ಕಂಬಳಕ್ಕೆ ಬಿಜೆಪಿ ಬೆಂಬಲ : ಸಂಸದ ನಳಿನ್
ಮಂಗಳೂರು, ಜನವರಿ 22 : ಕಂಬಳ ನಿಷೇಧದ ವಿರುದ್ಧ ಕರಾವಳಿಯಲ್ಲಿ ಹೋರಾಟದ ಮುನ್ಸೂಚನೆ ಕೇಳಿ ಬರುತ್ತಿದ್ದಂತೆಯೇ ಸಂಸದ ನಳಿನ್ ಕುಮಾರ್ ಕಟೀಲ್ ಹೋರಾಟಗಾರರಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಭಾನುವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧ ತೆರವುಗೊಂಡಂತೆ ಕಂಬಳದ ಮೇಲಿನ ನಿಷೇಧವೂ ತೆರವಾಗಬೇಕು. ಈ ಬಗ್ಗೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಒತ್ತಡ ಹೇರಬೇಕು ಎಂದರು.[ದಕ್ಷಿಣ ಕನ್ನಡಕ್ಕೆ ಬೆಂಕಿ ಹಚ್ಚುತ್ತೇವೆ: ಸಂಸದ ಕಟೀಲ್]
ಕಂಬಳದ ನಿಷೇಧದ ನಿರ್ಬಂಧದ ಬಗ್ಗೆ ಕೇಂದ್ರಕ್ಕೆ ನಾನು ಮನವರಿಕೆ ಮಾಡುತ್ತೇನೆ. ಕಂಬಳ ಯಾವುದೇ ಕಾರಣಕ್ಕೂ ನಿಷೇಧವಾಗಬಾರದು. ಈ ನಿಟ್ಟಿನಲ್ಲಿ ಮಾಡುವ ಎಲ್ಲ ಹೋರಾಟಕ್ಕೂ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ಆಸ್ಕರ್ ಫೆರ್ನಾಂಡಿಸ್: ಮಂಗಳೂರಿನಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.
ಕಳೆದ ಬಾರಿ ಕಂಬಳ ಸುಸೂತ್ರವಾಗಿ ನಡೆದಿದೆ. ಈ ಬಾರಿ ತಾತ್ಕಾಲಿಕ ನಿಷೇಧ ಇದೆ. ಹೈಕೋರ್ಟ್ ನಲ್ಲಿರುವುದರಿಂದ ಮುಂದಿನ ನಡೆ ಬಗ್ಗೆ ಮಾತನಾಡಲಾರೆ' ಎಂದಿದ್ದಾರೆ.
ನಿಷೇಧ ತೆರವುಗೊಳ್ಳದಿದ್ದರೆ ಅದನ್ನು ಪ್ರಶ್ನಿಸುವೆವು. ರಾಜ್ಯ ಸರಕಾರ ಕಂಬಳ ಪರ ವಾದ ಮಂಡಿಸುತ್ತಿದೆ. ಮುಂದಿನ ತೀರ್ಪಿನ ನಂತರ ಇದನ್ನು ಪರಿಶೀಲಿಸುವೆವು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದ್ದಾರೆ.
ಜಲ್ಲಿಕಟ್ಟಿಗೆ ಸುಗ್ರೀವಾಜ್ಞೆ ಹೊರಡಿಸಿದ ಬೆನ್ನಲ್ಲಿಯೇ ರಾಜ್ಯದಲ್ಲಿ ವಿಶೇಷವಾಗಿ ಕರಾವಳಿ ಭಾಗದಲ್ಲಿ ಪ್ರತಿಭಟನೆಗಳು ಕೂಗು ಹೆಚ್ಚಾಗುತ್ತಿವೆ.
ಹಾಗೂ ಇತ್ತ ಮಹದಾಯಿ ವಿವಾದಕ್ಕೂ ಸಹ ಸುಗ್ರೀವಾಜ್ಞೆ ಹೊರಡಿಸುವಂತೆ ಇದರ ಹೋರಾಟ ಸಮಿತಿ ಜನವರಿ 23ರಿಂದ ಹೋರಾಟದ ಹಾದಿ ಹಿಡಿಯಲಿದೆ.












Click it and Unblock the Notifications