ಧರ್ಮಸ್ಥಳ ಲಕ್ಷದೀಪೋತ್ಸವಕ್ಕೆ ಅದ್ಧೂರಿ ಚಾಲನೆ
ಬೆಳ್ತಂಗಡಿ, ನವೆಂಬರ್ 25: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪುಣ್ಯ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸ ಪ್ರಯುಕ್ತ ನವೆಂಬರ್ 24 ರಂದು ವಿಶೇಷ ಪೂಜೆ ಪುನಸ್ಕಾರದ ಜತೆಗೆ ಲಕ್ಷದೀಪೋತ್ಸವ ನಡೆಯಿತು. ಲಕ್ಷ ದೀಪೋತ್ಸವದ ಸಂಭ್ರಮದ ಹಿನ್ನಲೆಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಶ್ರೀಧರ್ಮಸ್ಥಳ ಕ್ಷೇತ್ರ ಕಂಗೊಳಿಸುತ್ತಿತ್ತು. ಲಕ್ಷದೀಪೋತ್ಸವದ ಹಿನ್ನಲೆಯಲ್ಲಿ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ರಾಜ್ಯ ಮಟ್ಟದ ವಸ್ತುಪ್ರದರ್ಶನದ ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾತನಾಡಿ, ಜ್ಞಾನ ದಾನದ ಉದ್ದೇಶದೊಂದಿಗೆ ಸಂಸ್ಕಾರ ನೀಡುವಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು ಮಾತ್ರವಲ್ಲದೆ ಈ ಹಿಂದೆ ಜಾತ್ರೆಯಲ್ಲಿ ಜೂಜು ಮುಂತಾದ ವಿಕೃತಿಗಳು ನಡೆಯುತ್ತಿದ್ದವು. ಆದರೆ ಕಳೆದ 25 ವರ್ಷಗಳ ಗ್ರಾಮಾಭಿವೃದ್ಧಿಯ ಸಾಧನೆಯಿಂದಾಗಿ ಇವೆಲ್ಲಾ ದೂರವಾಗಿವೆ. ರಾಜ್ಯದ ಇತರ ಕಡೆಯ ಜಾತ್ರೆ- ಉತ್ಸವಗಳಲ್ಲಿ ಕೂಡಾ ಇಂಥದ್ದೇ ಶಿಸ್ತು ಮೂಡಬೇಕು ಎಂದರು.[ಧರ್ಮಸ್ಥಳ: 'ಭಗವಂತನೆಡೆಗಿನ ಭಕ್ತರ ನಡಿಗೆ'ಯೊಂದಿಗೆ ಚಾಲನೆ]

ಕಲೆ, ಸಾಹಿತ್ಯ ಸಂಸ್ಕೃತಿಗಳನ್ನು ಬೆಳೆಸಿ ಮನ್ನಣೆ ನೀಡುವ ಕಾರ್ಯ ಶ್ರೀ ಕ್ಷೇತ್ರದಿಂದ ಸಿಗುತ್ತಿರುವುದು ಶ್ಲಾಘನೀಯ. ಕ್ಷೇತ್ರದಿಂದ ಹೊರಬಂದ ಯೋಜನೆಗಳ ಹಿಂದೆ ಸಾಮಾಜಿಕ, ಶೈಕ್ಷಣಿಕ ಗುರಿ ಇರುತ್ತದೆ ಎಂದು ವಸ್ತು ಪ್ರದರ್ಶನ ಉದ್ಘಾಟಿಸಿದ ದ.ಕ.ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.ಗ್ರಾಮಾಭಿವೃದ್ಧಿಯ ಸಾಧನೆಯಿಂದಾಗಿ ರಾಷ್ಟ್ರಮಟ್ಟದಲ್ಲಿ ಕ್ಷೇತ್ರವನ್ನು ಹಾಗೂ ಡಾ. ಹೆಗ್ಗಡೆಯವರನ್ನೂ ಗುರುತಿಸಲಾಗುತ್ತಿದೆ. ಭಜನಾ ತರಬೇತಿಯ ಮೂಲಕ ಧಾರ್ಮಿಕ ಸ್ವಚ್ಛತೆಯನ್ನೂ ಹೆಗ್ಗಡೆಯವರು ಮಾಡುತ್ತಿದ್ದಾರೆ. ಈಗಾಗಲೇ ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಸಫಾಯಿಗಿರಿ ಪ್ರಶಸ್ತಿ ಕೂಡಾ ಬಂದಿದೆ. ಹೆಗ್ಗಡೆಯವರು ಪ್ರತಿಯೊಂದು ಕ್ಷೇತ್ರದಲ್ಲಿ ಜೀವಕಳೆಯನ್ನು ತುಂಬಿ ಸಮಾಜದ ಕಟ್ಟಕಡೆಯ ಮನುಷ್ಯನ ಬಾಳು ಬೆಳಕಾಗುವಂತೆ ಮಾಡಿದ್ದಾರೆ. ಅವರ ಶ್ರಮ, ಸಾಧನೆ ಪ್ರಶಂಸನೀಯ ಎಂದರು.[ನ.24ರಿಂದ ನ.29ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ]
ಇಂದು ಕೆರೆಕಟ್ಟೆ ಉತ್ಸವ, ನ. 26 ರಂದು ಉದ್ಯಾನೋತ್ಸವ ಕೂಡ ಜರುಗಲಿದೆ. ಪ್ರತಿ ದಿನ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ರಾಜ್ಯ ಮಟ್ಟದ ವಸ್ತು ಪ್ರದರ್ಶನಕ್ಕೆ ಉಚಿತ ಪ್ರವೇಶ ಇರಲಿದೆ.












Click it and Unblock the Notifications