ಸಲಿಂಗ ಕಾಮ ಆರೋಪ: ಮಂಗಳೂರಿನಲ್ಲಿ ದೈವ ಪಾತ್ರಿ ಮೇಲೆ ಹಲ್ಲೆ!
ಮಂಗಳೂರು, ಮೇ 13:ಸಲಿಂಗ ಕಾಮ ಆರೋಪದ ಮೇಲೆ ದೈವ ಪಾತ್ರಿಯೊಬ್ಬರ ತಲೆ ಬೋಳಿಸಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ನಗರದ ಬಿಕರ್ನಕಟ್ಟೆ ಎಂಬಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ದೈವಪಾತ್ರಿಯೊಬ್ಬರಿಗೆ ಮಹಿಳೆಯರೂ ಸಹಿತ ಕೂದಲನ್ನು ಬಲವಂತವಾಗಿ ಕತ್ತರಿಸಿ ಹಲ್ಲೆ ನಡೆಸಿರುವುದು ದಾಖಲಾಗಿದೆ.
ವಿಸ್ಮಯ: ಪ್ರಳಯರುದ್ರನ ಗಣ 'ವೀರಭದ್ರಸ್ವಾಮಿ' ಪಾತ್ರಿಯ ದೇಹ ಆವರಿಸಿದಾಗ!
ಇಲ್ಲಿಯ ಸ್ಥಳೀಯ ದೈವ ಪಾತ್ರಿ ಲೋಕೇಶ್ ಪೂಜಾರಿ ಅವರ ಮೇಲೆ ಈ ಹಲ್ಲೆ ನಡೆಸಲಾಗಿದ್ದು, ದೈವದ ನರ್ತನ ಸೇವೆ ನಡೆದ ಬಳಿಕ ಕೆಲವರು ಸೇರಿ ಈ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಲೋಕೇಶ್ ಅವರಿಗೆ ಸಲಿಂಗಕಾಮದ ಬಗ್ಗೆ ಜನರ ಗುಂಪೊಂದು ಪ್ರಶ್ನಿಸಿದ್ದು, ಕೈಯ್ಯಲ್ಲಿನ ಖಡ್ಗ ತೆಗೆಯುವಂತೆ ಒತ್ತಾಯಿಸಿದ್ದಾರೆ.
ಅಲ್ಲದೇ, ಬಲವಂತವಾಗಿ ಪಾತ್ರಿಯ ತಲೆ ಕೂದಲನ್ನು ಕತ್ತರಿಸಿದ್ದಾರೆ. ಈ ನಡುವೆ ಹಿರಿಯರು ತಡೆಯಲು ಯತ್ನಿಸಿದರೂ ಯುವಕರ ಗುಂಪು ಲೋಕೇಶ್ ಮೇಲೆ ಹಲ್ಲೆ ನಡೆಸಿದೆ.ಈ ಘಟನೆ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರೀ ಚರ್ಚೆಗೆ ಆರಂಭವಾಗಿದೆ. ಆದರೆ ಈ ಘಟನೆ ಕುರಿತಾಗಲಿ, ಹಲ್ಲೆಯ ಬಗ್ಗೆಯಾಗಲೀ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ.
ಲೋಕೇಶ್ ಪೂಜಾರಿ ವೃತ್ತಿಯಲ್ಲಿ ದೈವ ಪಾತ್ರಿಯಾಗಿದ್ದರೂ, ಸಲಿಂಗ ಕಾಮ ನಡೆಸುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಯುವಕರು ಆಕ್ರೋಶಗೊಂಡು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ದೈವ ಪಾತ್ರಿಗಳೇ ಇಂಥ ವರ್ತನೆ ತೋರಿದರೆ ಹೇಗೆ? ಎನ್ನುವ ಆಕ್ರೋಶದಿಂದ ಯುವಕರು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.