ಮಂಗಳೂರು: ದೇಶದ ಮೊದಲ ಸ್ಟಾರ್ಟಪ್ ಇನ್ಕ್ಯುಬೇಶನ್ ಕೇಂದ್ರಕ್ಕೆ ಚಾಲನೆ
ಮಂಗಳೂರು, ಡಿಸೆಂಬರ್ 29 : ಹೊಸ ಹೊಸ ಆಲೋಚನೆಗಳನ್ನು ಹೊತ್ತ ಯುವ ಇಂಜಿನಿಯರ್ ಗಳಿಗೆ ಹೊಸ ಐಟಿ ಉದ್ದಿಮೆಯನ್ನು ಆರಂಭಿಸಲು ನೆರವಾಗುವ ದೇಶದ ಮೊದಲ ಸ್ಟಾರ್ಟಪ್ ಇನ್ಕ್ಯುಬೇಶನ್ ಕೇಂದ್ರವನ್ನು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಗಳೂರಿನಲ್ಲಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಕೇಂದ್ರದ ಸ್ಟಾರ್ಟಪ್ ಯೋಜನೆಯತ್ತ ಈಗ ಜಗತ್ತೇ ತಿರುಗಿ ನೋಡುತ್ತಿದೆ. ಸಣ್ಣ ಉದ್ದಿಮೆಯಿಂದ ತೊಡಗಿ ದೊಡ್ಡ ಕೈಗಾರಿಕೆ ಸ್ಥಾಪನೆಯವರೆಗೆ ಸ್ಟಾರ್ಟಪ್ ನೆರವಾಗುತ್ತದೆ. ಬೆಂಗಳೂರಿಗೆ ಪರ್ಯಾಯವಾಗಿ ಮಂಗಳೂರನ್ನು ಐಟಿ ವಲಯದಲ್ಲಿ ಬೆಳೆಸಲು ಈ ಕೇಂದ್ರ ಪ್ರಯೋಜನಕಾರಿಯಾಗಲಿದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಕೇಂದ್ರ ಕೇವಲ ಯಾಂತ್ರೀಕೃತವಾಗಿ ಕಾರ್ಯ ನಿರ್ವಹಿಸಲು ಸೀಮಿತವಾಗದೆ, ಸ್ಟಾರ್ಟಪ್ ಗಳ ಜೊತೆಗೆ ಸಂವಾದಕ್ಕೆ ವೇದಿಕೆಯಾಗಬೇಕು. ಇಲ್ಲಿಗೆ ಬಂಡವಾಳ ಹೂಡಿಕೆ ಆಗಬೇಕು.
ಕೈಗಾರಿಕೋದ್ಯಮಿಗಳು ಬಂದು ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸ್ಟಾರ್ಟಪ್ ಗಳೊಂದಿಗೆ ಮಾತುಕತೆ ನಡೆಸಬೇಕು. ಕೃಷಿ, ಕೈಗಾರಿಕೆ ಸೇರಿದಂತೆ ವಿವಿಧ ರಂಗದ ಅನುಭವಿಗಳು ತಮ್ಮ ಸಲಹೆ ಸೂಚನೆಗಳನ್ನು ಸ್ಟಾರ್ಟಪ್ ಗಳಿಗೆ ನೀಡಬೇಕು ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಕೆರೆ ನೀಡಿದರು.
ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿಯ ನೇತೃತ್ವದಲ್ಲಿ ಈ ಕೇಂದ್ರ ಕಾರ್ಯನಿರ್ವಹಿಸಲಿದ್ದು, ಸಾಮಾನ್ಯರಿಗೆ ಸುಲಭದ ಬಾಡಿಗೆ ದರದಲ್ಲಿ ಇದರ ಸೇವೆ ಲಭ್ಯವಾಗಲಿದೆ.
ಕರಾವಳಿಯ ಯುವ ಎಂಜಿನಿಯರ್ ಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಹೇಳಿದ ಅವರು ಸಾಮಾನ್ಯರಿಗೆ ಸುಲಭದ ಬಾಡಿಗೆ ದರದಲ್ಲಿ ಇದರ ಸೇವೆ ಲಭ್ಯವಾಗಲಿದ್ದು, ಕರಾವಳಿಯ ಯುವ ಇಂಜಿನಿಯರ್ ಗಳು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸ್ಟಾರ್ಟಪ್ ಇನ್ಕ್ಯುಬೇಶನ್ ಕೇಂದ್ರ ಸ್ಥಾಪನೆಗೆ ತಮ್ಮ ಸಂಸದೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 1.50 ಕೋಟಿ ರು. ಮೊತ್ತವನ್ನು ವಾಣಿಜ್ಯ ಸಚಿವೆಯಾಗಿದ್ದಾಗ ನಿರ್ಮಲಾ ಸೀತಾರಾಮನ್ ಬಿಡುಗಡೆಗೊಳಿಸಿದ್ದರು.












Click it and Unblock the Notifications