ಸೂಸೈಡ್ ಸ್ಪಾಟ್ ಆಗುತ್ತಿದೆಯೇ ನೇತ್ರಾವತಿ ಸೇತುವೆ?; ಶೀಘ್ರವೇ ಸಿಸಿ ಟಿವಿ ಕ್ಯಾಮೆರಾ, ಫೈಬರ್ ಗೋಡೆ
ಮಂಗಳೂರು, ಸೆಪ್ಟೆಂಬರ್ 3: ಕೆಫೆ ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ಸ್ಥಳವಾದ ನೇತ್ರಾವತಿ ನದಿ ಸೇತುವೆಗೆ ಇದೀಗ ಭಾರೀ ಭದ್ರತೆ ಕಲ್ಪಿಸಲಾಗುತ್ತಿದೆ.
ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡ ನಂತರ ಇದೇ ಜಾಗದಲ್ಲಿ ನಾಲ್ವರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ದಾಖಲಾಗಿದ್ದು, ಇದೀಗ ನೇತ್ರಾವತಿ ಸೇತುವೆ ಬಳಿ ಸಿಸಿ ಟಿ.ವಿ ಕ್ಯಾಮೆರಾಗಳನ್ನು ಹಾಗೂ ಸೇತುವೆಯ ಎರಡೂ ಕಡೆ ಲೋಹದ ಗ್ರಿಲ್ ಗಳನ್ನು ಹೊಂದಿರುವ ಫೈಬರ್ ತಡೆಗೋಡೆಗಳನ್ನು ನಿರ್ಮಿಸುವ ಚಿಂತನೆ ನಡೆಯುತ್ತಿದೆ.
ಸಿದ್ಧಾರ್ಥ ಸಾವು: ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲೇನಿದೆ?
ಜುಲೈ 29ರಂದು ಸಿದ್ಧಾರ್ಥ ಅವರು ಇಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಂತರ ಒಂದೇ ತಿಂಗಳ ಅವಧಿಯಲ್ಲಿ ಇನ್ನೂ ನಾಲ್ವರು ಈ ಸೇತುವೆ ಮೇಲಿಂದ ಜಿಗಿದಿರುವುದು ದಾಖಲಾಗಿದೆ. ಅದರಲ್ಲಿ ಒಬ್ಬರನ್ನು ರಕ್ಷಿಸಲಾಗಿದೆ.
ಈ ಕುರಿತು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರೊಂದಿಗೆ ಈ ರೀತಿ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೇತುವೆ ಜಾಗದಲ್ಲಿ ಸಿಸಿ ಟಿವಿ ಕ್ಯಾಮೆರಾ, ಸೇತುವೆಯ ಎರಡೂ ಕಡೆ ಫೈಬರ್ ತಡೆಗೋಡೆಗಳನ್ನು ನಿರ್ಮಿಸುವ ಪ್ರಸ್ರಾವನೆಯನ್ನು ಇಟ್ಟಿರುವುದಾಗಿ ತಿಳಿಸಿದ್ದಾರೆ.
ಸಿದ್ಧಾರ್ಥ ದೇಹವನ್ನು ಪತ್ತೆ ಮಾಡಿದ ಮೀನುಗಾರನ ಮಾತುಗಳು
"ಸಿದ್ಧಾರ್ಥ ಅವರು ಸಾವನ್ನಪ್ಪಿದ ನಂತರ ಮೂರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಇದೇ ರೀತಿ ಮುಂದುವರೆದರೆ ಈ ಜಾಗ ಸೂಸೈಡ್ ಸ್ಪಾಟ್ ಎಂದು ಕರೆಸಿಕೊಳ್ಳುವ ಎಲ್ಲಾ ಸಾಧ್ಯತೆಗಳೂ ಇದೆ. ಹೀಗಾಗಿ ಇಂಥ ಘಟನೆಗಳು ನಡೆಯುವುದನ್ನು ತಡೆಯಲು ಕ್ರಮ ವಹಿಸಲೇಬೇಕಿದೆ. ನಾನು ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿದ್ದೇನೆ. ಇನ್ನು ಕೆಲವೇ ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಈ ಫೈಬರ್ ಗೋಡೆ 6 ಅಡಿ ಎತ್ತರವಿದ್ದು, ಪಾರದರ್ಶಕವಾಗಿರುತ್ತದೆ. ಹೀಗಾಗಿ ನದಿ ವೀಕ್ಷಣೆಗೆ ತೊಂದರೆಯಾಗದು" ಎಂದು ತಿಳಿಸಿದ್ದಾರೆ ವೇದವ್ಯಾಸ ಕಾಮತ್.
ಆಗಸ್ಟ್ 9ರಂದು ಮಹಿಳೆಯೊಬ್ಬರ ಶವ ಇದೇ ಜಾಗದಲ್ಲಿ ಪತ್ತೆಯಾಗಿತ್ತು. ಆಗಸ್ಟ್ 17ರಂದು ಮತ್ತೊಬ್ಬ ಯುವಕ ಇಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಗೊಂಡಿತ್ತು.