗರದ ನೆಹರೂ ಮೈದಾನದಲ್ಲಿ ಈ ಕಾರ್ಯಕ್ರಮ ಜರುಗಲಿದ್ದು, ಮೊದಲ ಬಾರಿಗೆ ಸಹಕಾರಿಗಳೆಲ್ಲ ಒಂದು ಕಡೆ ಸೇರಿ ತಮ್ಮ ಏಕತೆ ಮತ್ತು ಬದ್ಧತೆಯನ್ನು ಎತ್ತಿ ಹಿಡಿಯುವ ಸಹಕಾರಿ ಸಮಾವೇಶ ಇದಾಗಲಿದೆ. ಸಮಾವೇಶಕ್ಕೆ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ.
ಇಂದು ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯಿಂದ 10 ಸಾವಿರ ಜನ ನಗರಕ್ಕೆ ಆಗಮಿಸಿದ್ದು, ಸಮಿತಿ ಇವರ ಅತಿಥಿ ಸತ್ಕಾರಕ್ಕಾಗಿ 21 ಛತ್ರಗಳನ್ನು ಕಾಯ್ದಿರಿಸಿದೆ. ಜ. 19ರಂದು ಕುಂದಾಪುರ, ಕಾರ್ಕಳ, ಉಡುಪಿ ಕಡೆಯಿಂದ ಜನ ಆಗಮಿಸುವ ನಿರೀಕ್ಷೆ ಇದೆ. ಸಮಾವೇಶಕ್ಕಾಗಿ ನಗರದ ನೆಹರೂ ಮೈದಾನದಲ್ಲಿ 3.53 ಲಕ್ಷ ಚ. ಅಡಿಯ ವಿಶಾಲ ಸಭಾಂಗಣ ನಿರ್ಮಿಸಲಾಗಿದೆ.

ಸಮಾವೇಶವನ್ನು ಶಿಸ್ತುಬದ್ಧವಾಗಿ ನಡೆಸಲು ಕೇಂದ್ರೀಯ ಅಭಿನಂದನಾ ಸಮಿತಿಯೊಂದಿಗೆ 16 ಉಪ ಸಮಿತಿ ರಚಿಸಿಕೊಂಡು ಜವಾಬ್ದಾರಿ ಹಂಚಿಕೊಳ್ಳಲಾಗಿದೆ. ಮುಂಜಾನೆ ಎಸ್ಸಿಡಿಸಿಸಿ ಬ್ಯಾಂಕಿನಿಂದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಉದ್ದಕ್ಕೂ ಸ್ವಚ್ಚತಾ ತಂಡದೊಂದಿಗೆ ವಾಹನವಿದ್ದು, ರಸ್ತೆಯಲ್ಲಿ ಯಾವುದೇ ರೀತಿಯಲ್ಲಿ ಸ್ವಚ್ಛತೆಗೆ ತೊಡಕಾಗದ ರೀತಿ ಕಾರ್ಯ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ.












Click it and Unblock the Notifications