ಮೋದಿ ಮಾತು ನಂಬಿ ಆಟೋ ತೆಗೆದುಕೊಂಡ ಚಾಲಕರಿಗೆ ಸಂಕಷ್ಟ!
ಮಂಗಳೂರು, ಏಪ್ರಿಲ್ 21; ಪ್ರಧಾನಮಂತ್ರಿ ನರೇಂದ್ರ ಮೋದಿ ಕಡಲನಗರಿ ಮಂಗಳೂರಿಗೆ ಸಂಕುಚಿತ ನೈಸರ್ಗಿಕ ಅನಿಲ ಸರಬರಾಜು ಯೋಜನೆಯನ್ನು ಲೋಕಾರ್ಪಣೆ ಮಾಡಿದ್ದಾರೆ. ಆದರೆ ಇದೀಗ ಈ ಅನಿಲ ಸರಿಯಾಗಿ ಪೊರೈಕೆಯಾಗದೇ ಆಟೋ ಚಾಲಕರು ತೊಂದರೆಗೆ ಒಳಗಾಗಿದ್ದಾರೆ. ಇಂಧನ ನಂಬಿ ಹೊಸ ಆಟೋ ಖರೀದಿಸಿದವರು ದಿಕ್ಕು ತೋಚದಂತಾಗಿದ್ದಾರೆ.
ದೇಶದ ಮಹತ್ವಾಕಾಂಕ್ಷಿ ಯೋಜನೆಯಾದ ಕೊಚ್ಚಿ-ಮಂಗಳೂರು ಸಂಕುಚಿತ ನೈಸರ್ಗಿಕ ಅನಿಲ ಸರಬರಾಜು ಯೋಜನೆಯನ್ನು ಕೆಲವು ದಿನಗಳ ಹಿಂದೆ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು. ಈ ಯೋಜನೆಯಲ್ಲಿ ಮನೆ ಮನೆಗಳಿಗೆ ಪೈಪ್ ಲೈನ್ ಮೂಲಕ ಶುದ್ಧ ಇಂಧನ ಪೂರೈಸುವ ಜವಾಬ್ಧಾರಿ ಗೈಲ್ ಸಂಸ್ಥೆಯದ್ದು.
ಕೇವಲ ಮನೆಗಳಿಗೆ ಮಾತ್ರವಲ್ಲದೆ ವಾಹನಗಳಿಗೂ ಈ ಸಿಎನ್ಜಿ ಇಂಧನ ನೀಡುವುದಾಗಿ ಹೇಳಿತ್ತು. ಇದೀಗ ಸಿಎನ್ಜಿ ಇಂಧನದಿಂದ ಚಲಿಸುವ ಆಟೋಗಳು ಸಹ ಮಾರುಕಟ್ಟೆಗೆ ಬಂದಿವೆ. ಆದರೆ, ಈ ಇಂಧನವನ್ನು ನಂಬಿ ಸಿಎನ್ಜಿ ಆಟೋ ಖರೀದಿಸಿದ ಚಾಲಕರು ತೊಂದರೆಗೆ ಒಳಗಾಗಿದ್ದಾರೆ. ಸಿಎನ್ಜಿ ಲಭ್ಯವಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ವಾಹನಗಳಿಗೆ ಸಿಎನ್ಜಿ ಇಂಧನ ಪೂರೈಕೆ ಮಾಡುವುದಕ್ಕೆ ಮಂಗಳೂರು ಹೊರವಲಯದ ಕೊಳ್ನಾಡು, ಪಡುಪಣಂಬೂರು, ಕಾವೂರಿನಲ್ಲಿ ಗ್ಯಾಸ್ ಸ್ಟೇಷನ್ ತೆರೆಯಲಾಗಿದೆ. ಆದರೆ ಈ ಸ್ಟೇಷನ್ಗಳಿಗೆ ಗ್ಯಾಸ್ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಹೀಗಾಗಿ ಹೊಸದಾಗಿ ಆಟೋ ಖರೀದಿಸಿದವರು ಗ್ಯಾಸ್ ಸಿಗದೆ ಪರದಾಡುತ್ತಿದ್ದಾರೆ.
ಸಿಎನ್ಜಿ ಆಟೋ ಖರೀದಿಸಿ ಅಂತ ಒತ್ತಾಯ ಮಾಡಿದ ಆಟೋ ಷೋರೂಂ ಸಿಬ್ಬಂದಿ ಗೈಲ್ ಕಂಪನಿಯ ವಿರುದ್ದ ಕೈ ತೋರಿಸುತ್ತಿದ್ದಾರೆ. ಗೈಲ್ ಕಂಪೆನಿಯವರು ನಮಗೂ ಆಟೋಗೂ ಸಂಬಂಧವಿಲ್ಲ ಎಂಬಂತಿದ್ದಾರೆ. ಹೀಗಾಗಿ ಸಾಲ ಮಾಡಿ ಆಟೋ ಖರೀದಿಸಿ, ಇಂಧನ ಇಲ್ಲದೆ ಬಾಡಿಗೆ ಮಾಡಲು ಸಾಧ್ಯವಾಗದೆ ಚಾಲರು ತೊಂದರೆ ಪಡುತ್ತಿದ್ದಾರೆ.

ಸಿಎನ್ಜಿ ಇಂಧನ ಬಳಕೆ ಮಾಡಿದರೆ ಮಾಲಿನ್ಯವೂ ಕಡಿಮೆ ಆಗುತ್ತದೆ. ವಾಹನಗಳಿಗೆ ಮೈಲೇಜ್ ಸಹ ಹೆಚ್ಚಿರುತ್ತದೆ. ಹೀಗಾಗಿ ಮಂಗಳೂರಿಗೆ 15 ಹೆಚ್ಚು ಈ ಆಟೋಗಳು ಬಂದಿದೆ. ಆದರೆ ಸರಿಯಾಗಿ ಗ್ಯಾಸ್ ಪೂರೈಕೆಯಿಲ್ಲದೆ ತೊಂದರೆಯಾಗಿದೆ.
ಈ ಆಟೋಗಳಿಗೆ ಸಿಕ್ಕಾಪಟ್ಟೆ ಪೆಟ್ರೋಲ್ ಬೇಕಾಗಿದೆ. ಈಗಿನ ದರದಲ್ಲಿ ಅದನ್ನು ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಸಿಎನ್ಜಿ ಪೂರೈಕೆ ಮಾಡುವತ್ತ ಸಂಬಂಧಪಟ್ಟವರು ಗಮನಹರಿಸಬೇಕಿದೆ.












Click it and Unblock the Notifications