ಭಾರತ್ ಬಂದ್: ರಾಜ್ಯ ಸರಕಾರವನ್ನು ಹುರಿದು ಮುಕ್ಕಿದ ಹಿರಿಯ ಕಾಂಗ್ರೆಸ್ ಮುಖಂಡ
ಭಾರತ್ ಬಂದ್: ರಾಜ್ಯ ಸರಕಾರವನ್ನು ಹುರಿದು ಮುಕ್ಕಿದ ಹಿರಿಯ ಕಾಂಗ್ರೆಸ್ ಮುಖಂಡ
Recommended Video

ಮಂಗಳೂರು, ಸೆ 9: ಭಾರತ್ ಬಂದ್ ಕರೆದು ದೇಶಕ್ಕೆ ನಷ್ಟ ಮಾಡುವುದೇ ಮೊದಲು ಅಪರಾಧ, ಅದರಲ್ಲೂ ಆಡಳಿತ ಪಕ್ಷದವರೇ ಬಂದ್ ಗೆ ಕರೆನೀಡುವುದೆಂದರೆ ಏನರ್ಥ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಲೋಕಸಭಾ ಸದಸ್ಯ ಜನಾರ್ಧನ ಪೂಜಾರಿ, ಕಾಂಗ್ರೆಸ್ ಪಕ್ಷವನ್ನು ಬೆಂಡೆತ್ತಿದ್ದಾರೆ.
ನಗರದ ಕುದ್ರೋಳಿ ದೇವಾಲಯದಲ್ಲಿ ಇಂದು (ಸೆ 9) ಮಾತನಾಡುತ್ತಿದ್ದ ಜನಾರ್ಧನ ಪೂಜಾರಿ, ಬಂದ್ ಗೆ ಕರೆನೀಡುವ ಪಕ್ಷದವರೇ, ಇದರಿಂದಾಗುವ ನಷ್ಟವನ್ನು ಭರಿಸಬೇಕೆಂದು ಸರ್ವೋಚ್ಚ ನ್ಯಾಯಾಲಯ ಹಿಂದೆಯೇ ಆದೇಶಿಸಿದೆ.

ಆದರೂ, ಕಾಂಗ್ರೆಸ್ ಪಕ್ಷ ಬಂದ್ ಕರೆನೀಡುವ ಮೂಲಕ, ನಮ್ಮ ನ್ಯಾಯಾಲಯ ವ್ಯವಸ್ಥೆಯನ್ನು ಅಣಕವಾಡಿದೆ ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್=ಜೆಡಿಎಸ್ ಸಮ್ಮಿಶ್ರ ಸರಕಾರದ ವಿರುದ್ದ ಯಾರಾದರೂ ಕೇಸ್ ಹೂಡಿದರೆ ಅದರಿಂದ ಪಾರಾಗಲು ಸಾಧ್ಯವೇ ಎಂದು ಪ್ರಶ್ನಿಸಿರುವ ಪೂಜಾರಿ, ಬಂದ್ ಕರೆ ಕೊಟ್ಟ ನಂತರ ದೇಶದಲ್ಲಿ ಆಗುವ ಸಾವಿರಾರು ಕೋಟಿ ನಷ್ಟಕ್ಕೆ ಪಕ್ಷ ಮತ್ತು ಬಂದ್ ಗೆ ಕರೆ ಕೊಟ್ಟವರೇ ಹೊಣೆಯಾಗುತ್ತಾರೆಂದು, ಪೂಜಾರಿ ಸ್ವಪಕ್ಷೀಯರನ್ನೇ ಎಚ್ಚರಿಸಿದ್ದಾರೆ.
ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಥವಾ ಜನಾರ್ಧನ ಪೂಜಾರಿ ಬಂದ್ ಗೆ ಕರೆನೀಡಿದರೆ ಅದು ಕಾನೂನು ವಿರೋಧಿ ನಿಲುವಾಗುತ್ತದೆ. ದೇಶ ಮತ್ತು ರಾಜ್ಯ ಸರಕಾರ ಸೆಸ್ ಕಮ್ಮಿ ಮಾಡಿದರೆ, ಅದರ ಲಾಭ ಜನರಿಗೆ ಸಿಗುತ್ತದೆ ಅನ್ನೋದು ತಪ್ಪು. ಹಿಂದೆ ನಾನೂ ಹಣಕಾಸು ಸಚಿವನಾಗಿದ್ದವನು, ಸೆಸ್ ಕಮ್ಮಿ ಮಾಡಿದರೆ ಸರಕಾರ ನಡೆಯುವುದು ಹೇಗೆ ಎಂದು ಪೂಜಾರಿ ಹೇಳಿದ್ದಾರೆ.
ಬೆಲೆ ಏರಿಕೆ ನಿಯಂತ್ರಣಕ್ಕೆ ಮೊದಲು ಕೇಂದ್ರ ಸರಕಾರ ಮುಂದಾಗಬೇಕು. ಅಕ್ರಮ ದಾಸ್ತಾನುದಾರರನ್ನು ಯಾವುದೇ ಮುಲಾಜಿಲ್ಲದೇ, ಜೈಲಿಗೆ ಕಳುಹಿಸಬೇಕು. ಆ ಧೈರ್ಯ ಇರುವವರು ಯಾರು ಎನ್ನುವುದೇ ದೊಡ್ಡ ಪ್ರಶ್ನೆ.
ಸದ್ಯ ಅಂತಹ ಕಠಿಣ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಇರುವವರು ಪ್ರಧಾನಿ ಮೋದಿ ಮಾತ್ರ, ಆದರೆ ಅವರು ಅದಕ್ಕೆ ಮುಂದಾಗುತ್ತಾರೋ ಇಲ್ಲವೋ ಯಾರಿಗೆ ಗೊತ್ತು ಎಂದು ಪೂಜಾರಿ ಹೇಳಿದರು.












Click it and Unblock the Notifications