ಮಂಗಳೂರು : ಸಚಿವ ಸೊರಕೆ ವಿರುದ್ಧ ಬಿಜೆಪಿ ಗರಂ
ಮಂಗಳೂರು, ಡಿ. 22 : ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತರನ್ನು ನೇಮಕ ಮಾಡದ ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಆರು ತಿಂಗಳಿನಿಂದ ಆಯುಕ್ತರ ಹುದ್ದೆ ಖಾಲಿ ಇದ್ದರೂ ನೇಮಕ ಮಾಡಲು ಸಚಿವರು ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಕಾರ್ಯಕರ್ತರು ದೂರಿದರು.
ಮಂಗಳೂರಿನಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಇಂದು ಆರು ತಿಂಗಳಿನಿಂದ ಖಾಲಿ ಇರುವ ಆಯುಕ್ತರ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ಸುದ್ದಿ ತಿಳಿಯುತ್ತಿದ್ದಂತೆ ನಗರದ ಹೋಟೆಲ್ ಒಂದರಲ್ಲಿ ನಡೆಯುವ ಸಮಾರಂಭಕ್ಕೆ ಆಗಮಿಸಲಿದ್ದ ಸೊರಕೆ ತಮ್ಮ ಭೇಟಿಯನ್ನು ರದ್ದುಗೊಳಿಸಿದರು.

ಆದರೆ, ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯ ಮುಂದೆ ಕಪ್ಪು ಬಾವುಟ ಹಿಡಿದು ವಿನಯ್ ಕುಮಾರ ಸೊರಕೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಯುಕ್ತರ ನೇಮಕವಾಗದಿರಲು ಸಚಿವರೇ ಕಾರಣ ಎಂದು ಆರೋಪಿಸಿದರು. [ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೊಂದು ಕಿರೀಟ]
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಳೆದ ಆರು ತಿಂಗಳಿಂದ ಆಯುಕ್ತರ ಹುದ್ದೆ ಖಾಲಿ ಇದೆ. ಆಯುಕ್ತರನ್ನು ಆಯ್ಕೆ ಮಾಡಿಎಂದು ಬೇಡಿಕೆ ಇಟ್ಟರೂ ರಾಜ್ಯ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದು ದೂರಿದರು.

ವಿನಯ್ ಕುಮಾರ್ ಸೊರಕೆಯವರು ಮಂಗಳೂರಿನಲ್ಲಿ ಎಲ್ಲಿಗೆ ಭೇಟಿ ನೀಡಿದರು ಅವರ ವಿರುದ್ಧ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದರು. ಸ್ಥಳಕ್ಕೆ ಆಗಮಿಸಿದ ಬಂದರು ಮತ್ತು ಬರ್ಕೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದರು. ಪ್ರತಿಭಟನೆಯಲ್ಲಿ ಮೊನ್ನಪ್ಪ ಭಂಡಾರಿ, ಕಿಶೋರ್ ಕುಮಾರ್, ವೇದವ್ಯಾಸ ಕಾಮತ್ ಪಾಲ್ಗೊಂಡಿದ್ದರು.

ಅಂದಹಾಗೆ ಮೊದಲು ಹರೀಶ್ ಕುಮಾರ್ ಎನ್ನುವವರು ಪಾಲಿಕೆಯ ಆಯಕ್ತರಾಗಿದ್ದರು. ಅವರಿಂದ ತೆರವಾದ ಸ್ಥಾನಕ್ಕೆ ಅಜಿತ್ ಕುಮಾರ್ ನೇಮಕಗೊಂಡರು. ಸದ್ಯ ಆರು ತಿಂಗಳಿನಿಂದ ಪಾಲಿಕೆಯಲ್ಲಿ ಆಯುಕ್ತರ ಹುದ್ದೆ ಖಾಲಿ ಇದೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications