ಡಿಜಿಧನ್ ಯೋಜನೆ : ಮಂಗಳೂರಿನ ಕಾಲೇಜಿಗೆ ಬಹುಮಾನ
ಮಂಗಳೂರು, ಜನವರಿ 12 : ಈಗಾಗಲೇ ಕೇಂದ್ರ ಸರ್ಕಾರವು ನಗದು ರಹಿತ ವ್ಯವಹಾರ ನಡೆಸುವಂತೆ ಹಾಗು ಉದ್ದಿಮೆದಾರರಿಗೆ ಉತ್ತೇಜನ ನೀಡುವ ಸಲುವಾಗಿ ಇತ್ತೀಚೆಗಷ್ಟೇ 'ಡಿಜಿ ಧನ್ ವ್ಯಾಪರ್' ಯೋಜನೆಯನ್ನು ಜಾರಿಗೊಳಿಸಿತ್ತು.
ನಗದು ರಹಿತ ವಹಿವಾಟನ್ನು ಹೆಚ್ಚಿಸುವ ಉದ್ದೇಶದಿಂದ ಕ್ಯಾಶ್ ಲೆಸ್ ವ್ಯಾಪಾರದಲ್ಲಿ ತೊಡಗುವವರಿಗೆ ಪ್ರತಿವಾರ ಬಹುಮಾನ ನೀಡುವುದಾಗಿಯೂ ನರೇಂದ್ರ ಮೋದಿ ಸರಕಾರ ಘೋಷಿಸಿತ್ತು. ಈ ಅಭಿಯಾನದ ಅದೃಷ್ಟ ಈಗ ಮಂಗಳೂರಿನ ಸಂಸ್ಥೆಗೆ ಒಲಿದಿದೆ.[ನೋಟ್ ಬ್ಯಾನ್ ನಂತರ 25 ಸಾವಿರ ಕೋಟಿ ರು. ಡಿಜಿಟಲ್ ವ್ಯವಹಾರ!]
ಕೇಂದ್ರ ಸರ್ಕಾರ ಜಾರಿಗೊಳಿಸಿದ 'ಡಿಜಿ ಧನ್ ವ್ಯಾಪಾರ್' ಯೋಜನೆಯಡಿ ನಗರದ ವಳಚ್ಚಿಲ್ ನ ಎಕ್ಸ್ ಪರ್ಟ್ ಪದವಿ ಪೂರ್ವ ಕಾಲೇಜಿನ ಬ್ಯಾಂಕ್ ಖಾತೆಗೆ ಬರೋಬ್ಬರಿ 50,000 ರು ಬಹುಮಾನ ಲಭಿಸಿದೆ. ಅದೃಷ್ಟವೆಂದರೆ ಇದಲ್ಲದೆ ಇನ್ನೇನು?
ನಗದು ರಹಿತ ವ್ಯವಹಾರ ನಡೆಸುವ ಅದೃಷ್ಟಶಾಲಿ ಗ್ರಾಹಕರು ಹಾಗೂ ಉದ್ದಿಮೆದಾರರನ್ನು ಉತ್ತೇಜಿಸುವ ಸಲುವಾಗಿ ಕ್ರಿಸ್ಮಸ್ ಸಂದರ್ಭದಲ್ಲಿ ಕೇಂದ್ರ ಸರಕಾರ ಈ ಯೋಜನೆಗೆ ಚಾಲನೆ ನೀಡಿತ್ತು. ಡಿಜಿ ಧನ್ ವ್ಯಾಪಾರ್ ಯೋಜನೆಯಡಿ ಪ್ರತಿ ವಾರ ಏಳು ಸಾವಿರ ಅದೃಷ್ಟಶಾಲಿ ಉದ್ದಿಮೆದಾರರನ್ನು ಆಯ್ಕೆ ಮಾಡಿ ಅವರಿಗೆ ತಲಾ 50 ಸಾವಿರ ರು. ಬಹುಮಾನ ನೀಡಲಾಗುತ್ತಿದೆ.