ಅಮೃತ ಸೋಮೇಶ್ವರ್ ಅವರಿಗೆ ಭಾಷಾ ಸಮ್ಮಾನ್ ಪ್ರಶಸ್ತಿ ಪ್ರದಾನ
ಮಂಗಳೂರು, ಸೆಪ್ಟೆಂಬರ್ 15: ತುಳು ಜಾನಪದ ವಿದ್ವಾಂಸ ಹಾಗೂ ಹಿರಿಯ ಸಾಹಿತಿ ಡಾ. ಅಮೃತ ಸೋಮೇಶ್ವರ ಅವರಿಗೆ 2016 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಭಾಷಾ ಸಮ್ಮಾನ್' ಪುರಸ್ಕಾರ ನೀಡಿ ಗೌರವಿಸಲಾಯಿತು.
ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ. ಅಮೃತ ಸೋಮೇಶ್ವರ್ ಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ 'ಭಾಷಾ ಸಮ್ಮಾನ್' ಪುರಸ್ಕಾರ ನೀಡಿ ಸನ್ಮಾನಿಸಿದರು.

ಮಂಗಳೂರು ಹೊರವಲಯದ ದೇರಳಕಟ್ಟೆ ಕೆಎಸ್ ಹೆಗ್ಡೆ ಆಸ್ಪತ್ರೆಗೆ ತೆರಳಿದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಡಾ. ಅಮೃತ ಸೋಮೇಶ್ವರ್ ಗೆ ಭಾಷಾ ಸಮ್ಮಾನ್ ಪುರಸ್ಕಾರ ಪ್ರದಾನ ಮಾಡಿದರು.
ತುಳು ಭಾಷೆಯ ಅಭಿವೃದ್ಧಿಗಾಗಿ ಹಾಗೂ ತುಳು ಸಾಹಿತ್ಯಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅಮೃತ ಸೋಮೇಶ್ವರರಿಗೆ 2016 ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ 'ಭಾಷಾ ಸಮ್ಮಾನ್' ಪ್ರಶಸ್ತಿ ಘೋಷಿಸಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಡಾ ಚಂದ್ರಶೇಖರ ಕಂಬಾರ, "ನನ್ನ ಮತ್ತು ಅಮೃತರ ಸ್ನೇಹ ಮೂರು ದಶಕಗಳಷ್ಟು ಹಳೆಯದು . ಅಮೃತರು ರಚಿಸಿದ ಪಾಡ್ದನಗಳನ್ನು ಅನುವಾದ ಮಾಡಿ ಕನ್ನಡದಲ್ಲಿ ಅದನ್ನು ಪ್ರಕಟ ಮಾಡಿದ್ದರಿಂದ ನಮ್ಮ ಸಂಬಂಧ ಬೆಳೆಯುತ್ತಾ ಬಂತು," ಎಂದು ಹೇಳಿದ ಅವರು, "ನನ್ನ ಜೋಕುಮಾರ ಸ್ವಾಮಿ ಕೃತಿಯನ್ನು ಅಮೃತರು ತುಳು ಭಾಷೆಗೆ ಅನುವಾದಿಸಿದ್ದು ಸಂತಸ ತಂದಿದೆ," ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅಮೃತ ಸೋಮೇಶ್ವರ್ , "ತುಳು ಹಾಗೂ ಕನ್ನಡ ಭಾಷಾ ಸಾಹಿತ್ಯ ಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಿಸುವ ಇಚ್ಛೆ ಇದೆ," ಎಂದು ತಮ್ಮ ಮನದಾಳದ ಆಸೆಯನ್ನು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ಡಾ. ಅಮೃತ ಸೋಮೇಶ್ವರ ಅವರ ಪತ್ನಿ ನರ್ಮದಾ, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ಎನ್. ವಿನಯ ಹೆಗ್ಡೆ, ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ. ನಾ. ದಾಮೋದರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications