'ಮಾಜಿ ಸಚಿವ ರಮಾನಾಥ್ ರೈಗೇಕೆ ಪೊಲೀಸ್ ಎಸ್ಕಾರ್ಟ್?'
ಮಂಗಳೂರು, ಸೆಪ್ಟೆಂಬರ್. 19: "ಯಾರ್ದೋ ದುಡ್ಡು ಯಲ್ಲಮ್ಮನ ಜಾತ್ರೆ" ಅನ್ನೋ ನುಡಿಗಟ್ಟು ನಮ್ಮ ಮಾಜಿ ಸಚಿವರಾದ ಬಿ ರಮಾನಾಥ್ ರೈ ಅವರಿಗೆ ಸರಿಯಾಗಿ ಹೊಂದುತ್ತದೆ. ಯಾಕಂದ್ರೆ ಅವರು ಮಾಜಿ ಅದರೂ ಇಂದಿಗೂ ಸಚಿವರಾಗಿದ್ದ ಗತ್ತಿನ ಗುಂಗಿನಿಂದ ಹೊರಬಂದಿಲ್ಲ.
ಈ ಹಿಂದೆ ತಮಗೆ ನೀಡಲಾಗಿದ್ದ ಪೊಲೀಸ್ ಸವಲತ್ತುಗಳನ್ನು ಅರ್ಹತೆ ಇಲ್ಲದಿದ್ದರೂ ಬಳಸಿಕೊಳ್ಳುತ್ತಿದ್ದಾರೆ. ಸರಕಾರದ ಕೆಲವೊಂದು ಸವಲತ್ತುಗಳನ್ನು ರಾಜಕಾರಣಿಗಳು ದುರುಪಯೋಗ ಪಡಿಸಿಕೊಂಡಿರುವ ಹಲವಾರು ನಿದರ್ಶನಗಳು ನಮ್ಮ ಮುಂದಿವೆ.
ರಮಾನಾಥ್ ರೈ ಹಳೇ ಹಿಂದಿ ಹಾಡು ಕೇಳಿ ಫಿದಾ ಆದ ಬಂಟ್ವಾಳ ಜನ
ಕೆಲವರಿಗೆ ಗೂಟದ ಕಾರಿನಲ್ಲಿ ತಿರುಗುವ ಹುಚ್ಚು, ಕೆಲವರಿಗೆ ಕೆಂಪು ದೀಪದ ಕಾರಿನ ಗಮ್ಮತ್ತು. ಇನ್ನೂ ಕೆಲವರಿಗೆ ತಾವು ಮಾಜಿ ಅದರೂ ಹಿಂದೆ ಮುಂದೆ ಪೊಲೀಸರು ಇರಲೇಬೇಕೆಂಬ ಖಯಾಲಿ. ಇದಕ್ಕೆ ಸ್ಪಷ್ಟ ನಿದರ್ಶನ ಮಾಜಿ ಸಚಿವ ಹಾಗು ಮಾಜಿ ಶಾಸಕ ರಮಾನಾಥ್ ರೈ.
ತಮ್ಮ ಬಳಿ ಅಧಿಕಾರವಿದ್ದಾಗ ಸರಕಾರದ ಸೌಲಭ್ಯಗಳನ್ನು ಪಡೆದರೆ ಅದನ್ನು ಪ್ರಶ್ನಿಸೋದು ಅಭಾಸವಾಗುತ್ತದೆ. ಆದರೆ ಯಾವುದೇ ಅಧಿಕಾರದಲ್ಲಿ ಇಲ್ಲದಿದ್ದರೂ ಸರಕಾರದ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವವರಿಗೆ ಏನೆನ್ನಬೇಕು?
ಬಿ. ರಮಾನಾಥ ರೈ ಅವರ ನಡೆಯ ಬಗ್ಗೆ ಈಗ ಪ್ರಶ್ನೆ ಎತ್ತಲಾಗುತ್ತಿದೆ. ಒರ್ವ ಮಾಜಿ ಶಾಸಕರಾಗಿದ್ದರೂ ಅವರು ಇಂದಿಗೂ ಸರಕಾರದ ಹಲವು ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿದ್ದ ರಮಾನಾಥ್ ರೈಗೆ ಶುರುವಾಯ್ತು ಹೊಸ ಮಂಡೆಬಿಸಿ
ಇಂದಿಗೂ ಅವರು ಸುತ್ತುವುದು ಪೊಲೀಸ್ ಎಸ್ಕಾರ್ಟ್ ಸೌಲಭ್ಯದೊಂದಿಗೆ. ಮಾಜಿ ಆದ ಮೇಲೂ ಈ ಎಸ್ಕಾರ್ಟ್ ಸೌಲಭ್ಯ ಬಳಸಿಕೊಳ್ಳುತ್ತಿರೋದು ರಮಾನಾಥ ರೈ ಮಾತ್ರ ಎಂದು ಹೇಳಲಾಗಿದೆ. ಅದಲ್ಲದೇ ರಮಾನಾಥ್ ರೈ ಅವರ ಮನೆ ಭದ್ರತೆಗೂ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.
ಅಷ್ಟೇ ಅಲ್ಲ, ಒಬ್ಬ ಪೊಲೀಸ್ ಗನ್ ಮ್ಯಾನ್ ನನ್ನು ಹೊಂದಿದ್ದಾರೆ. ಈ ಎಲ್ಲಾ ಸೌಲಭ್ಯಗಳು ಸಚಿವರಾಗಿದ್ದಾಗ ಪೊಲೀಸ್ ಇಲಾಖೆ ಒದಗಿಸಿತ್ತು. ಆದರೆ ರೈ ಮಾಜಿ ಆದಾಗಲೂ ಈ ಸೌಲಭ್ಯ ಬಳಸಿಕೊಳ್ಳುತ್ತಿರುವುದಾದರೂ ಏಕೆ ? ಎಂಬ ಪ್ರಶ್ನೆ ಮೂಡಲಾರಂಭಿಸಿದೆ.
ಜೀವ ಬೆದರಿಕೆ ಇರುವ ರಾಜಕೀಯ ಮುಖಂಡರಿಗೆ ಮಾತ್ರ ನಿಯಮದ ಪ್ರಕಾರ ಇಂತಹ ಭದ್ರತೆಯನ್ನು ನೀಡಲು ಅವಕಾಶಗಳಿವೆ. ರಮಾನಾಥ ರೈ ಎಲ್ಲರೊಂದಿಗೂ ಬೆರೆಯುವ ರಾಜಕಾರಣಿ . ಅವರಿಗೆ ಜೀವ ಬೆದರಿಕೆ ಇರುವ ಬಗ್ಗೆ ಈವರೆಗೆ ಯಾವುದೇ ಘಟನೆಗಳು ವರದಿಯಾಗಿಲ್ಲ.
ಮಂಗಳೂರಿನಲ್ಲಿ ರಮಾನಾಥ್ ರೈ ಪತ್ರಕರ್ತರನ್ನು ಅಪ್ಪಿಕೊಂಡಿದ್ದೇಕೆ ?
ಅದಲ್ಲದೇ ಈ ಹಿಂದೆ ಅವರ ಮನೆಗೆ ಮುತ್ತಿಗೆ ಹಾಕಿದ ಯಾವುದೇ ಘಟನೆ ಬಂಟ್ವಾಳದಲ್ಲಿ ನಡೆದಿಲ್ಲ. ಯಾರೊಂದಿಗೂ ದ್ವೇಷ ಕಟ್ಟಿಕೊಂಡಿಲ್ಲ.
ರಮಾನಾಥ ರೈ ಪಾಲ್ಗೊಳ್ಳುವ ಮದುವೆ, ಮುಂಜಿ, ಸಭೆ ಸಮಾರಂಭ ಸೇರಿದಂತೆ ಮೊನ್ನೆ ಮೊನ್ನೆ ನಡೆದ ಭಾರತ್ ಬಂದ್ ಸಂದರ್ಭದಲ್ಲೂ ಈ ಪೋಲೀಸರು ರಮಾನಾಥ ರೈ ಅವರನ್ನು ಹಿಂಬಾಲಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದಲ್ಲಿ 8 ಶಾಸಕರಿದ್ದು, ಇವರಲ್ಲಿ ಉಳ್ಳಾಲ ಶಾಸಕ ಹಾಗೂ ವಸತಿ ಸಚಿವ ಯು.ಟಿ.ಖಾದರ್ ಹೊರತುಪಡಿಸಿ ಯಾರೊಬ್ಬರಿಗೂ ಗನ್ ಮ್ಯಾನ್ ಗಳಿಲ್ಲ.
ಅಲ್ಲದೆ, ಈ ಹಿಂದೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಮೊಯಿದೀನ್ ಬಾವಾ ಕೂಡಾ ತಮಗೆ ಗನ್ ಮ್ಯಾನ್ ನೀಡಬೇಕೆಂಬ ಬೇಡಿಕೆ ಪೋಲೀಸರ ಮುಂದೆ ಇಟ್ಟ ಸಂದರ್ಭದಲ್ಲಿ ಯಾವುದೇ ಬೆದರಿಕೆ ಇಲ್ಲದ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಸೌಲಭ್ಯವನ್ನು ಪೊಲೀಸ್ ಇಲಾಖೆ ನೀಡಿರಲಿಲ್ಲ.
ಆದರೆ ರಮಾನಾಥ ರೈಯವರಿಗೆ ಯಾವುದೇ ಬೆದರಿಕೆಯೂ ಇಲ್ಲದೇ ಇದ್ದರೂ, ಪೋಲೀಸ್ ಎಸ್ಕಾರ್ಟ್ ಜೊತೆಗೆ ಇಷ್ಟೊಂದು ಪೊಲೀಸರನ್ನು ನೀಡಿರುವುದರ ಹಿಂದಿನ ಮರ್ಮವೇನು ಎನ್ನುವುದು ಸ್ಪಷ್ಟವಾಗಬೇಕಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭದ್ರತೆಗೆ ಪೋಲೀಸ ಕೊರತೆ ಇಲಾಖೆಯನ್ನು ಕಾಡುತ್ತಿದೆ. ಈ ಕಾರಣ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗುತ್ತದೆ. ಪೊಲೀಸರ ಕೊರತೆ ಕಾಡುತ್ತಿದ್ದರೂ ರೈ ಅವರಿಗೆ ಎಸ್ಕಾರ್ಟ್ ನೀಡಿ ಭದ್ರತೆಗೆ ಪೊಲೀಸರನ್ನು ನೇಮಿಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಗಳ ನಡೆಯ ಬಗ್ಗೆ ಈಗ ಪ್ರಶ್ನೆ ಎತ್ತಲಾಗುತ್ತಿದೆ.