ಗೋವು ಕಳ್ಳತನ ಗ್ಯಾಂಗ್ ಪತ್ತೆಹಚ್ಚಿದ ಬಜ್ಪೆ ಪೊಲೀಸರು
ಮಂಗಳೂರು, ನವೆಂಬರ್ 6: ಹತ್ತಾರು ಗೋವುಕಳ್ಳತನ, ಕೊಲೆ, ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಗ್ಯಾಂಗ್ವೊಂದನ್ನು ಬೇಧಿಸುವಲ್ಲಿ ಬಜ್ಪೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಾವೂರು ಶಾಂತಿನಗರ ನಿವಾಸಿ ನವಾಝ್ ಅಲಿಯಾಸ್ ಅಬ್ದುಲ್ ನವಾಝ್(30 ), ಕೆ.ಸಿ.ರೋಡ್-ಕೋಟೆಕಾರ್ ನಿವಾಸಿ ಮುಹಮ್ಮದ್ ಮನ್ಸೂರ್(29), ಫರಂಗಿಪೇಟೆ-ಅಮೆಮಾರ್ ನಿವಾಸಿ ಇಮ್ರಾನ್(28), ಅಮೆಮಾರ್ ನಿವಾಸಿ ಇಮ್ತಿಯಾಝ್(28), ಕೆ.ಸಿ.ರೋಡ್-ಕೋಟೆಕಾರ್ ನಿವಾಸಿ ಅಸ್ಗರ್ ಅಲಿಯಾಸ್ ಅಬ್ಬಾಸ್(30), ಅರ್ಕುಳ ನಿವಾಸಿ ಬಾತಿಶಾ (30) ಬಂಧಿತರು.

ಇತ್ತೀಚೆಗೆ ಠಾಣಾ ವ್ಯಾಪ್ತಿಯ ಕುಪ್ಪೆಪದವು ಸಮೀಪದ ಕೊಳವೂರು-ಬೊಳಿಯ ಎಂಬಲ್ಲಿ ಹಟ್ಟಿಗೆ ನುಗ್ಗಿ ಜಾನುವಾರು ಕಳವು ಪ್ರಕರಣದ ಬೆನ್ನತ್ತಿದ್ದ ಪೊಲೀಸ್ ತಂಡಕ್ಕೆ ಆರು ಮಂದಿ ಸೆರೆಸಿಕ್ಕಿದ್ದಾರೆ.
ಬಂಧಿತರಿಂದ ಎರಡು ಸ್ವಿಫ್ಟ್, ಒಂದು ರಿಟ್ಝ್ ಕಾರ್, ಒಂದು ಬೈಕ್ ಹಾಗೂ 5,100 ರೂ. ನಗದು, ಆರು ಮೊಬೈಲ್ ಫೋನ್, ಎರಡು ತಲವಾರು, ಮಚ್ಚು, ಮರದ ದೊಣ್ಣೆ ಮತ್ತಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನವಾಝ್ ವಿರುದ್ಧ ಕಳ್ಳತನ, ಕೊಲೆ, ದರೋಡೆ ಪ್ರಕರಣಗಳು ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿವೆ. ಇಮ್ರಾನ್ ಸಕಲೇಶಪುರ ಬಳಿ ನಡೆದಿದ್ದ ಲಾರಿ ಚಾಲಕನ ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ.
ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ದನ ಕಳವು ಪ್ರಕರಣದಲ್ಲೂ ಭಾಗಿಯಾಗಿರುವ ಆರೋಪವಿದೆ. ಆರೋಪಿ ಬಾತಿಶಾ ಮನೆಯಲ್ಲೇ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದು, ಕದ್ದಿದ್ದ ಗೋವುಗಳನ್ನು ಆತನ ಮನೆಗೆ ಸಾಗಿಸಿ, ಮಾಂಸ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಆರೋಪಿಗಳು ಬೆಳ್ತಂಗಡಿ, ಸಕಲೇಶಪುರ, ಬಜ್ಪೆ, ಮೂಡಬಿದ್ರೆ ಸುತ್ತಮುತ್ತ ನಡೆದಿರುವ ಗೋಕಳ್ಳತನ ಪ್ರಕರಣಗಳಲ್ಲೂ ಭಾಗಿಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರು ಈ ನಿಟ್ಟಿನಲ್ಲಿ ತನಿಖೆ ಮುಂದುವರಿಸಿದ್ದಾರೆ.
ಕಳೆದ ತಿಂಗಳು ಬೊಳಿಯ ನಿವಾಸಿ ರಾಜೇಶ್ ಎಂಬುವರ ಮನೆಯ ಹಟ್ಟಿಗೆ ನುಗ್ಗಿ ಮೂರು ದನಗಳನ್ನು ಕಳ್ಳತನ ಮಾಡಿದ್ದರು.
ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಗೆ ನೀಡಿರ ದೂರಿನನ್ವಯ ಪ್ರಕರಣದ ಬೆನ್ನು ಬಿದ್ದು ತನಿಖೆ ನಡೆಸಿದಾಗ ಠಾಣಾ ವ್ಯಾಪ್ತಿಯಲ್ಲಿ ಗೋಕಳ್ಳರ ಜಾಲ ಸಕ್ರಿಯವಾಗಿ ಕಾರ್ಯಚರಿಸುತ್ತಿರುವುದು ಬೆಳಕಿಗೆ ಬಂದಿದೆ.
ಅದರಂತೆ ಠಾಣಾಧಿಕಾರಿ ಸತೀಶ್ ಮತ್ತು ಸಿಬ್ಬಂದಿ ಪೊಳಲಿ ದ್ವಾರದ ಬಳಿ ವಾಹನ ತಪಾಸಣೆ ನಡೆಸುತ್ತಿದ್ದಾಗ ಜಾಲದ ಪ್ರಮುಖ ಸೂತ್ರಧಾರಿ ನವಾಝ್ ಸಿಕ್ಕಿಬಿದ್ದಿದ್ದಾನೆ.
ಆತನ ಮೂಲಕ ಉಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ಮಾಹಿತಿ ನೀಡಿದ್ದಾರೆ.












Click it and Unblock the Notifications