ಉಸಿರುಗಟ್ಟಿ ಸಾವಿಗೀಡಾದರೇ ಸಿದ್ಧಾರ್ಥ?; ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ
Recommended Video
ಮಂಗಳೂರು, ಆಗಸ್ಟ್ 3: ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ ಅವರ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ನೆನ್ನೆಯಷ್ಟೆ ಬಂದಿದ್ದು, ಸಿದ್ಧಾರ್ಥ ಉಸಿರುಗಟ್ಟಿ ಸಾವಿಗೀಡಾದ ಬಗ್ಗೆ ಅದರಲ್ಲಿ ಉಲ್ಲೇಖಿಸಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ತಜ್ಞ ಡಾ. ಪ್ರತೀಕ್ ರಸ್ತೋಗಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದ ಡಾ.ರಶ್ಮಿ ಅವರು ಪ್ರಾಥಮಿಕ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕಿ ಡಾ.ರಾಜೇಶ್ವರಿ ದೇವಿ ಅವರಿಗೆ ಸಲ್ಲಿಸಿದ್ದಾರೆ.
ಸಿದ್ಧಾರ್ಥ ಅವರ ಪ್ರಕರಣದ ತನಿಖಾಧಿಕಾರಿ ಎಸಿಪಿ ಕೋದಂಡರಾಮ ಅವರಿಗೆ ಈ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ನೀಡಲಾಗಿದೆ. ಈ ವರದಿಯಲ್ಲಿ ಸಿದ್ಧಾರ್ಥಅವರು ನೀರಿಗೆ ಬಿದ್ದು ಉಸಿರು ಗಟ್ಟಿ ಸಾವಿಗೀಡಾದ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.
ಸಿದ್ಧಾರ್ಥ ಸಾವು: ಮರಣೋತ್ತರ ಪರೀಕ್ಷೆ ಪ್ರಾಥಮಿಕ ವರದಿಯಲ್ಲೇನಿದೆ?
ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ಬಂದ ಸಿದ್ಧಾರ್ಥ ಅವರು ಜುಲೈ 29ರಂದು ರಾತ್ರಿ ಜಪ್ಪಿನಮೊಗರು ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. ಆನಂತರ ಜುಲೈ 31ರಂದು ಮುಂಜಾನೆ ಸಿದ್ಧಾರ್ಥ ಅವರ ಮೃತದೇಹ ಹೊಯ್ಗೆ ಬಜಾರ್ ಹಿನ್ನೀರಿನಲ್ಲಿ ಪತ್ತೆಯಾಗಿತ್ತು.
ಸಿದ್ದಾರ್ಥ ಅವರ ಮರಣೋತ್ತರ ಪರೀಕ್ಷೆಯನ್ನು ವೆನ್ಲಾಕ್ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿತ್ತು. ಸಿದ್ದಾರ್ಥ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಲಾದ ಹಿನ್ನೆಲೆಯಲ್ಲಿ ಸಿದ್ಧಾರ್ಥ್ ಅವರ ಮೃತದೇಹದ ಭಾಗಗಳನ್ನು ಹೆಚ್ಚಿನ ಪರೀಕ್ಷೆಗೆ ದಾವಣಗೆರೆಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಸಿದ್ಧಾರ್ಥ್ ಪ್ರಕರಣದ ತನಿಖೆ 4 ದಿನಗಳಲ್ಲಿ ಪೂರ್ಣಗೊಳಿಸುವಂತೆ ಸೂಚನೆ
ಪ್ರಯೋಗಾಲಯದ ಅಂತಿಮ ವರದಿ ಬರಲು ಸುಮಾರು 15 ದಿನಗಳ ಕಾಲಾವಧಿ ಬೇಕಾಗಬಹುದು. ಆ ಬಳಿಕ ಸಾವಿಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ. ಈ ನಡುವೆ ಮಂಗಳೂರು ನಗರ ಅಪರಾಧ ಪತ್ತೆದಳದ ಪಿಎಸ್ ಐ ಕಬ್ಬಳ್ರಾಜ್ ನೇತೃತ್ವದ ತಂಡ ತನಿಖೆಗೆ ಬೆಂಗಳೂರಿಗೆ ತೆರಳಿತ್ತು. ಅಲ್ಲಿ ಕುಟುಂಬಸ್ಥರು, ಸ್ನೇಹಿತರು, ಅವರ ಕಂಪೆನಿ ಸಿಬ್ಬಂದಿ ಹೇಳಿಕೆ ಪಡೆದುಕೊಂಡು ಮಂಗಳೂರಿಗೆ ಮರಳಿದ್ದು. ತನಿಖಾಧಿಕಾರಿ ಸೂಚನೆಯಂತೆ ಇಂದು ಮತ್ತೆ ಬೆಂಗಳೂರಿಗೆ ತೆರಳಿದೆ.