ಓಣಂ ಹಿನ್ನೆಲೆಯಲ್ಲಿ ಗಗನಕ್ಕೇರಿದ ಬಾಳೆಹಣ್ಣಿನ ದರ
ಮಂಗಳೂರು, ಆಗಸ್ಟ್ 29: ತಮಿಳುನಾಡಿನಲ್ಲಿ ಒಂದೆಡೆ ಧಾರಾಕಾರ ಮಳೆಯಿಂದ ಬಾಳೆ ಬೆಳೆ ನಾಶ, ಇನ್ನೊಂದೆಡೆ ಬಾಳೆಕಾಯಿ ಇಳುವರಿ ಕಡಿಮೆ, ಮತ್ತೊಂದೆಡೆ ಸಮೀಪಿಸುತ್ತಿರುವ ಓಣಂ, ಬಕ್ರೀದ್ ಹಬ್ಬ.. ಹೀಗೆ ಎಲ್ಲಾ ಕಾರಣಗಳು ಏಕಕಾಲಕ್ಕೆ ಒಟ್ಟಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಯಲ್ಲಿ ನೇಂದ್ರ ಮತ್ತು ಕದಳಿ ಬಾಳೆಹಣ್ಣಿನ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ.
ಇದೀಗ ಚಿಲ್ಲರೆ ಮಾರುಕಟ್ಟೆಯಲ್ಲಿ ಕದಳಿ ಬಾಳೆಹಣ್ಣು ಕೆಜಿಗೆ 75 - 80 ರೂ. ದರದಲ್ಲಿ ಮಾರಾಟವಾಗುತ್ತಿದೆ. ರಖಂ ಆಗಿ 63 ರೂ. ದರದಲ್ಲಿ ಮಾರಾಟವಾಗುತ್ತಿದೆ. ಇದರ ಮಧ್ಯೆ ಇನ್ನೂ ಹೆಚ್ಚಿನ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಬಾಳೆಹಣ್ಣಿನ ಮಾರಾಟದಲ್ಲಿ ಪಳಗಿರುವ ವ್ಯಾಪಾರಿಗಳು.

ಇನ್ನು ಜುಲೈ ಆರಂಭದಲ್ಲಿ ಕೆಜಿಗೆ 50 ರೂ. ಇದ್ದ ನೇಂದ್ರ ಬಾಳೆಹಣ್ಣಿನ ಬೆಲೆ ಓಣಂ ಸಂದರ್ಭದಲ್ಲಿ 100 ರ ಗಡಿ ದಾಟುವ ಸಾಧ್ಯತೆ ಇದೆ. ಅಲ್ಲದೆ ಇನ್ನು ಬಕ್ರೀದ್ ಹಬ್ಬವೂ ಬರಲಿರುವುದರಿಂದ ವ್ಯಾಪಾರಿಗಳು ಬೆಲೆ ಏರಿಕೆಯ ನಿರೀಕ್ಷೆಯಲ್ಲಿದ್ದಾರೆ .
ವಿಶೇಷ ಎಂದರೆ ಬೆಲೆ ಹೆಚ್ಚಾಗುತ್ತಿದ್ದರೂ ಬಾಳೆಹಣ್ಣಿಗೆ ಗ್ರಾಹಕರು ಮಾತ್ರ ಕಡಿಮೆಯಾಗಿಲ್ಲ ಎನ್ನುವುದು ವ್ಯಾಪಾರಿಗಳ ಅಭಿಮತ. ಇದು ವ್ಯಾಪಾರಿಗಳನ್ನು ಸಂತಸಕ್ಕೀಡುಮಾಡಿದೆ.
ಬೆಲೆ ಏರಿಕೆಗೆ ಕಾರಣ
ಓಣಂ ಹಬ್ಬಕ್ಕೆ ಪ್ರಧಾನವಾಗಿ ನೇಂದ್ರ ಬಾಳೆಹಣ್ಣನ್ನು ಉಪಯೋಗಿಸುತ್ತಾರೆ. ಈ ಕಾರಣಕ್ಕೆ ನೇಂದ್ರ ಸದ್ಯ ಕೇರಳದಲ್ಲಿ ಬಹು ಬೇಡಿಕೆ ಇರುವ ಬಾಳೆಹಣ್ಣಾಗಿದೆ.
ಸಾಮಾನ್ಯವಾಗಸಿ ಕೇರಳದ ಮಾರುಕಟ್ಟೆಗೆ ತಮಿಳುನಾಡಿನಿಂದ ನೇಂದ್ರ ಬಾಳೆ ಹಣ್ಣು ಪೂರೈಕೆಯಾಗುತ್ತದೆ. ಆದರೆ, ಈ ಬಾರಿ ತಮಿಳುನಾಡಿನಲ್ಲಿ ಮಳೆಯಿಂದ ಇಳುವರಿ ಕುಸಿದು ರಖಂ ಮಾರುಕಟ್ಟೆಯಲ್ಲಿ ದುಪ್ಪಟ್ಟು ಬೆಲೆಗೆ ನೇಂದ್ರ ಮಾರಾಟವಾಗುತ್ತಿದೆ.
ಇನ್ನು ಸ್ಥಳೀಯ ನೇಂದ್ರ ಬಾಳೆಹಣ್ಣು ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದರೂ ಬೇಡಿಕೆಗೆ ತಕ್ಕಷ್ಟು ದೊರಕುತ್ತಿಲ್ಲ. ಹೀಗೆ ಎಲ್ಲಾ ಕಾರಣದಿಂದಲೂ ಬಾಣೆಹಣ್ಣಿನ ಬೆಲೆ ಏರುಗತಿಯಲ್ಲಿದ್ದು ಸೆಂಚುರಿ ದಾಟುವ ಸನ್ನಾಹದಲ್ಲಿದೆ.
ಇದು ಬಾಳೆಹಣ್ಣಿನ ಪರಿಸ್ಥಿತಿಯಾದರೆ ತಮಿಳುನಾಡು, ಕರ್ನಾಟಕಗಳಿಂದ ಬರುವ ತರಕಾರಿಗಳು ದುಪ್ಪಟ್ಟು ದರದಲ್ಲಿ ಕೇರಳದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದರಿಂದ ಸ್ಥಳೀಯವಾಗಿ ತರಕಾರಿಯ ಕೊರತೆಯೂ ಕಾಣಿಸಿಕೊಂಡಿದೆ.












Click it and Unblock the Notifications