ಮಂಗಳೂರನ್ನು ಸ್ವಚ್ಛ ನಗರವಾಗಿ ಮಾಡಲು ಸಚಿವರ ಪಣ
ಮಂಗಳೂರು, ಜ. 24 : ಸ್ವಚ್ಛತೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮಾದರಿಯಾಗಲು ಸರ್ಕಾರ ಎಲ್ಲಾ ರೀತಿಯ ನೆರವು ನೀಡಲಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ.
ಮಂಗಳೂರಿನ ಲಾಲ್ಬಾಗ್ ಬಳಿಯ ಕರಾವಳಿ ಉತ್ಸವ ಮೈದಾನದಲ್ಲಿ ನೂತನ ಘನ ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ಯೋಜನೆ ಉದ್ಘಾಟಿಸಿ ಶುಕ್ರವಾರ ಮಾತನಾಡಿದ ಅವರು, ಘನತ್ಯಾಜ್ಯ ವಿಲೇವಾರಿ ಎಲ್ಲ ಸ್ಥಳೀಯಾಡಳಿತಕ್ಕೂ ಬಹುದೊಡ್ಡ ಸವಾಲಾಗಿದೆ ಎಂದರು. [ಮಂಗಳೂರು ಪಾಲಿಕೆಗೆ ಕೊನೆಗೂ ಆಯುಕ್ತರ ನೇಮಕ]

ಸುರತ್ಕಲ್ ಬಳಿ ಒಟ್ಟು 588 ಕೋಟಿ ರೂ.ನ ಎರಡನೇ ಹಂತದ ಕುಡ್ಸೆಂಪ್ ಯೋಜನೆಯನ್ನು ಅಳವಡಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದು ಹೇಳಿದ ಅವರು, ಮೂರನೇ ಹಂತದ ನಗರೋತ್ಥಾನ ಕ್ರಿಯಾ ಯೋಜನೆಯೂ ಮಂಜೂರಾಗಿದೆ ಎಂದರು. [ಆಸ್ತಿ ತೆರಿಗೆ ಪಾವತಿಸಲು ಆನ್ ಲೈನ್ ವ್ಯವಸ್ಥೆ]
ಮಂಗಳೂರು ಮಹಾನಗರ ಪಾಲಿಕೆಗೆ 13ನೇ ಹಣಕಾಸು ಯೋಜನೆಯಲ್ಲಿ 40 ಕೋಟಿ ರೂ., ಎಸ್ಎಫ್ಸಿಯಲ್ಲಿ 22 ಕೋಟಿ ರೂ., ಸ್ಮಶಾನ ಮತ್ತು ಉದ್ಯಾನವನ ಅಭಿವೃದ್ಧಿಗೆ 2.5 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಗರಾಡಳಿತ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ, ಒಳಚರಂಡಿ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಮಹಾನಗರ ಪಾಲಿಕೆ ಮೇಯರ್ ಮಹಾಬಲ ಮಾರ್ಲ, ಆಯುಕ್ತೆ ಹೆಪ್ಸಿಬಾ ರಾಣಿ, ಶಾಸಕರಾದ ಜೆ.ಆರ್.ಲೋಬೋ, ಮೊಯ್ದೀನ್ ಬಾವ, ಉಪಮೇಯರ್ ಕವಿತಾ, ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಸ ಸಂಗ್ರಹಣೆಗೆ ವಿಶೇಷ ಯೋಜನೆ : ಮನೆ ಮನೆ ಕಸ ಸಂಗ್ರಹಕ್ಕೆ 55 ಮಿನಿ ಟಿಪ್ಪರ್, 700 ಸಿಬ್ಬಂದಿ, ಯಾಂತ್ರಿಕ ಕಸ ಗುಡಿಸುವ ವಾಹನ, ಚರಂಡಿ ಸ್ವಚ್ಛಗೊಳಿಸುವ ಮೂರು ಯಂತ್ರವನ್ನು ಪಾಲಿಕೆಗೆ ತರಲಾಗಿದೆ. ವಾರದ ಪ್ರತಿದಿನವೂ ಹಸಿ ಕಸವನ್ನು ಸಂಗ್ರಹಿಸಲಾಗುವುದು. ಪ್ರತಿ ಬುಧವಾರ ಸಾರ್ವಜನಿಕರು ಒಣಕಸವನ್ನು ಪ್ರತ್ಯೇಕವಾಗಿ ನೀಡಬಹುದು ಎಂದು ಪಾಲಿಕೆ ತಿಳಿಸಿದೆ. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]












Click it and Unblock the Notifications