ಹೆಸರು ಅಶೋಕ ಪ್ಯಾರಡೈಸ್, ಕುಡಿಯಲು ಮಾತ್ರ ನೀರಿಲ್ಲ!
ಮಂಗಳೂರು, ಏಪ್ರಿಲ್ 25 : ಅತ್ಯಾಧುನಿಕ ಸೌಲಭ್ಯಗಳು ಸಿಗುತ್ತವೆ ಎಂದು ಫ್ಲ್ಯಾಟ್ ಪಡೆದ ಜನರು ಈಗ ಹನಿ ನೀರಿಗೂ ಪರದಾಡುವಂತಾಗಿದೆ. ಮಂಗಳೂರಿನ ಲ್ಯಾನ್ಸಿ ಕನ್ ಸ್ಟ್ರಕ್ಷನ್ ಅವರ ಅಶೋಕ ಪ್ಯಾರಡೈಸ್ ಅಪಾರ್ಟ್ಮೆಂಟ್ ನಿವಾಸಿಗಳು ಈಗ ಕನ್ ಸ್ಟ್ರಕ್ಷನ್ ಕಂಪನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಮಂಗಳೂರಿನ ಸುಲ್ತಾನ್ ಬತ್ತೇರಿ ಸಮೀಪ ಲ್ಯಾನ್ಸಿ ಕನ್ ಸ್ಟ್ರಕ್ಷನ್ ಕಂಪನಿ ಅಶೋಕ ಪ್ಯಾರಡೈಸ್ ಅಪಾರ್ಟ್ಮೆಂಟ್ ನಿರ್ಮಿಸಿದೆ. ಆದರೆ, ಈಲ್ಲಿನ ಫ್ಲ್ಯಾಟ್ಗಳಿಗೆ ನೀರು ಮತ್ತು ಮೂಲ ಸೌಕರ್ಯಗಳ ಕೊರತೆ ಇದೆ. ಇದರಿಂದ ಆಕ್ರೋಶಗೊಂಡಿರುವ ನಿವಾಸಿಗಳು ಪ್ರತಿಭಟನೆ ದಾರಿ ಹಿಡಿದಿದ್ದಾರೆ. [ಮಂಗಳೂರಿನಲ್ಲಿ ಈಗಲೇ ನೀರಿಲ್ಲ, ಇಂಚಾಂಡ ಎಂಚ!]

ಈ ಅಪಾರ್ಟ್ಮೆಂಟ್ ನಿರ್ಮಾಣವಾಗಿರುವುದು ಈಗಲ್ಲ. ಸುಮಾರು 220 ಫ್ಲ್ಯಾಟ್ಗಳನ್ನು ಹೊಂದಿರುವ ಅಶೋಕ ಪಾರಡೈಸ್ ನಿರ್ಮಾಣಗೊಂಡು 5 ವರ್ಷಗಳು ಕಳೆದಿವೆ. ಆದರೆ, ಇದುವರೆಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಿಲ್ಲ. ನೀರಿನ ಸಮಸ್ಯೆ ಮಾತ್ರವಲ್ಲದೇ ಭದ್ರತಾ ಸಿಬ್ಬಂದಿ, ಪಾರ್ಕಿಂಗ್ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಕಂಪನಿ ಒದಗಿಸಿಲ್ಲ. [ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬಾಟಲಿ ತೀರ್ಥಕ್ಕೂ ನೀರಿಲ್ಲ]
ಫ್ಲ್ಯಾಟ್ ಮಾರಾಟ ಮಾಡುವಾಗ ಜನರಿಗೆ ಕಟ್ಟಡ ನಿರ್ಮಾಣದ ಸ್ಕೆಚ್ ತೋರಿಸಿ ನಮ್ಮಲ್ಲಿ ಅತ್ಯಾಧುನಿಕ ಸೌಕರ್ಯಗಳಿದ್ದು ಜಿಮ್, ಉದ್ಯಾನವನ, ಮಕ್ಕಳ ಆಟದ ಮೈದಾನ ಮುಂತಾದ ವ್ಯವಸ್ಥೆಗಳು ಇರುತ್ತದೆ ಎಂದು ಕಂಪನಿ ಭರವಸೆ ನೀಡಿತ್ತು. ಆದರೆ, ಯಾವ ಸೌಲಭ್ಯಗಳನ್ನು ನೀಡಿಲ್ಲ ಎಂಬುದು ಜನರ ಆರೋಪ.
ಜನವರಿ ತಿಂಗಳಲ್ಲಿ ನಿವಾಸಿಗಳ ಜೊತೆ ಸಭೆ ನಡೆಸಿದ್ದ ಲ್ಯಾನ್ಸಿ ಕನ್ ಸ್ಟ್ರಕ್ಷನ್ನವರು ನೀವು ಯಾವುದಕ್ಕೂ ಚಿಂತಿಸದಿರಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಮಾಡಿಕೊಡುವುದಾಗಿ ಭರವಸೆ ಕೊಟ್ಟಿದ್ದರು. ನಂತರ ಕಂಪನಿಯ ಅಧಿಕಾರಿಗಳು ದುಬೈಗೆ ತೆರಳಿದ್ದು, ಇಲ್ಲಿನ ನಿವಾಸಿಗಳ ಗೋಳು ಕೇಳುವವರೇ ಇಲ್ಲವಾಗಿದೆ.
ಪ್ರತಿಭಟನೆ ನಡೆಸಿದರೆ ನೀರಿನ ಸೌಲಭ್ಯ, ಜನರೇಟರ್ ಸೌಕರ್ಯವನ್ನು ನಿಲ್ಲಿಸುತ್ತೇವೆ ಎಂದು ಕಂಪನಿಯವರು ನಿವಾಸಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಬೇರೆ ದಾರಿ ಕಾಣದೆ ಸುಮಾರು 600 ನಿವಾಸಿಗಳು ಉರ್ವಾ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.












Click it and Unblock the Notifications